ಪದ್ಮಶ್ರೀ ಸ್ವೀಕರಿಸುವ ವೇಳೆ ಹಾಜಬ್ಬರ ಬೆರಳಿಗಾಗಿತ್ತು ಗಾಯ!
ಮಂಗಳೂರು, ನವೆಂಬರ್ 10; ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಪ್ರಶಸ್ತಿ ಸ್ವೀಕರಿಸುವ ವೇಳೆ ಹಾಕಿದ್ದ ದಿರಿಸು, ಚಪ್ಪಲಿ ಕಳಚಿಟ್ಟು ಬರಿಗಾಲಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ರೀತಿಯನ್ನು ಇಡೀ ದೇಶವೇ ಕೊಂಡಾಡಿದೆ.
ಹರೇಕಳ ಹಾಜಬ್ಬರ ರೀತಿಯ ವ್ಯಕ್ತಿತ್ವ ಕೋಟಿಗೊಬ್ಬನಿಗೆ ಬರಲು ಮಾತ್ರ ಸಾಧ್ಯ ಅಂತಾ ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ. ಪ್ರಶಸ್ತಿಗಳು ಅರಸಿಕೊಂಡು ಬಂದರೂ, ಹಮ್ಮು-ಬಿಮ್ಮಿಲ್ಲದೇ ತನ್ನ ನೈಜ ವ್ಯಕ್ತಿತ್ವವನ್ನು ಕಾಪಿಟ್ಟುಕೊಂಡು ಬಂದ ಹಾಜಬ್ಬರ ಸರಳತೆ ಮಾದರಿಯಾಗಿದೆ.
ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸನ್ಮಾನಕ್ಕೆ ಅಭಿಮಾನಿಗಳ ತಳ್ಳಾಟ; ಗಲಿಬಿಲಿಯಾಗಿ ಓಟಕ್ಕಿತ್ತ ಹಾಜಬ್ಬ
ಹಾಜಬ್ಬರು ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆಯಲ್ಲಿ ಕೈಯ ಹೆಬ್ಬೆರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಕೈ ನೋವಿದ್ದರೂ ದೇಶದ ರಾಷ್ಟ್ರಪತಿಗಳಿಂದ ಹಾಜಬ್ಬರು ನೋವನ್ನು ಮರೆಮಾಚಿ ನಗುತ್ತಾ ಪ್ರಶಸ್ತಿ ಸ್ವೀಕಾರ ಮಾಡಿದ್ದರು.
ದೆಹಲಿಯಲ್ಲಿ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ
ಪ್ರಧಾನಿ ನರೇಂದ್ರ ಮೋದಿಯವರು ಟೀ-ಪಾರ್ಟಿಯ ವೇಳೆಯಲ್ಲಿ ಹಾಜಬ್ಬರ ಕೈ ಹಿಡಿದು ಇತರರಿಗೆ ಹಾಜಬ್ಬರ ಕುರಿತು ಪರಿಚಯ ಮಾಡಿದ್ದರು. ಹೆಬ್ಬೆರಳಿನ ಗಾಯದ ನೋವಿದ್ದರೂ ಸಹ ಹಾಜಬ್ಬರು ಮಾತ್ರ ಎಲ್ಲೂ ತನ್ನ ನೋವನ್ನು ತೋರಿಸಲೇ ಇಲ್ಲ.
ಪದ್ಮ ಪ್ರಶಸ್ತಿಗೆ ವೈದ್ಯರ ಹೆಸರು ಶಿಫಾರಸು ಮಾಡಲಿದೆ ದೆಹಲಿ ಸರ್ಕಾರ
ಅಷ್ಟಕ್ಕೂ ಹಾಜಬ್ಬರ ಕೈಗೆ ಏನಾಗಿತ್ತು?: ಕೈಗೆ ಗಾಯವಾಗಲು ಕಾರಣ ಏನು ಅನ್ನೋದನ್ನು ತಿಳಿದುಕೊಂಡರೆ ಹಾಜಬ್ಬರ ವ್ಯಕ್ತಿತ್ವ ಮತ್ತೆ ಅನಾವರಣವಾಗುತ್ತದೆ. ಹಾಜಬ್ಬ ಕಡುಬಡತನ ಹೊಂದಿದರೂ ಮನೆಗೆ ಬಂದವರಿಗೆ ಸತ್ಕಾರ ಮಾಡದೇ ಕಳುಹಿಸಿದವರಲ್ಲ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯವಿದ್ದರೂ ಯಾರ ಮುಂದೆಯೂ ವೈಯುಕ್ತಿಕವಾಗಿ ಹಣ ಕೇಳಿದವರಲ್ಲ. ಮನೆಗೆ ಬಂದವರಿಗೆ ಸೀಯಾಳ ನೀಡಿ ಸತ್ಕರಿಸೋದು ಹಾಜಬ್ಬರ ಸಂಪ್ರದಾಯ.
ನವೆಂಬರ್ 8ರಂದು ಹಾಜಬ್ಬರು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ್ದರು. ನವೆಂಬರ್ 7ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಹಾಜಬ್ಬರ ಮನೆಯಿಂದ ವಿಮಾನ ನಿಲ್ದಾಣದವರೆಗೆ ಪ್ರಯಾಣಿಸಲು ಸ್ವತಃ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ವಾಹನದ ವ್ಯವಸ್ಥೆ ಮಾಡಿದ್ದರು. ಮುಂಜಾನೆ ಮೂರು ಗಂಟೆಯ ವೇಳೆಗೆ ಜಿಲ್ಲಾಧಿಕಾರಿ ಕಳುಹಿಸಿದ ವಾಹನ ಹಾಜಬ್ಬರ ಸಣ್ಣ ಮನೆಯೆದುರು ನಿಂತಿದೆ. ಆಗಾಗಲೇ ಎದ್ದಿದ್ದ ಹಾಜಬ್ಬರು ತಮ್ಮ ಮನೆಗೆ ಬಂದ ವಾಹನದ ಸಿಬ್ಬಂದಿಗಳಿಗೆ ನಡುರಾತ್ರಿಯಲ್ಲೂ ಎಳನೀರು ಕೊಡಲು ಕತ್ತಿ ತೆಗೆದುಕೊಂಡು ಎಳ ನೀರು ಕೆತ್ತಲು ಆರಂಭಿಸಿದ್ದಾರೆ.
ಮುಂಜಾನೆ ಆದ ಕಾರಣ ಕತ್ತಿ ಹಾಜಬ್ಬರ ಕೈಗೆ ತಾಗಿದೆ. ನೆತ್ತರು ಚಿಮ್ಮಿದೆ, ತಕ್ಷಣ ಅಲ್ಲಿದ್ದ ಸಿಬ್ಬಂದಿಗಳು ಹಾಜಬ್ಬರ ಕೈಗೆ ಬ್ಯಾಂಡೇಜ್ ಮಾಡಿದ್ದಾರೆ. ಕೈಗೆ ತಾಗಿದರೂ ಹಾಜಬ್ಬರು ಮಾತ್ರ ಎಳನೀರನ್ನು ಕೊಟ್ಟು ಸತ್ಕಾರ ಮಾಡಿದ್ದಾರೆ.
ಇಲ್ಲಿಯವರೆಗೆ ಬ್ಯಾಂಡೇಜ್ ಹಾಕದ ಹಾಜಬ್ಬರು ಮೊದಲ ಬಾರಿಗೆ ಸಿಬ್ಬಂದಿಗಳ ಒತ್ತಾಯಕ್ಕೆ ಮಣಿದು ಬ್ಯಾಂಡೇಜ್ ಹಾಕಿಸಿಕೊಂಡಿದ್ದಾರೆ. ಕೈಗಾಗಿರುವ ಗಾಯ ಸಣ್ಣದಾದರೂ ಹಾಜಬ್ಬರ ನೈಜ ವ್ಯಕ್ತಿತ್ವ ಆಗಾಧವಾಗಿ ಪ್ರದರ್ಶನವಾಗಿದೆ. ಪದ್ಮಶ್ರೀ ಪುರಸ್ಕೃತರಾದರೂ ಹಾಜಬ್ಬರು ಮಾತ್ರ ತನ್ನ ಸರಳತೆಯಿಂದಲೇ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಾನು, ನನ್ನದೆಂಬ ಸ್ವಾರ್ಥ ಮೆರೆಯುವ ಜನರ ನಡುವೆ ನಡುರಾತ್ರಿಯಲ್ಲೂ ಮನೆಗೆ ಬಂದವರಿಗೆ ಸತ್ಕಾರ ಮಾಡುವ ಹಾಜಬ್ಬರ ಗುಣ ಬಲು ಅಪರೂಪರದ್ದಾಗಿದೆ.
ಗಲಿಬಿಲಿಗೊಂಡ ಹಾಜಬ್ಬ; ಹರೇಕಳ ಹಾಜಬ್ಬ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿ ಮಂಗಳವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಅಭಿನಂದಿಸಲು ನೂಕು ನುಗ್ಗಲು ಉಂಟಾಯಿತು. ಇದರಿಂದ ಗಲಿಬಿಲಿಗೊಂಡ ಹಾಜಬ್ಬನವರು ಅಲ್ಲಿಂದ ತೆರಳಿದರು.
ಹಾಜಬ್ಬನವರನ್ನು ಅಭಿನಂದಿಸುವ ಭರದಲ್ಲಿ ಹಾರ, ಶಾಲು, ಹೂಗುಚ್ಛಗಳನ್ನು ಹಿಡಿದು ನಾ ಮುಂದು ತಾ ಮುಂದು ಎಂದು ಜನರು ತಳ್ಳಾಟ ನಡೆಸಿದ್ದಾರೆ. ಆದರೆ ಯಾವುದೇ ಅಭಿನಂದನೆ, ಪ್ರಶಂಸೆಗೆ ಬಾಗದ, ಬೀಗದ ಹಾಜಬ್ಬನವರು ಇದರಿಂದ ಗಲಿಬಿಲಿಗೊಂಡರು. ಪೊಲೀಸರು ಜನರನ್ನು ನಿಯಂತ್ರಿಸಿದರು.
ಅವರು ಕಾರಿನ ಬಳಿ ಬಂದರೂ ಬಿಡದ ಅಭಿಮಾನಿಗಳು ಮತ್ತೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಅವರು ತಮಗೆ ಇದೆಲ್ಲಾ ಯಾವುದೂ ಬೇಡ ಎಂದರು ಒತ್ತಾಯಪೂರ್ವಕವಾಗಿ ಹಾರ ಹಾಕಲು ಮುಂದಾದರು. ಬಳಿಕ ಪೊಲೀಸರು ಅವರನ್ನು ಹರಸಾಹಸಪಟ್ಟು ಕಾರಿನಲ್ಲಿ ಕೂರಿಸಿ ಕಳುಹಿಸಿಕೊಟ್ಟರು.
ಹಾಜಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸ್ವಾಗತ, ಸನ್ಮಾನ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಹಾಜಬ್ಬರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಶಾಲು ಹೊದಿಸಿ, ಪೇಟಾ ತೊಡಿಸಿ, ಫಲಪುಷ್ಪ ಕೊಟ್ಟು ಗೌರವಿಸಿದರು.