ಯಕ್ಷಲೋಕದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ
ಮಂಗಳೂರು, ಅಕ್ಟೋಬರ್ 12: ದಕ್ಷಿಣ ಕನ್ನಡ ಜಿಲ್ಲೆಯ ತೆಂಕುತಿಟ್ಟಿನ ಯಕ್ಷಗಾನದ ಅಗ್ರಮಾನ್ಯ ಭಾಗವತ ಪದ್ಯಾಣ ಗಣಪತಿ ಭಟ್ (66) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಗಣಪತಿ ಭಟ್, ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
'ಯಕ್ಷರತ್ನ' ಬಿರುದಿಗೆ ಭಾಜನರಾಗಿದ್ದ ಪದ್ಯಾಣ ಗಣಪತಿ ಭಟ್ ಯಕ್ಷಗಾನ ವಂಶಪಾರಂಪರ್ಯವಾಗಿ ಕರಗತಮಾಡಿಕೊಂಡ ಕಲೆಯಾಗಿದೆ. ಪದ್ಯಾಣರವರ ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳ ವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ.
ಪದ್ಯಾಣ ತಿರುಮಲೇಶ್ವರ ಭಟ್- ಸಾವಿತ್ರಿ ದಂಪತಿಗಳ ಸುಪುತ್ರರಾಗಿ ಜನಿಸಿದ ಗಣಪತಿ ಭಟ್ಗೆ ಮನೆಯೇ ಮೊದಲ ಯಕ್ಷಗಾನ ಪಾಠ ಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಹದಿನೈದರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದರು. ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನ ಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸರಾಗ ಸಂಯೋಜನೆ ಮಾಡಿದ್ದಾರೆ.
1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಇವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರರಾಜ್ಯಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ. ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಇವರು, ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ.
ಮತ್ತೊರ್ವ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆಯಂತಹ ಯುವ ಭಾಗವತರು ಇವರ ಗರಡಿಯಲ್ಲಿ ಸಿದ್ಧಗೊಂಡಿದ್ದಾರೆ. ನಿಡುಗಾಲದ ಯಕ್ಷಗಾನಕ್ಕೆ ಪುರಸ್ಕಾರ ರೂಪವಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತಮ ಶಾರೀರ ಹೊಂದಿದ ಪದ್ಯಾಣ ಗಣಪತಿ ಭಟ್, ವಾಸಂತಿ, ಸಿಂಹೇಂದ್ರ ಮಧ್ಯಮ, ರೇವತಿ ಮುಂತಾದ ಅಪೂರ್ವ ರಾಗಗಳನ್ನು ಯಕ್ಷಗಾನಕ್ಕೆ ಬಳಸಿದ ಪ್ರಥಮ ಭಾಗವತರಾಗಿದ್ದಾರೆ.
ಪದ್ಯಾಣ ಗಣಪತಿ ಭಟ್ ಗಾನ ಗಂಧರ್ವ ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದಲೂ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಖಾಸಗಿ ಚಾನೆಲ್ನಲ್ಲಿ ನಡೆಸುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪದ್ಯಾಣ ಗಣಪತಿ ಭಟ್ರವರಿಗೆ ಭಾಗವತಿಕೆ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಪದ್ಯಾಣ ಗಣಪತಿ ಭಟ್ರವರ ಭಾಗವತಿಕೆಗೆ ಸ್ವತಃ ಎಸ್ಪಿಬಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿಮ್ಮ ತರಹ ಹಾಡುವುದಕ್ಕೆ ನನಗೆ ಬರಲ್ಲ. ನಮಗೆ ಮೈಕ್ ಇಲ್ಲದೇ ಹಾಡುವುದಕ್ಕೆ ಆಗಲ್ಲ. ನಿಮ್ಮ ಹಾಡುವಿಕೆಗೆ ಮೈಕ್ ಬೇಕಂತಿಲ್ಲ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪದ್ಯಾಣ ಗಣಪತಿ ಭಟ್ರರನ್ನು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆ ಮಾಡಿಕೊಂಡಿದ್ದರು. ಸಂಗೀತ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದ ಯಕ್ಷಗಾನ ಕ್ಷೇತ್ರದ ಮೊದಲ ಭಾಗವತ ಎಂಬ ಹೆಗ್ಗಳಿಕೆಗೆ ಪದ್ಯಾಣ ಗಣಪತಿ ಭಟ್ ಪಾತ್ರರಾಗಿದ್ದರು.
ಸಿಎಂ
ಬೊಮ್ಮಾಯಿ
ಸಂತಾಪ
"ಯಕ್ಷಗಾನ
ಕಲಾ
ಕ್ಷೇತ್ರದಲ್ಲಿ
ತಮ್ಮ
ಕಂಚಿನ
ಕಂಠದಿಂದ
ಜನಮೆಚ್ಚಿದ
ಭಾಗವತರಾದ
ಪದ್ಯಾಣ
ಗಣಪತಿ
ಭಟ್ರವರ
ಅಗಲಿಕೆಯಿಂದ
ಸಾಂಸ್ಕೃತಿಕ
ರಂಗಕ್ಕೆ
ಭರಿಸಲಾರದ
ನಷ್ಟವಾಗಿದೆ.
ನಾಲ್ಕು
ದಶಕಗಳ
ಕಾಲ
ಯಕ್ಷಗಾನ
ಕ್ಷೇತ್ರದಲ್ಲಿ
ಸೇವೆ
ಸಲ್ಲಿಸಿದ
ಪದ್ಯಾಣ
ಗಣಪತಿ
ಭಟ್ಅವರ
ಆತ್ಮಕ್ಕೆ
ಶಾಂತಿ
ಕೋರುತ್ತೇನೆ,"
ಎಂದು
ಸಿಎಂ
ಬಸವರಾಜ
ಬೊಮ್ಮಾಯಿ
ಟ್ವೀಟ್
ಮೂಲಕ
ಸಂತಾಪ
ಸೂಚಿಸಿದ್ದಾರೆ.