ಕೊಂಕಣಿ ಕೇಂದ್ರದಿಂದ 3.5 ಕೋಟಿ ರೂ. ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು, ಆಗಸ್ಟ್ 18: ವಿವಿಧ ಶೈಕ್ಷಣಿಕ ಶ್ರೇಣಿಗಳಲ್ಲಿ ಅಧ್ಯಯನ ಮಾಡುತ್ತಿರುವ ಕೊಂಕಣಿ ಭಾಷಿಕ ವಿದ್ಯಾರ್ಥಿಗಳು 3.5 ಕೋಟಿ ರೂ. ಮೌಲ್ಯದ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯಿಂದ ಈ ಸಹಾಯಧನ ನೀಡಲಾಗುತ್ತಿದೆ.
ಕೊಂಕಣಿ ಭಾಷೆಯು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನವನ್ನು ಪಡೆದುಕೊಂಡ 25 ನೇ ವರ್ಷದ ಸಂಭ್ರಮಾಚರಣೆಯ ದಿನವಾದ ಆಗಸ್ಟ್ 20, 2015ರ ಪೂರ್ವಾಹ್ನ ಗಂಟೆ 10.00 ಕ್ಕೆ ಕೊಡಿಯಾಲಬೈಲಿನ ಶ್ರೀ ಟಿ.ವಿ.ರಮಣ ಪೈ ಕನ್ವೆನ್ಶನ್ ಹಾಲ್ನಲ್ಲಿ ಈ ಪುರಸ್ಕಾರ ವಿತರಣೆ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಟಿ.ವಿ. ಮೋಹನದಾಸ್ ಪೈಯವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಟಾಟಾ ಸಮೂಹ ಸಂಸ್ಥೆಗಳ ಬ್ರಾಂಡ್ ಕಸ್ಟೋಡಿಯನ್, ಟಾಟಾ ಗ್ಲೋಬಲ್ ಬೆವರೆಜಸ್ ಮತ್ತು ಟಾಟಾ ಕಾಫೀ ಲಿಮಿಟೆಡ್ನ ಅಧ್ಯಕ್ಷರಾಗಿರುವ ಶ್ರೀ ಹರೀಶ ಭಟ್ ರವರು ಮೊದಲ ವಿದ್ಯಾರ್ಥಿ ವೇತನವನ್ನು ವಿತರಿಸಲಿದ್ದಾರೆ.
ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ
ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯು ಉನ್ನತ ಶಿಕ್ಷಣ ಪಡೆಯುವ ಆಕಾಂಕ್ಷೆ ಇರುವ ಆರ್ಥಿಕವಾಗಿ ಹಿಂದುಳಿದಿರುವ ಕೊಂಕಣಿ ಭಾಷಿಕ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕಲ್ಪಿಸುತ್ತದೆ.
ಪ್ರಸಿದ್ಧ ಕಾರ್ಪೋರೇಟ್ ನಾಯಕ ಟಿ. ವಿ. ಮೋಹನದಾಸ್ ಪೈಯವರ ಈ ಚಿಂತನೆಯ ಫಲವಾಗಿ 2010ರಲ್ಲಿ ಸ್ಥಾಪಿತವಾಗಿರುವ ಈ ನಿಧಿಯಿಂದ ಕಳೆದ ಮೂರು ವರ್ಷಗಳಲ್ಲಿ ರೂಪಾಯಿ 15 ಕೋಟಿ ಮೊತ್ತವನ್ನು 14000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ಪ್ರಸಕ್ತ ವರ್ಷದಲ್ಲಿ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯು ಸುಮಾರು 3 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸುವುದರೊಂದಿಗೆ ಒಂದು ಬೃಹತ್ ವಿದ್ಯಾರ್ಥಿ ನಿಧಿ ಯೋಜನೆಯಾಗಿ ಬೆಳೆದಿದೆ.
ಕೊಂಕಣಿ ಸಮುದಾಯದ ಟಿ.ವಿ.ಮೋಹನದಾಸ ಪೈ, ಡಾ. ರಂಜನ್ ಪೈ, ರಾಮದಾಸ ಕಾಮತ್ ಯು., ಕೆ.ವಿ.ಕಾಮತ್, ಎಂ. ಜಗನ್ನಾಥ ಶೆಣೈ, ಡಾ. ದಯಾನಂದ ಪೈ, ರೊನಾಲ್ಡ್ ಕೊಲಾಸೋ, ಮೇಡಂ ಗ್ರೇಸ್ ಪಿಂಟೋ, ಎ. ಅಣ್ಣಪ್ಪ ಕಾಮತ್, ರೋಹನ್ ಮೊಂಟೆರೋ, ಅಚ್ಯುತ ಪೈ, ಪ್ರದೀಪ ಪೈ, ಜಗದೀಶ ಕಿಣಿ, ಸಂದೀಪ ಎಸ್. ಶೆಣೈ, ಗೋಕುಲನಾಥ ಪ್ರಭು, ಅರವಿಂದ ರಾವ್, ಬಿ.ಆರ್.ಭಟ್ ಮೊದಲಾದ ಹಲವು ದಾನಿಗಳ ದೇಣಿಗೆಯಿಂದ ಈ ನಿಧಿಯು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಅನೇಕ ದಾನಿಗಳು ಕೈಜೋಡಿಸಿ ಈ ನಿಧಿಯನ್ನು ಬೆಳೆಸಿದ್ದಾರೆ.
ಯೋಜನೆಗಳು
ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯು ವಿವಿಧ ಶೈಕ್ಷಣಿಕ ಶ್ರೇಣಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಪ್ರಮುಖವಾಗಿ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಕೈಗೊಳ್ಳುವ ವಿದ್ಯಾರ್ಥಿಗಳಿಗೆ ರೂ. 30,000 ಮತ್ತು ರೂ. 40,000 ಅನುಕ್ರಮವಾಗಿ ಪ್ರತಿ ವರ್ಷ ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮದಡಿಯಲ್ಲಿ 3356 ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ.
ಪ್ರಸಕ್ತ ವರ್ಷ 592 ಇಂಜಿನಿಯರಿಂಗ್ ಮತ್ತು 53 ಎಂಬಿಬಿಎಸ್ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ವಿದೇಶಗಳಲ್ಲಿನ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳಬಯಸುವ ವಿದ್ಯಾರ್ಥಿಗಳಿಗೆ ರೂ 1.00 ಲಕ್ಷ ಮೊತ್ತದ ವಿದೇಶ ವ್ಯಾಸಾಂಗ ಯೋಜನೆಯಡಿಯಲ್ಲಿ ಇದುವರೆಗೆ 39 ವಿಸ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಈ ವರ್ಷವೂ 31 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿವೇತನ ಗಳಿಸುವ ಪ್ರತೀಯೋರ್ವ ವಿದ್ಯಾರ್ಥಿಯೂ ನಿಯಮಿತವಾಗಿ ನಡೆಸಲ್ಪಡುವ ಕ್ಷಮತಾ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಳ್ಳುಬೇಕು. ಕಳೆದ ಐದು ವರ್ಷಗಳಲ್ಲಿ ಕ್ಷಮತಾ ಅಕಾಡೆಮಿಯು ಸುಮಾರು 20000 ಮಾನವ ದಿನಗಳಷ್ಟು ತರಬೇತಿಯನ್ನು ವಿವಿಧ ತರಬೇತಿ ಕಾರ್ಯಕ್ರಮಗಳಡಿಯಲ್ಲಿ ನೀಡಿದೆ.
ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ನಿರ್ವಹಣೆ
ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯು ಧೀಮಂತ ವ್ಯಕ್ತಿಗಳ ಒಂದು ಸಮಿತಿಯ ಮೂಲಕ ನಿರ್ವಹಿಸಲ್ಪಡುತ್ತಿದೆ. ಇನ್ಫೊಸಿಸ್ ನ ಕಾರ್ಯಕಾರಿ ಉಪಾಧ್ಯಕ್ಷರಾಗಿರುವ ಮತ್ತು ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿಯಾಗಿರುವ ಶ್ರೀ ರಾಮದಾಸ ಕಾಮತ್ ಯು. ರವರು ಈ ನಿಧಿಯ ಅಧ್ಯಕ್ಷರಾಗಿದ್ದಾರೆ.
ಕಾರ್ಯದರ್ಶಿಯಾಗಿ ಹಾಂಗ್ಯೋ ಐಸ್ಕ್ರೀಮ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಶ್ರೀ ಪ್ರದೀಪ್ ಜಿ. ಪೈ ಯವರು ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಮತ್ತು ಅಧ್ಯಕ್ಷ ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ಮತ್ತು ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥ ಮಂಡಳಿಯ ಮಾರ್ಗದರ್ಶನದಲ್ಲಿ ನಿಧಿಯು ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications