ಎತ್ತಿನಹೊಳೆ ಯೋಜನೆ; ಕಟೀಲ್ ನಿಲುವು ಬಗ್ಗೆ ಕರಾವಳಿಗರ ಪ್ರಶ್ನೆ
ಮಂಗಳೂರು, ಸೆಪ್ಟೆಂಬರ್, 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎತ್ತಿನಹೊಳೆ ಯೋಜನೆಯ ಬಗ್ಗೆ ಆಕ್ರೋಶ ಕೇಳಿಬಂದಿದೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಮಾಡಿದ್ದರು.
ಆದರೆ ಇದೀಗ ಎತ್ತಿನ ಹೊಳೆ ಯೋಜನೆ ನಮ್ಮದೇ ಕೊಡುಗೆ ಎಂಬ ಘೋಷಣೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡೆಗೆ ಕರಾವಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ವಿಚಾರದಲ್ಲಿ ನಳಿನ್ ಕುಮಾರ್ ಕಟೀಲ್ ನಿಲುವು ಏನು? ಎಂಬುದನ್ನು ತಿಳಿಸಲಿ ಎಂದು ಜನರ ಆಗ್ರಹವಾಗಿದೆ.
ಎತ್ತಿನಹೊಳೆ ಯೋಜನೆ ವಿರೋಧಿಸಿ 2015 ಅಕ್ಟೋಬರ್ ತಿಂಗಳಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬೃಹತ್ ಹೋರಾಟ ಕೈಗೊಂಡಿದ್ದರು. ಮಂಗಳೂರಿನಿಂದ ಹಾಸನ ಗಡಿಯವರೆಗೆ ಪಾದಯಾತ್ರೆ ಮಾಡಿದ್ದರು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಹಣದ ಲಾಭ ಗಳಿಸಲು ಮಾಡುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಯೋಜನೆ ನಿಲ್ಲಿಸದಿದ್ದಲ್ಲಿ ಆಯೋಧ್ಯೆ ಮಾದರಿಯಲ್ಲಿ ಯೋಜನೆಯನ್ನು ಕರಸೇವೆ ಮೂಲಕ ಪುಡಿಗಟ್ಟುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಉಲ್ಟಾ ಹೊಡೆದಿದ್ದು ಮುಜುಗರಕ್ಕೆ ಒಳಗಾಗಿದ್ದಾರೆ.

ಕರಾವಳಿಗರ ಕೆಂಗಣ್ಣಿಗೆ ಗುರಿಯಾದ ಸರ್ಕಾರ
ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಎತ್ತಿನ ಹೊಳೆ ಯೋಜನೆ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಆದಿಯಾಗಿ ಕರಾವಳಿಯ ಬಿಜೆಪಿ ನಾಯಕರು ಸಂಪೂರ್ಣ ಯೂಟರ್ನ್ ಆಗಿದ್ದಾರೆ. ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿಯ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎತ್ತಿನ ಹೊಳೆ ಯೋಜನೆ ನಮ್ಮಕೊಡುಗೆ ಎಂದು ಘೋಷಣೆ ಮಾಡಿದ್ದರು. ಸಿಎಂ ಬೊಮ್ಮಾಯಿ ಅವರ ಹೇಳಿಕೆ ಕರಾವಳಿಗರ ಜನರ ಕೆಂಗಣ್ಣಿಗೆ ಗುರಿಯಾಗಿದೆ.

"ಇದು ಹಣ ಕೊಳ್ಳೆ ಹೊಡೆಯುವ ಯೋಜನೆ"
ನೇತ್ರಾವತಿ, ಕುಮಾರಾಧಾರಾ ನದಿಗೆ ಸೇರುವ ಸಣ್ಣ ನೀರಿನ ಸೆಳೆಗಳನ್ನು ತಿರುಗಿಸಿ ಬಯಲು ಸೀಮೆಗೆ ಹರಿಸುವ ಎತ್ತಿನ ಹೊಳೆ ಯೋಜನೆ ಇದಾಗಿದೆ. ಈ ಯೋಜನೆಯಿಂದ 400 ಟಿಎಂಸಿಗೂ ಅಧಿಕ ನೀರನ್ನು ಬಯಲುಸೀಮೆಗೆ ಹರಿಸುವ ಯೋಜನೆ ಇದು ಅನ್ನುವುದ ಸರ್ಕಾರದ ವಾದ ಆಗಿದೆ. ಕಾಡುಮನೆಯಿಂದ 264 ಕಿಲೋ ಮೀಟರ್ ಪೈಪ್ ಲೈನ್ ಹಾಕಿ ನೀರು ಹರಿಸುವ ಎತ್ತಿನ ಹೊಳೆ ಯೋಜನೆ ಇದಾಗಿದೆ. ಈಗಾಗಲೇ ಸಕಲೇಶಪುರ, ಕಾಡುಮನೆ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಗುಡ್ಡ ಜರಿದು ಕಾಮಗಾರಿ ನಡೆಯುತ್ತಿದೆ. ಈ ಯೋಜನೆಯಿಂದ ಬಯಲು ಸೀಮೆಗೆ ನೀರು ಹೋಗಲ್ಲ,ಇದು ಹಣ ಕೊಳ್ಳೆ ಹೊಡೆಯುವ ಯೋಜನೆ ಎಂದು ಕರಾವಳಿಯ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಹಣ ತೆಗೆಯುವ ಎಟಿಎಂ
ಈ ಯೋಜನೆಗೆ ಬಯಲು ಸೀಮೆಯ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಗ ಇದಕ್ಕೆ ವಿರೋಧ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಇದೀಗ ಯೋಜನೆ ಪರ ನಿಂತಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕಾರಣಿಗಳಿಗೆ ಎತ್ತಿನಹೊಳೆ ಯೋಜನೆ ಹಣ ತೆಗೆಯುವ ಎಟಿಎಂ ಆಗಿದೆ ಎಂದು ಮಂಗಳೂರಿನ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳಿದ್ದಾರೆ.

ಈಗ ಯೋಜನೆ ನಿಲ್ಲಿಸಲಿ ಎಂದು ಸವಾಲ್
ಎತ್ತಿನಹೊಳೆ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ನಿಲುವನ್ನು ಹೇಳುವಂತೆ ಮಂಗಳೂರಿನ ನಾಗರಿಕರು ಆಗ್ರಹಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆ ಬಗ್ಗೆ ತಮ್ಮ ನಿಲುವುವನ್ನು ಹೇಳಬೇಕು. ಈಗ ಅವರಿಗೆ ಯೋಜನೆ ನಿಲ್ಲಿಸುವ ಎಲ್ಲಾ ಅಧಿಕಾರ ಇದೆ. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಆಗ ಎತ್ತಿನ ಹೊಳೆ ಯೋಜನೆ ನಿಲ್ಲಿಸಬೇಕೆಂದು ಆಗ್ರಹಿಸಿದ್ದ ಅವರು ಈಗ ಮೌನವಾಗಿರುವುದು ಯಾಕೆ? ನಳಿನ್ ಕುಮಾರ್ ಕಟೀಲ್ ಜನರಿಗೆ ಉತ್ತರ ನೀಡಬೇಕು ಎಂದು ಮಂಗಳೂರಿನಲ್ಲಿ ಸಾಮಾಜಿಕ ಹೋರಾಟ ಜೆರಾಡ್ಡ್ ಟವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications