ಅಂಗಡಿಗೆ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಅನ್ಯಕೋಮಿನ ಯುವಕ ಬಂಧನ
ಮಂಗಳೂರು, ಸೆಪ್ಟೆಂಬರ್ 15: ದಿನಸಿ ವಸ್ತು ಖರೀದಿಗೆ ಬಂದ ಮಹಿಳೆಯೋರ್ವರ ಮೇಲೆ ಅನ್ಯಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರಿನಲ್ಲಿ ಮತ್ತೆ ಬೂದಿ ಮುಚ್ಚಿದ ಕೆಂಡದ ವಾತಾವರಣವನ್ನು ನಿರ್ಮಿಸಿದೆ.
ಪುತ್ತೂರು ತಾಲೂಕಿನ ತಿಂಗಳಾಡಿಯ ದಿನಸಿ ಅಂಗಡಿಗೆ ಮಹಿಳೆಯೋರ್ವರು ತೆರಳಿದ್ದು,ಈ ವೇಳೆ ಅಂಗಡಿಯಲ್ಲಿದ್ದ ಅನ್ಯ ಕೋಮಿನ ಯುವಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದು, ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬುಧವಾರ ಸಂಜೆ ವೇಳೆಗೆ ಘಟನೆ ನಡೆದಿದ್ದು, ರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಿಂಗಳಾಡಿ ಪೇಟೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆ ಮಾಡಿದ್ದರು.
ಲಿಖಿಂಪುರಖೇರಿಯಲ್ಲಿ ದಲಿತ ಬಾಲಕಿಯರ ಹತ್ಯೆ ಪ್ರಕರಣ: 6 ಮಂದಿ ಬಂಧನ
ಪುತ್ತೂರಿನ ಸರ್ವೇ ನಿವಾಸಿ ಬದ್ರುದ್ದೀನ್ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಆರೋಪಿಯನ್ನು ಶೀಘ್ರ ಬಂಧನ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಎಂಟು ಗಂಟೆಯ ಒಳಗೆ ಆರೋಪಿಯನ್ನು ಬಂಧನ ಮಾಡದಿದ್ದಲ್ಲಿ ತಿಂಗಳಾಡಿ ಬಂದ್ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಘಟನೆ ನಡೆದ ನಾಲ್ಕು ಗಂಟೆಯ ಒಳಗಾಗಿ ಬಂಧಿಸಿದ್ದಾರೆ. ಆದರೂ ಹಿಂದೂ ಸಂಘಟನೆಗಳು ಗುರುವಾರ ತಿಂಗಳಾಡಿಯಲ್ಲಿ ಪ್ರತಿಭಟನೆ ಮಾಡಿದೆ. ಮಹಿಳೆಯ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಈ ರೀತಿಯ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.
ತಿಂಗಳಾಡಿಯ ಮುಖ್ಯರಸ್ತೆಯಿಂದ ಜಾಥಾ ಮಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಿಂಗಳಾಡಿ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಎಲ್ಲಾ ವರ್ತಕರು ಅರ್ಧಗಂಟೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ತಿಂಗಳಾಡಿ ಜಂಕ್ಷನ್ನಲ್ಲಿ ಪ್ರತಿಭಟನಾ ಸಭೆ ಮಾಡಿದ ಹಿಂದೂ ಸಂಘಟನೆಯ ಮುಖಂಡರುಗಳಾದ ಮುರಳೀಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ, ಚಿನ್ಮಯಿ ಈಶ್ವರಮಂಗಲ, ಬೂಡಿಯಾರ್ ರಾಧಾಕೃಷ್ಣ ರೈ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆರೋಪಿಯನ್ನು ಘಟನೆ ನಡೆದು 4 ಗಂಟೆಯೊಳಗೆ ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಹಿಂದೂ ಸಂಘಟನೆಯ ಪ್ರಮಖರು, ಈಗಾಗಲೇ ಹಲವು ಕಡೆಗಳಲ್ಲಿ ಹಿಂದೂ ಸಮಾಜದ ಮೇಲೆ ಮತಾಂಧ ಶಕ್ತಿಗಳಿಂದ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಮತ್ತು ಹಿಂದೂ ಸಮಾಜದ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.