ನಮಗೆ ನೀರಿಲ್ಲ ಬೇರೆಯವರಿಗೆ ನೀಡುವುದು ಹೇಗೆ?
ಮಂಗಳೂರು, ಜು.4: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಕೃಷಿ ಆಧಾರಿತ ಉದ್ದಿಮೆಗಳನ್ನು ಆಕರ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಕೃಷಿ ವಲಯ (ಎಸ್ಎಝೆಡ್) ಸ್ಥಾಪನೆಗೆ ಒತ್ತು ನೀಡುವುದಾಗಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ತಮ್ಮ ನೂತನ ಕಚೇರಿಯ ಉದ್ಘಾಟನೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಸರ್ಕಾರವು ಸ್ವಾಧೀನ ಪಡಿಸಿರುವ ಎಸ್ಇಝೆಡ್ನಡಿ ಪ್ರಸ್ತುತ ಮೂರು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನಷ್ಟು ಕಂಪನಿಗಳು ಬರಬೇಕು. ಆ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.

ಪ್ರಸ್ತುತ ನಮಗೆ ನೀರಿಲ್ಲ ಬೇರೆಯವರಿಗೆ ನೀಡುವುದು ಹೇಗೆ?
ಎತ್ತಿನ ಹೊಳೆ ಯೋಜನೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ದ.ಕ. ಜಿಲ್ಲೆಯ ಜೀವನಾಡಿ ನೇತ್ರಾವತಿ. ಇಲ್ಲಿನ ಜನರ ನೀರಿನ ಸಮಸ್ಯೆ ನೀಗಿಸಿ ಇತರರಿಗೆ ಕೊಡುವುದರಲ್ಲಿ ಅಭ್ಯಂತರವಿಲ್ಲ. ಆದರೆ ಪ್ರಸ್ತುತ ಮಂಗಳೂರಿನ ಜನರಿಗೇ ಕುಡಿಯಲು ನೀರಿಲ್ಲ. ಇಂತಹ ಸಂದರ್ಭ ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಮಧ್ಯ ಪ್ರವೇಶ ಮಾಡುವಂತೆ ಕೇಂದ್ರ ಸಚಿವರಾದ ಉಮಾಭಾರತಿಯವರ ಗಮನಕ್ಕೆ ಸೆಳೆದಿರುವುದಾಗಿ ಅವರು ಹೇಳಿದರು.

ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಲಯ ಓಪನ್
ಎರಡನೇ ಅವಧಿಗೆ ಸಂಸದನಾಗಿ ಆಯ್ಕೆಯಾದ ಮೇಲೆ ಗ್ರಾಮ ಪ್ರವಾಸ, ಗ್ರಾಮ ದರ್ಶನ ಮೂಲಕ ಈಗಾಗಲೇ ಎಂಟು ಕ್ಷೇತ್ರಗಳ ಜಿಲ್ಲಾ ಪಂಚಾಯತ್ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಸಾರ್ವಜನಿಕ ಸಮಸ್ಯೆ, ಅಹವಾಲು ಸ್ವೀಕಾರಕ್ಕೆ ಈ ಕಾರ್ಯಾಲಯ ಮುಕ್ತವಾಗಿದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಲಯ ತೆರೆದಿರುತ್ತದೆ ಎಂದವರು ಹೇಳಿದರು.

ಮಂಗಳೂರು ಸುಬ್ರಹ್ಮಣ್ಯ ಇಂಟರ್ ಸಿಟಿ ರೈಲು
ಮುಂಬರುವ ರೈಲ್ವೇ ಬಜೆಟ್ ನಲ್ಲಿ ಕಾಸರಗೋಡು- ಮಂಗಳೂರು ಉಡುಪಿ ಹಾಗೂ ಮಂಗಳೂರು ಸುಬ್ರಹ್ಮಣ್ಯ ಇಂಟರ್ ಸಿಟಿ ರೈಲು ಬೇಡಿಕೆ ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದರು.

ನೂತನ ಕಚೇರಿ ಉದ್ಘಾಟನೆ
ಸಂಸದರ ನೂತನ ಕಚೇರಿಯನ್ನು ಚಿಕ್ಕಮಗಳೂರಿನ ವೇದವಿಜ್ಞಾನ ಕೇಂದ್ರದ ಬ್ರಹ್ಮಶ್ರೀ ನಿತ್ಯಾನಂದ ಸ್ವಾಮೀಜಿ ನೆರವೇರಿಸಿದರು. ಈ ಸಂದರ್ಭ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ನಾಗರಾಜ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈಲು ಟಿಕೆಟ್
ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಾಯ್ದಿರಿಸುವಲ್ಲಿ ಜನಸಂದಣಿಯ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ತೆರೆಯಲಾಗಿದ್ದು, ಪಾಲ್ಘಾಟ್ ವಿಭಾಗದಿಂದ ಕರ್ನಾಟಕದಲ್ಲಿ ತೆರೆಯಲಾದ ಪ್ರಥಮ ಕೌಂಟರ್ ಇದಾಗಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.












Click it and Unblock the Notifications