ಕರ್ಫ್ಯೂ ಸಂದರ್ಭದಲ್ಲಿ ಅಂಗಡಿ ಮುಚ್ಚಲ್ಲ; ಜಿಲ್ಲಾಡಳಿತಕ್ಕೆ ಸವಾಲೆಸೆದ ಪುತ್ತೂರು ವರ್ತಕರು!
ಮಂಗಳೂರು, ಸೆಪ್ಟೆಂಬರ್ 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮ ರೂಪಿಸುತ್ತಿದೆ. ಸತತ ಐದನೇ ವಾರದಲ್ಲೂ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದರೆ ಈ ಆದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವರ್ತಕರು ಕೆರಳಿದ್ದು, ಏನೇ ಆದರೂ ವಾರಾಂತ್ಯದಲ್ಲಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲ್ಲ ಎಂದು ವರ್ತಕರು ಪಟ್ಟು ಹಿಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆಯನ್ನು ವರ್ತಕರು ಖಂಡಿಸಿದ್ದು, ಪುತ್ತೂರಿನ ವರ್ತಕರ ಸಂಘದಿಂದ ಕರ್ಫ್ಯೂ ನಿಯಮ ಉಲ್ಲಂಘಿಸಲು ನಿರ್ಧಾರ ಮಾಡಲಾಗಿದೆ. ಇಡೀ ದಿನ ಅಂಗಡಿ- ಮುಂಗಟ್ಟು ತೆರೆದಿಟ್ಟು ವ್ಯವಹಾರ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಯ ವರ್ತಕರು ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಪುತ್ತೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವರ್ತಕರ ಸಂಘದ ಪ್ರಮುಖರು, ಎಲ್ಲೂ ಇಲ್ಲದ ನಿಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ವಾರದ ಬೇರೆ ದಿನ ಇರದ ಕೊರೊನಾ ವ್ಯವಹಾರ ಚೆನ್ನಾಗಿ ಆಗುವ ವಾರಾಂತ್ಯದಲ್ಲಿ ಬರುತ್ತಾ ಅಂತಾ ವರ್ತಕರು ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದ್ದಾರೆ. ಏನೇ ಆದರೂ ಅಂಗಡಿ- ಮುಂಗಟ್ಟುಗಳನ್ನು ತೆರೆದಿಟ್ಟು ಪ್ರತಿಭಟನೆ ಮಾಡುವುದಾಗಿ ವರ್ತಕ ಸಂಘದ ಪ್ರಮುಖರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶ ಮೀರಿ ವ್ಯವಹಾರ ನಡೆಸಲು ವರ್ತಕರು ನಿರ್ಧಾರ ಮಾಡಿದ್ದು, ವರ್ತಕರ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಜಿಲ್ಲಾಡಳಿತ ಮುಂದಾಗಿದೆ. ಸ್ಥಳೀಯಾಡಳಿತದ ಮೂಲಕ ವರ್ತಕರನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಕರ್ಫ್ಯೂ ನಿಯಮಗಳನ್ನು ಮೀರಿ ವ್ಯವಹರಿಸುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ. ದಂಡದ ಜೊತೆಗೆ ಅಂಗಡಿಗಳ ಮಾಲೀಕರ ಮೇಲೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಹೆಸರಿನಲ್ಲಿ ವರ್ತಕರ ಹಾಗೂ ಜಿಲ್ಲಾಡಳಿತದ ನಡುವೆ ಸವಾಲು ಏರ್ಪಟ್ಟಿದ್ದು, ಕೊರೊನಾ ಪಾಸಿಟಿವ್ ರೇಟ್ ಹೆಚ್ಚಾಗಿದ್ದರೂ ವ್ಯವಹಾರಕ್ಕೆ ವರ್ತಕರ ಪಟ್ಟು ಹಿಡಿದಿದ್ದು, ವ್ಯವಹಾರ ಮಾಡಿದರೆ ಕೇಸ್ ಹಾಕುವುದಾಗಿ ಪುತ್ತೂರು ಉಪವಿಭಾಗ ಆಯುಕ್ತ ಯತೀಶ್ ಉಳ್ಳಾಲ್ ಎಚ್ಚರಿಕೆ ನೀಡಿದ್ದಾರೆ. "ಕೊರೊನಾ ನಿಯಮ ಮೀರಿದಲ್ಲಿ ಪೊಲೀಸ್ ಇಲಾಖೆ ಕ್ರಮಕ್ಕೂ ಸೂಚನೆ ನೀಡಲಾಗಿದೆ. ಪುತ್ತೂರಿನಲ್ಲಿ ಅಂಗಡಿ- ಮುಂಗಟ್ಟುಗಳಿಗೆ ಭೇಟಿ ನೀಡಿದ ಯತೀಶ್ ಉಳ್ಳಾಲ್ ಕರ್ಫ್ಯೂ ಸಂದರ್ಭದಲ್ಲಿ ಸಹಕಾರ ನೀಡುವಂತೆ," ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, "ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ತೆಗೆಯಲು ಜಿಲ್ಲಾಡಳಿತದ ಜೊತೆ ಮಾತನಾಡಿದ್ದೇನೆ. ಆದರೆ ಜಿಲ್ಲಾಡಳಿತ ರಾಜ್ಯ ಸರ್ಕಾರದ ಬಳಿಕ ಈ ಬಗ್ಗೆ ಅಭಿಪ್ರಾಯ ಕೇಳಬೇಕಿದೆ. ಸದ್ಯ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಇಲ್ಲವಾಗಿರುವುದರಿಂದ ಮುಂದಿನ ವಾರದಿಂದ ಕರ್ಫ್ಯೂ ತೆಗೆಯುವ ಬಗ್ಗೆ ನಿರ್ಧಾರ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ. ಹಾಗಾಗಿ ವರ್ತಕರು ಈ ವಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕಾರ ನೀಡಬೇಕೆಂದು," ಮನವಿ ಮಾಡಿದ್ದಾರೆ.












Click it and Unblock the Notifications