ರೆಸಾರ್ಟ್ ರಾಜಕಾರಣದ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಯುಟಿ ಖಾದರ್
ಮಂಗಳೂರು, ಜನವರಿ 20:ಕೆಲವು ದಿನಗಳಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಉಂಟಾಗಿದ್ದು, ಈ ಎಲ್ಲಾ ಗೊಂದಲ ಹಾಗೂ ಸಮಸ್ಯೆಗಳಿಗೂ ಪರಿಹಾರ ಕಾಣಬೇಕೆಂಬ ನಿಟ್ಟಿನಲ್ಲಿ ಚರ್ಚಿಸಲು ಶಾಸಕರು ಒಟ್ಟಾಗಿ ಒಂದು ಕಡೆ ಸೇರಿದ್ದೇ ಹೊರತು ರೆಸಾರ್ಟ್ ರಾಜಕಾರಣ ಮಾಡಲು ಅಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕರು ಎಂಟು-ಹತ್ತು ದಿವಸ ಕ್ಷೇತ್ರ ಬಿಟ್ಟು ಎಲ್ಲೂ ನಿಲ್ಲಲಿಲ್ಲ. ನಾವು ಒಗ್ಗಟ್ಟಾಗಿ ಒಂದು ಕಡೆ ಹೋಗಿದ್ದು, ಎಲ್ಲಾ ಗೊಂದಲ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಾಣಲು ಎಂದು ತಿಳಿಸಿದರು.
ಸೃಷ್ಟಿಪಡಿಸಲಾಗಿರುವ ಗೊಂದಲ, ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಇದುವರೆಗೂ ದೊರಕಿಲ್ಲ. ಹೀಗಾಗಿ ಇವಕ್ಕೆಲ್ಲ ಒಂದು ಅಂತ್ಯ ಕಂಡುಕೊಳ್ಳಬೇಕೆಂದು ನಮ್ಮ ಪಕ್ಷದವರು ಹೀಗೆ ಮಾಡಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದೇವೆ ಎಂದಾಕ್ಷಣ ನಮ್ಮ ಪಕ್ಷದವರು ಯಾರೂ ತಮ್ಮೊಂದಿಗೆ ಬರಲು ತಯಾರಿಲ್ಲ ಎಂದು ಬಿಜೆಪಿಯವರಿಗೆ ಅರಿವಾಗುತ್ತದೆ. ಹೋದವರನ್ನು ಮತ್ತೆ ತಿರುಗಿ ಕರೆಸಿಕೊಳ್ಳಲು ನಾವು ಈ ರೀತಿ ಕ್ರಮ ಕೈಗೊಳ್ಳಬೇಕಾಯಿತು.

ಇನ್ನು ಈ ಬಗ್ಗೆ ಮಾಧ್ಯಮಗಳಲ್ಲೂ ನಾನಾ ರೀತಿಯ ಹೇಳಿಕೆಗಳು ಕೇಳಿ ಬರುತ್ತಿದ್ದವು. ಇದೆಲ್ಲದ್ದಕ್ಕೂ ತಾರ್ಕಿಕ ಅಂತ್ಯ ದೊರಕಿಸಲು ಈ ರೀತಿಯ ಕ್ರಮ ಕೈಗೊಂಡಿದ್ದೇವೆಯೇ ಹೊರತು ಇನ್ನೊಂದು ಪಕ್ಷವನ್ನು ಬೀಳಿಸುವ, ಪ್ರಜಾಪ್ರಭುತ್ವ ವಿರೋಧಿಯಾಗಿ ಕೆಲಸ ಮಾಡುವ ಉದ್ದೇಶ ಇಲ್ಲ ಎಂದು ಖಾದರ್ ಹೇಳಿದರು.












Click it and Unblock the Notifications