ದೇಶ ವಿಭಜಿಸಲು ಗಾಂಧೀಜಿಗೆ ಅಧಿಕಾರ ಕೊಟ್ಟವರಾರು? : ಜಗದೀಶ್ ಕಾರಂತ್
ಮಂಗಳೂರು, ಆಗಸ್ಟ್ 14: "ದೇಶ ಸ್ವಾತಂತ್ರ್ಯಗೊಳ್ಳಬೇಕೆಂಬ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಟೀಮ್ಗೆ ಸ್ವಾತಂತ್ರ್ಯ ಸಂಗ್ರಾಮದ ಜವಬ್ದಾರಿಯನ್ನು ನೀಡಲಾಗಿತ್ತು. ಆದರೆ ಭಾರತ ದೇಶವೆಂಬ ಪಿತ್ರಾರ್ಜಿತ ಆಸ್ತಿಯನ್ನು ಪಾಕಿಸ್ತಾನ್ ,ಬಾಂಗ್ಲಾವೆಂದು ವಿಭಜಿಸಲು ಮಹಾತ್ಮ ಗಾಂಧಿ ಮತ್ತು ಟೀಮ್ಗೆ ಅಧಿಕಾರ ಕೊಟ್ಟವರಾರು?" ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಪ್ರಶ್ನಿಸಿದ್ದಾರೆ.
ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಪ್ರಖಂಡದ ವತಿಯಿಂದ ಕುತ್ತಾರಿನ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಆದಿತ್ಯವಾರದಂದು ನಡೆದ ಅಖಂಡ ಭಾರತ ಸಂಕಲ್ಪ ದಿನದ ಸಭಾಕಾರ್ಯಕ್ರವನ್ನುದ್ದೇಶಿಸಿ ಅವರು ದಿಕ್ಸೂಚಿ ಭಾಷಣಗೈದರು.

"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಬಲುದೊಡ್ಡದೆ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಆದರೆ ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಬೇಕಾದರೆ ಮನೆ ಮಕ್ಕಳ ಎಲ್ಲರ ಸಹಿಯೂ ಬೇಕಾಗುತ್ತದೆ. ಭಾರತ ದೇಶವೆಂಬುದು ನಮ್ಮ ಪೂರ್ವಜರ ಪಿತ್ರಾರ್ಜಿತ ಆಸ್ತಿಯಾದರೂ ಗಾಂಧೀಜಿ, ನೆಹರೂ ಮತ್ತು ಟೀಮ್ ಸೇರಿ ಏಕಾಏಕಿಯಾಗಿ ಮೂರು ಹೋಳಾಗಿ ವಿಭಜಿಸಿ ಮಹಮ್ಮದ್ ಅಲಿ ಜಿನ್ನನಿಗೆ ಪಾಕಿಸ್ತಾನವೆಂಬ ಭಾರತದ ಅವಿಭಾಜ್ಯ ಅಂಗವನ್ನು ಲಿಖಿತವಾಗಿ ಬರೆದು ಕೊಟ್ಟು ದೇಶದ ಸಮಸ್ತ ಜನರಿಗೆ ದ್ರೋಹವೆಸಗಿದೆ. ಸರಿ ಮುಸ್ಲಿಮರಿಗೆ ಬೇರೆಯೇ ದೇಶ ಕೊಟ್ಟರೂ ಭಾರತ ದೇಶವು ಹಿಂದೂ ರಾಷ್ಟ್ರವಾಯಿತೇ ಅದೂ ಇಲ್ಲ. ಮತ್ತದೇ ಗಾಂಧಿ ಕುಟುಂಬವು ಭಾರತದಲ್ಲಿ ಆಡಳಿತ ನಡೆಸಿ ಜಾತ್ಯಾತೀಯತೆ, ಭಯೋತ್ಪಾದನೆ ಹೆಸರಲ್ಲಿ ಭಾರತವನ್ನು ಇಸ್ಲಾಮಿಕರಣಗೊಳಿಸಲು ಪ್ರೇರೇಪಣೆ ನೀಡಿದ್ದು ಕಠು ಸತ್ಯ," ಎಂದು ಗುಡುಗಿದರು.
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶೈಕ್ಷಣಿಕ ತಿಳುವಳಿಕೆ ನೀಡಿ
"ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾವಿರ ವರುಷಗಳ ಇತಿಹಾಸವಿದ್ದರೂ ಸಹ ಅದನ್ನು ಮಕ್ಕಳಿಗೆ ತಿಳಿಸುವ ಶೈಕ್ಷಣಿಕ ವ್ಯವಸ್ಥೆನೂ ಇಲ್ಲ. ಸ್ವಾತಂತ್ರ್ಯ ದಿನಾಚರಣೆಯಂದು ಮಹಾತ್ಮಾ ಗಾಂಧೀ ಕಿ ಜೈ, ನೆಹರೂ ಕಿ ಜೈ, ಇಂದಿರಾ ಗಾಂಧಿ ಕಿ ಜೈ ಅಂತಷ್ಟೆ ಜೈಕಾರಗಳನ್ನು ಹಾಕಿಕೊಂದು ಬರಲಾಗಿದೆ," ಎಂದು ಜಗದೀಶ್ ಕಾರಂತ್ ಆಕ್ಷೇಪ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ಜೊತೆಯಲ್ಲಿ ಯುವಕರ ರಕ್ತಬಿಸಿ ಏರಿಸಿದ ಸುಭಾಶ್ಚಂದ್ರ ಬೋಸ್, ಝಾನ್ಸಿ ರಾಣಿ ಲಕ್ಷ್ಮೀ ಭಾಯಿ, ವೀರ ಸಾವರ್ಕರ್, ಭಗತ್ ಸಿಂಗ್ರಂತಹ ವೀರ ಸ್ವಾತಂತ್ರ್ಯ ಹೋರಾಟಗಾರರಿಗೂ ಜೈಕಾರ ಹಾಕುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅವರ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟದ ರಕ್ತಸಿಕ್ತ ತ್ಯಾಗಮನೋಭಾವದ ಅಧ್ಯಾಯವನ್ನು ಮಕ್ಕಳಿಗೆ ಬಾಲ್ಯದಲ್ಲೇ ತಿಳಿಯಪಡಿಸುವ ಶೈಕ್ಷಣಿಕ ವ್ಯವಸ್ಥೆ ಬೇಕೆಂದು ಕಾರಂತ್ ಹೇಳಿದರು.
ಶಾಲಾ ಪಠ್ಯ ಪುಸ್ತಕದಲ್ಲಿ ಭಾರತ ದೇಶದಲ್ಲಿ ಆಳ್ವಿಕೆ ನಡೆಸಿದ್ದ ಅಕ್ಬರ್, ಹುಮಾಯೂನ್ರಂತಹ ಮೊಗಲ ದೊರೆಗಳ ಬಗ್ಗೆಯೇ ವಿಜೃಂಭಿಸಿ ಬರೆಯಲಾಗಿದೆ. ಯಾವ ದೇಶಕ್ಕೂ ಇಲ್ಲದ ಸಾವಿರ ವರುಷಗಳ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ನಮ್ಮ ದೇಶಕ್ಕಿದ್ದು ಸಂಗ್ರಾಮದಲ್ಲಿ ದೇಶಕ್ಕಾಗಿ ನೆತ್ತರು ಹರಿಸಿದ ಹೋರಾಟಗಾರರ ವೀರಗಾಥೆಯನ್ನು ಪಠ್ಯಗಳಲ್ಲಿ ಬರೆಯಬೇಕು ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಹಿಂ.ಜಾ.ವೇ ಕಾರ್ಯಕರ್ತರು ತೊಕ್ಕೊಟ್ಟಿನಿಂದ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ವರೆಗೆ ಬೈಕ್ ರ್ಯಾಲಿ ನಡೆಸಿದರು. ಹಿಂದೂ ಜಾಗರಣಾ ವೇದಿಕೆ ಮಂಗಳೂರು ಮಹಾನಗರದ ಅಧ್ಯಕ್ಷರಾದ ಕಿಶೋರ್ ಕುಮಾರ್, ಜಗದೀಶ್ ಆಳ್ವ ಕುವೆತ್ತಬೈಲು, ಬಾಬು ಶೆಟ್ಟಿ ದೇಸೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications