'ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರಕ್ಕೆ ಎಟಿಎಂ ಇದ್ದಂತೆ'
ಮಂಗಳೂರು, ಜೂನ್ 03: ಜಿಂದಾಲ್ ಕಂಪನಿಗೆ 3666 ಎಕರೆ ಭೂಮಿಯನ್ನು ಪುಡಿಗಾಸಿಗೆ ಮಾರಾಟ ಮಾಡುವ ಅಗತ್ಯವಿದೆಯೇ? ಈ ಪ್ರಕರಣದಲ್ಲಿ ಸಚಿವ ಸಂಪುಟದ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿಂದಾಲ್ ಕಂಪನಿ 1500 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದೆ. 5000 ಕೋಟಿ ಮೌಲ್ಯದ ಭೂಮಿಯನ್ನು ಕೇವಲ 35 ಕೋಟಿಗೆ ಮಾರುತ್ತಿದ್ದಾರೆ. ಈ ಪ್ರಕರಣದಲ್ಲಿ ಸಚಿವ ಸಂಪುಟದ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ ಎಂದು ಹೇಳಿದರು.
ಸತ್ತ ಸರ್ಕಾರಕ್ಕೆ ಆಮ್ಲಜನಕ ತುಂಬ್ತಿದ್ದಾರೆ- ಕೋಟ ಶ್ರೀನಿವಾಸ್ ಪೂಜಾರಿ
ಈ ಕುರಿತು ಎಚ್.ಕೆ ಪಾಟೀಲ್, ಇದು ಆತಂಕಕಾರಿ ಬೆಳವಣಿಗೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರವನ್ನು ಕಡೆಗಣಿಸಿ ಮೊಂಡುತನ ಪ್ರದರ್ಶನ ಮಾಡ್ತಿದಾರೆ ಎಂದು ಆರೋಪಿಸಿದರು. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದು ಈ ಭೂಮಿ ಮಾರಾಟ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಭೂಮಿ ಲೀಸ್ ಕೊಡುವುದಕ್ಕೆ ಅವಕಾಶ ಇದೆ, ಮಾರಾಟ ಮಾಡಬೇಕಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ವಿವಾದಿತ ಎತ್ತಿನಹೊಳೆ ಯೋಜನೆ ರಾಜ್ಯ ಸರಕಾರಕ್ಕೆ ಎಟಿಎಂ ಇದ್ದಂತೆ. ಈ ಯೋಜನೆಗೆ ಈವರಗೆ 6000 ಕೋಟಿ ಖರ್ಚು ಮಾಡಿದ್ದು, ಇದರಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ದೊಡ್ಡ ನೀರಾವರಿ ಯೋಜನೆಗಳೆಲ್ಲ ಹಣ ಮಾಡುವ ಯೋಜನೆಗಳಾಗಿವೆ ಎಂದು ಕಿಡಿಕಾರಿದರು.
ಪಂಚಕರ್ಮ, 'ಪಂಚ' ತಂತ್ರದ ಜೊತೆ ಸಮರೋಪಾದಿ ಕೆಲಸ ಮಾಡಿ:ಸಿಎಂಗೆ ಕುಟುಕಿದ ಕೋಟ
ಯೋಜನೆ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದ ಸಿಎಂ, ಮತ್ತಷ್ಟು ಹಣ ಬಿಡುಗಡೆ ಮಾಡ್ತಿದಾರೆ. ಕರಾವಳಿಯಲ್ಲಿ ಕುಡಿಯುವ ನೀರಿಗೆ ಬರ ಬಂದಿರುವ ವಿಚಾರವನ್ನು ಪರಿಗಣಿಸಿ, ಎರಡು ಜಿಲ್ಲೆಗಳ ಶಾಸಕರು ಸೇರಿ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ. ಬರ ನೀಗಿಸಲು ಬದಲಿ ಯೋಜನೆಗಾಗಿ ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.