ಪ್ರವಾಸೋದ್ಯಮ ಇಲಾಖೆಗೆ ಸ್ವರ್ಗದಂತಿರುವ ಮಂಗಳೂರಿನ ಬಗ್ಗೆ ಯಾಕೆ ನಿರ್ಲಕ್ಷ್ಯ?
ಗೋವಾದಂತೆ ಭೌಗೋಳಿಕವಾಗಿ, ಐತಿಹಾಸಿಕವಾಗಿ ಮಂಗಳೂರು ಸಿರಿವಂತವಾಗಿದೆ. ಆದರೆ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಯಾಕೆ ಅತ್ಯಂತ ವಿರಳ ಎಂಬ ಪ್ರಶ್ನೆ ಮಂಗಳೂರಿಗರನ್ನು ನಿರಂತರ ಕಾಡುತ್ತಿದೆ.
ಮಂಗಳೂರು, ಮೇ 2: ಗೋವಾ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಗೋವಾಕ್ಕೆ ಹೋಗಿ ಬರಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅಲ್ಲಿಗೆ ಪ್ರತೀ ವರ್ಷ ದೇಶ, ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ಕೊಡುತ್ತಾರೆ.
ಅದೇ ತರಹ ಭೌಗೋಳಿಕವಾಗಿ, ಐತಿಹಾಸಿಕವಾಗಿ ಮಂಗಳೂರು ಸಿರಿವಂತವಾಗಿದೆ. ಆದರೆ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಯಾಕೆ ಅತ್ಯಂತ ವಿರಳ ಎಂಬ ಪ್ರಶ್ನೆ ಮಂಗಳೂರಿಗರನ್ನು ನಿರಂತರ ಕಾಡುತ್ತಿದೆ.
ಮಂಗಳೂರಿನಲ್ಲಿ ಬ್ರಿಟೀಷರ ಕಾಲದ ಹಲವು ಐತಿಹಾಸಿಕ ಕಟ್ಟಡಗಳಿವೆ. ಸುಂದರ ಬೀಚ್ ಗಳಿವೆ. ಆದರೆ ವಿಚಿತ್ರವೆಂದರೆ ಇವುಗಳಿಗೆ ಪ್ರವಾಸಿಗರನ್ನು ಸೆಳೆಯುವ ಕೆಲಸವನ್ನು ಸರಕಾರ ನಡೆಸಿಲ್ಲ. ಈ ಸ್ಥಳಗಳನ್ನು ಪ್ರವಾಸಿಗರಿಗೆ ಆಕರ್ಷಿಣೀಯವಾಗಿಸಲೂ ಸರಕಾರ ಶ್ರಮಿಸಿದಂತೆ ಕಾಣಿಸುತ್ತಿಲ್ಲ. ಜತೆಗೆ ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯದ ಕೊರತೆಯೂ ಢಾಳಾಗಿ ಕಾಣಿಸುತ್ತಿದೆ.

ಬೀಚ್ಗಳಿದ್ದರೂ ಪ್ರವಾಸಿಗರಿಲ್ಲ
ಗೋವಾದಲ್ಲಿ ಕ್ಯಾಲೊಂಗೇಟ್ ಬೀಚ್, ಬಾಗಾ ಬೀಚ್, ಕ್ಯಾಂಡೋಲಿಮ್ ಬೀಚ್ ಹೀಗೆ ಹತ್ತಾರು ಪ್ರಸಿದ್ದ ಬೀಚ್ಗಳಿವೆ. ಅದಕ್ಕೆ ಸರಿಸಾಟಿಯೆಂಬಂತೆ ಮಂಗಳೂರಿನಲ್ಲೂ ಪಣಂಬೂರು, ತಣ್ಣೀರು ಬಾವಿ ಬೀಚ್, ಸೋಮೇಶ್ವರ ಮತ್ತಿತರ ಬೀಚ್ಗಳಿವೆ. ಆದರೆ ಅಲ್ಲಿರುವ ಮೂಲಭೂತ ಸೌಕರ್ಯಗಳಿಲ್ಲ ಎನ್ನುವುದು ಪ್ರವಾಸಿಗರ ಆರೋಪ.
ಜತೆಗೆ ಗೋವಾದಲ್ಲಿರುವಂತೆ ಐತಿಹಾಸಿಕ ಚರ್ಚ್ಗಳು, ದೇವಸ್ಥಾನಗಳು, ಹಾಗೂ ಇನ್ನಿತರ ಐತಿಹಾಸಿಕ ದೇವಾಲಯಗಳು ಇದ್ದರೂ ಯಾವುದೇ ಪ್ರವಾಸಿಗರು ಮಂಗಳೂರಿಗೆ ಕಾಲಿಡುತ್ತಿಲ್ಲ.

ವಿದ್ಯಾರ್ಥಿಗಳಿಗೆ ನಿರಾಸೆ
ಮಂಗಳೂರಿನಲ್ಲಿ ದೇಶ-ವಿದೇಶದಿಂದ ವಿದ್ಯಾರ್ಜನೆಗಾಗಿ ಮಂಗಳೂರಿಗೆ ಬರುತ್ತಾರೆ. ತಮ್ಮ ರಜಾ ದಿನಗಳನ್ನು ಕಳೆಯಲು ಇಲ್ಲಿ ಪ್ರವಾಸಿ ತಾಣಗಳೂ ಇದ್ದರೂ ಅವು ಹೆಸರಿಗೆ ಮಾತ್ರ ಇವೆ. ಅದನ್ನು ಸರ್ಕಾರ ಯಾವುದೇ ರೀತಿಯಲ್ಲಿ ಆಕರ್ಷಣೀಯವಾಗಿ ಅಭಿವೃದ್ದಿ ಪಡಿಸುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ನೋವು. ಆದ್ದರಿಂದ ವಿದ್ಯಾರ್ಥಿಗಳು ಹತ್ತಿರದ ಕೇರಳ, ಗೋವಾ, ತಮಿಳುನಾಡು ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಸಿ ತಾಣಗಳು ಆಕರ್ಷಣೀಯವಾಗಿಲ್ಲ
"ನಾನು ಮಂಗಳೂರು ವಿ.ವಿಯಲ್ಲಿ ಎರಡು ವರ್ಷಗಳಿಂದ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದೇನೆ. ಇಲ್ಲಿ ತುಂಬಾ ಪ್ರವಾಸಿ ತಾಣಗಳು, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿದ್ದರೂ ನಾವು ಹತ್ತಿರದ ಊಟಿ, ಕೊಡೈಕನಲ್, ವಯನಾಡು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ. ಅದಕ್ಕೆ ಕಾರಣ ಅಲ್ಲಿನ ಪ್ರವಾಸಿ ತಾಣಗಳ ಅಭಿವೃದ್ದಿ ಮತ್ತು ಆಕರ್ಷಣೆ" ಎನ್ನುತ್ತಾರೆ ಶ್ರೀಲಂಕಾದ ವಿದ್ಯಾರ್ಥಿ ಸಿರಿರತ್ನೆ.

ಸಾಹಸಮಯ ಕ್ರೀಡೆಗಳ ಕೊರತೆ
ನೀರಿನಲ್ಲಿ ಆಟವಾಡುವ ಸ್ಕೂಬಾ ಡೈವಿಂಗ್, ರಿವರ್ ರಾಫ್ಟಿಂಗ್, ಬನಾನ ರೈಡ್, ಡಾಲ್ಫಿನ್ ಷೋ, ಇಂತಹ ಹತ್ತಾರು ಸಾಹಸಮಯ ಕ್ರೀಡೆಗಳು ಗೋವಾದಲ್ಲಿ ದೊರೆಯುತ್ತದೆ. ಅದೇ ಮಂಗಳೂರಿನಲ್ಲಿ ಯಾಕೆ ದೊರೆಯುತ್ತಿಲ್ಲ ಎಂಬುವುದು ಪ್ರವಾಸಿಗರ ಆರೋಪ.
ಈ ಬಗ್ಗೆ ಮೀನಿಗಾರರೊಬ್ಬರು ಪ್ರತಿಕ್ರಿಯಿಸುತ್ತಾ ಡಾಲ್ಫಿನ್ ಮೀನುಗಳು ಮಂಗಳೂರಿನಲ್ಲೂ ದೊರೆಯುತ್ತದೆ. ಇಲ್ಲಿನ ಪಣಂಬೂರು ಬೀಚ್ನ ಮಧ್ಯಬಾಗದಲ್ಲಿ ಮೀನುಗಾರಿಕೆಗೆ ಹಾದು ಹೋಗುತ್ತಿರುವಾಗ ನಮಗೆ ನೂರಾರು ಡಾಲ್ಫಿನ್ ಮೀನುಗಳು ಕಾಣಸಿಗುತ್ತವೆ. ಇದನ್ನೆ ಸರ್ಕಾರ ಅಥವಾ ಪ್ರವಾಸೋದ್ಯಮ ಇಲಾಖೆ ಡಾಲ್ಫಿನ್ ಷೋ ವಾಗಿ ಬಳಸಬಹುದಲ್ಲ? ಎಂಬ ಪ್ರಶ್ನೆಯನ್ನು ಅವರು ಮುಂದಿಡುತ್ತಾರೆ.

ಪ್ರವಾಸಿಗರು ವಿರಳ
ಇನ್ನು ಆಹಾರ ವಿಷಯಕ್ಕೆ ಬಂದರೆ ದೇಶ-ವಿದೇಶದ ಎಲ್ಲಾ ಆಹಾರಗಳು ಮಂಗಳೂರಿನಲ್ಲಿ ಸಿಗುತ್ತದೆ. ಗೋವಾಕ್ಕೆ ಹೋಲಿಸಿದರೆ ಆಹಾರ ಹಾಗೂ ವಸತಿ ಸೌಲಭ್ಯ ಇಲ್ಲಿ ಕಡಿಮೆ ದರದಲ್ಲಿ ಸಿಗುತ್ತದೆ. ಜತೆಗೆ ಮೂರು ರೀತಿಯ ಸಾರಿಗೆ ಸಂಪರ್ಕ ಅತ್ಯಂತ ಹತ್ತಿರದಲ್ಲಿದ್ದರೂ ಪ್ರವಾಸಿಗರು ಯಾಕೆ ಇತ್ತ ಕಡೆ ತಲೆ ಹಾಕುತ್ತಿಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಪ್ರವಾಸೋದ್ಯಮದ ಆಲಸ್ಯತನ
ಗೋವಾ ಸರ್ಕಾರದ ಮುಕ್ಕಾಲು ಭಾಗದ ಆದಾಯ ಪ್ರವಾಸೋದ್ಯಮ ಇಲಾಖೆಯಿಂದ ಬರುತ್ತದೆ. ಅದೇ ನಮ್ಮ ಸರ್ಕಾರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಬರುವ ಆದಾಯ ಅತ್ಯಂತ ಕಡಿಮೆ.

ಪ್ರವಾಸಿ ಸ್ಥಳಗಳ ಅಭಿವೃದ್ಧಿಯಾಗಲಿ
ಕರ್ನಾಟಕವು ಗೋವಾಕ್ಕೆ ಹೋಲಿಸಿದರೆ ಅತ್ಯಂತ ದೊಡ್ಡ ರಾಜ್ಯ ಅಲ್ಲಿರುವ ಪ್ರವಾಸಿ ತಾಣಗಳಿಗಿಂತ ಹತ್ತು ಪಟ್ಟು ಹೆಚ್ಚು ಪ್ರವಾಸಿ ತಾಣಗಳು ರಾಜ್ಯದಲ್ಲಿವೆ. ಆದರೂ ಯಾಕೆ ಗೋವಾಕ್ಕೆ ಬರುವ ಅರ್ಧದಷ್ಟು ಪ್ರವಾಸಿಗರು ರಾಜ್ಯಕ್ಕೆ ಬರುತ್ತಿಲ್ಲವೆಂಬುವುದನ್ನು ರಾಜ್ಯ ಸರ್ಕಾರವೇ ಅರಿತುಕೊಳ್ಳಬೇಕು. ಆಕರ್ಷಕ ರೀತಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ದಿಪಡಿಸಿದರೆ ಉತ್ತಮ ಎಂಬುವುದು ಪ್ರವಾಸಿಗರ ಅಭಿಪ್ರಾಯವಾಗಿದೆ.












Click it and Unblock the Notifications