ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಆದೀತೇ ನನಸು?
ಮಂಗಳೂರು, ಮೇ 30 : ಡಿವಿ ಸದಾನಂದ ಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರೈಲ್ವೆ ಖಾತೆ ಸಿಕ್ಕಿರುವುದು ಕರಾವಳಿಯ ಜನರಿಗೆ ಸಂತಸ ಉಂಟುಮಾಡಿದೆ. ದಶಕಗಳಿಂದ ಕಡೆಗಣಿಸಿರುವ ಕರಾವಳಿ ಭಾಗದ ರೈಲ್ವೆ ಬೇಡಿಕೆಗಳನ್ನು ಸದಾನಂದ ಗೌಡರು ಈ ಬಾರಿಯಾದರೂ ಈಡೇರಿಸಬಹುದು ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕರಾವಳಿ ಭಾಗದ ರೈಲ್ವೆ ಹೋರಾಟಗಾರರು ನವದೆಹಲಿಯಲ್ಲಿ ಸಚಿವರಾ ಡಿವಿ ಸದಾನಂದ ಗೌಡರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕರಾವಳಿ ಭಾಗದ ದಶಕಗಳ ಕಸನಾದ ಪಾಲ್ಫಾಟ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ಮಂಗಳೂರು ವಿಭಾಗವನ್ನು ರಚಿಸುಚ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. [ನೂತನ ರೈಲ್ವೆ ಸಚಿವರು ಹೇಳಿದ್ದೇನು?]

1992ರಲ್ಲಿ ಕೊಂಕಣ ರೈಲ್ವೆ ನಿಗಮವನ್ನು ಸ್ಥಾಪಿಸುವಾಗ ನೇತ್ರಾವತಿಯಿಂದ ರೋಹವರೆಗಿನ ಮಾರ್ಗವನ್ನು ಅದರ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿತ್ತು. ಆದರೆ, ಕೇರಳ ಸರ್ಕಾರದ ಲಾಬಿಯಿಂದಾಗಿ ಮಂಗಳೂರು ಸೆಂಟ್ರಲ್, ಜಂಕ್ಷನ್ ಹಾಗೂ ಪಣಂಬೂರು ನಿಲ್ದಾಣಗಳು ಪಾಲ್ಘಾಟ್ ವಿಭಾಗಕ್ಕೆ ಸೇರಿದವು. ಆದ್ದರಿಂದ ಇವುಗಳನ್ನು ಬೇರ್ಪಡಿಸಿ ಪ್ರತ್ಯೇಕ ಮಂಗಳೂರು ವಿಭಾಗ ರಚಿಸುವುದು ಕರಾವಳಿ ಭಾಗದ ಬೇಡಿಕೆಯಾಗಿದೆ.
ಕರಾವಳಿ ಭಾಗದ ರೈಲ್ವೆ ಸವಲತ್ತುಗಳಿಗಾಗಿ ಈ ಹಿಂದೆ ಹೋರಾಟ ನಡೆಸಿದ್ದ ಸದಾನಂದ ಗೌಡರೇ ಆ ಖಾತೆಯ ಹೊಣೆಯನ್ನು ಹೊತ್ತಿದ್ದಾರೆ. ಕರಾವಳಿ ಭಾಗಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸದಾನಂದ ಗೌಡರಿಗೆ ಚೆನ್ನಾಗಿ ಅರಿವಿದೆ. ಆದ್ದರಿಂದ ಚೊಚ್ಚಲ ಬಜೆಟ್ ಮಂಡಿಸುವಾಗಲೇ ಮಂಗಳೂರಿನ ಎರಡು ರೈಲ್ವೆ ನಿಲ್ದಾಣಗಳನ್ನು ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಕೊಂಕಣ ರೈಲ್ವೆ ಜತೆ ಸೇರಿಸಿ, ಪ್ರತ್ಯೇಕ ವಿಭಾಗ ರಚಿಸಲು ಒಪ್ಪಿಗೆ ನೀಡಬೇಕೆಂದುಬುದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಹನುಮಂತ ಕಾಮತ್ ಅವರ ಒತ್ತಾಯವಾಗಿದೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಘೋಷಣೆ, ಮಂಗಳೂರು ನಿಲ್ದಾಣಕ್ಕೆ ನಾಲ್ಕು ಮತ್ತು ಐದನೇ ಫ್ಲಾಟ್ ಫಾರ್ಮ್ ಬೇಕೆಂಬ ಬೇಡಿಕೆಯೂ ಈಡೆರಿಲ್ಲ. ಆದ್ದರಿಂದ ಇಂತಹ ಸಣ್ಣ ಪುಟ್ಟ ಬೇಡಿಕೆಗಳನ್ನು ಈಡೇರಿಸಲು ರೈಲ್ವೆ ಸಚಿವರು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಪುತ್ತೂರು ರೈಲ್ವೆ ಯಾತ್ರಿ ಸಂಘದ ಸಂಚಾಲಕ ದಿನೇಶ್ ಭಟ್ ಹೇಳಿದ್ದಾರೆ.
ತೋಕೂರು- ಮಂಗಳೂರು ನಡುವಿನ ರೈಲ್ವೆ ಹಳಿಯನ್ನು ದ್ವಿಪಥಗೊಳಿಸುವ ಕಾಮಗಾರಿಗೆ ಅಗತ್ಯವಿರುವ 129 ಕೋಟಿ ರೂ> ಹಣ ಮಂಜೂರು, ಬೆಂಗಳೂರು-ಹಾಸನ ಹೊಸ ಬ್ರಾಡ್ ಗೇಜ್ ಮಾರ್ಗ ತುರ್ತು ಅನುಷ್ಠಾನಕ್ಕೆ ಕ್ರಮ ಮುಂತಾದ ಬೇಡಿಕೆಗಳನ್ನು ಗೌಡರು ಈಡೇರಿಸುವ ಭರವಸೆಯನ್ನು ಜನರು ಹೊಂದಿದ್ದಾರೆ.
ಸುಬ್ರಹ್ಮಣ್ಯ ಜಂಕ್ಷನ್ ಆಗಲಿ : ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣವನ್ನು ಟರ್ಮಿನಲ್ ಸ್ಟೇಷನ್ ಆಗಿ ಅಭಿವೃದ್ಧಿಪಡಿಬೇಕು ಎನ್ನುವುದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ಅವರ ಮನವಿಯಾಗಿದೆ. ಟರ್ಮಿನಲ್ ಸ್ಟೇಷನ್ ಆದ ನಂತರ ದೆಹಲಿ, ಅಮೃತಸರ, ಮುಂಬೈ, ಡೆಹ್ರಾಡೂನ್, ಹೌರಾ ಮುಂತಾದ ಕಡೆಗಳಿಂದ ಹೊಸ ರೈಲುಗಳನ್ನು ಆರಂಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.












Click it and Unblock the Notifications