'ಪಂಚಾಯಿತಿ ಫಲಿತಾಂಶ 2018ರ ಚುನಾವಣೆ ದಿಕ್ಸೂಚಿ'
ಮಂಗಳೂರು, ಫೆಬ್ರವರಿ 24 : 'ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ನೀಡಿದೆ' ಎಂದು ಜನಾರ್ದನ ಪೂಜಾರಿ ಹೇಳಿದರು. 'ಈ ಚುನಾವಣೆ ಫಲಿತಾಂಶ ಅಧಿಕಾರ ನಡೆಸುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪಾಠವಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು, 'ಕಾಂಗ್ರೆಸ್ಸಿಗರು ಅಧಿಕಾರದ ಮದವನ್ನು ತೋರಿಸಬಾರದು, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂಬುದನ್ನು ಫಲಿತಾಂಶ' ಹೇಳುತ್ತದೆ ಎಂದು ವಿಶ್ಲೇಷಿಸಿದರು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಸಾಧನೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ತವರು ಜಿಲ್ಲೆಯಲ್ಲಿಯೂ ಬಿಜೆಪಿ ಉತ್ತಮ ಸಾಧನೆ ಮಾಡಿಲ್ಲ. ನಾಯಕರು ರಾಜ್ಯದ ತುಂಬಾ ನಡೆಸಿದಷ್ಟು ಪ್ರಚಾರವನ್ನು ತವರು ಜಿಲ್ಲೆಯಲ್ಲಿ ನಡೆಸಿಲ್ಲ' ಎಂದು ಪೂಜಾರಿ ಹೇಳಿದರು. [ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ದೇಶದಲ್ಲಿ ಶಾಂತಿ ಕಾಪಾಡುತ್ತೀರಾ? : 'ದೇಶದ ರಾಜಧಾನಿಯಲ್ಲಿ ಶಾಂತಿ ಕಾಪಡಲಾಗದವರು ದೇಶದಲ್ಲಿ ಶಾಂತಿ ಕಾಪಡುತ್ತೀರಾ?' ಎಂದು ಜನಾರ್ದನ ಪೂಜಾರಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. 'ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಸಲಹೆ ನೀಡಿದರೆ ಅದನ್ನು ಬಿಜೆಪಿ ಪರಿಗಣಿಸುತ್ತಿಲ್ಲ' ಎಂದು ಆರೋಪಿಸಿದರು.
'ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಗುಜರಾತ್, ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದು ಸಂಘಪರಿವಾರದವರು ಎಂದು ಪಟೇಲ್ ಸಮುದಾಯದವರು ಬಾಯಿಬಿಟ್ಟಿದ್ದಾರೆ ಇದರ ಬಗ್ಗೆ ಪ್ರಧಾನಿಯವರು ಉತ್ತರ ನೀಡಬೇಕು' ಎಂದು ಪೂಜಾರಿ ಒತ್ತಾಯಿಸಿದರು.
'ಸಂಸತ್ತಿನಲ್ಲಿ ವಿರೋಧಪಕ್ಷದವರು ಮಾತನಾಡದಂತೆ ನಿಮ್ಮ ಪಕ್ಷದವರನ್ನು ಎತ್ತಿಕಟ್ಟಿದ್ದೀರಿ. ಆ ಮೂಲಕ ಸಂಸತ್ ಅಧಿವೇಶನ ನಡೆಯದಂತೆ ಮಾಡುತ್ತಿದ್ದೀರಿ. ಸಂಸತ್ನ ನಾಯಕರಾಗಿ ನೀವು ಹೀಗೆ ಮಾಡಿದರೆ ಅಧಿವೇಶನ ಸುಗಮವಾಗಿ ನಡೆಯುತ್ತದೆಯೇ?' ಎಂದರು.
ಅಂದಹಾಗೆ ಮಂಗಳವಾರದಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಫೆ.25ರಂದು ರೈಲ್ವೆ ಬಜೆಟ್ ಮತ್ತು ಫೆ.29ರಂದು ಸಾಮಾನ್ಯ ಬಜೆಟ್ ಮಂಡನೆ ಮಾಡಲಾಗುತ್ತದೆ.












Click it and Unblock the Notifications