ಮಂಗಳೂರಿನಲ್ಲಿ ಯುವತಿಗೆ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮಂಗಳೂರು, ಜೂನ್ 29: ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋರ್ವ ಬರ್ಬರವಾಗಿ ಚೂರಿಯಿಂದ ಇರಿದು, ಬಳಿಕ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ನಡೆದಿದೆ.
ದೇರಳಕಟ್ಟೆಯ ಬಗಂಬಿಲ ಸಮೀಪ ಶುಕ್ರವಾರ ಸಂಜೆ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬ ಯುವಕ ಬಗಂಬಿಲ ನಿವಾಸಿ ವಿದ್ಯಾರ್ಥಿನಿ ದೀಕ್ಷಾ ಎಂಬುವಳಿಗೆ ಚೂರಿಯಿಂದ ಇರಿದು ತಾನೂ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ನರಳುತ್ತಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಶಾಂತ್ ಹಾಗೂ ದೀಕ್ಷಾ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳಿಂದ ಸುಶಾಂತ್ ನನ್ನು ನಿರಾಕರಿಸಿದ್ದ ಯುವತಿಯ ವಿರುದ್ಧ ಸುಶಾಂತ್ ಕೋಪಗೊಂಡಿದ್ದ. ಎರಡು ದಿನಗಳ ಹಿಂದೆಯೇ ದೀಕ್ಷಾ ಮೇಲೆ ದಾಳಿ ನಡೆಸಲು ಸುಶಾಂತ್ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಕೃತ್ಯ ಎಸಗುವ ಮೊದಲು ಸುಶಾಂತ್ ಗಾಂಜಾ ಸೇವಿಸಿದ್ದ ಎಂದು ಮೂಲಗಳು ತಿಳಿಸಿವೆ.

ಸುಶಾಂತ್ 50 ಸಾವಿರ ರೂಪಾಯಿ ಖರ್ಚು ಮಾಡಿ ಈಚೆಗಷ್ಟೇ ಯುವತಿಯ ಹುಟ್ಟಿದ ಹಬ್ಬ ಆಚರಿಸಿದ್ದ. ಹುಟ್ಟುಹಬ್ಬದ ಮರುದಿನವೇ ಯುವತಿ, ಸುಶಾಂತ್ ನಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ನಿನ್ನೆ ಮಧ್ಯಾಹ್ನ ದವರೆಗೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುಶಾಂತ್, ಸಂಜೆ ಈ ಕೃತ್ಯ ಎಸಗಿದ್ದಾನೆ. ಸುಮಾರು 12 ಬಾರಿ ಯುವತಿಗೆ ಚೂರಿಯಿಂದ ಇರಿದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ.












Click it and Unblock the Notifications