ಮಂಗಳೂರು: ಮಾಯದಂಥಾ ಮಳೆ ಮಾಯವಾಯಿತೆಲ್ಲಿ?
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಇಡೀ ಮಂಗಳೂರು ಮಳೆಯಿಂದ ನಡುಗಿಹೋಗಿತ್ತು. ಮುಂಗಾರು ಪ್ರವೇಶದ ಆರಂಭದಲ್ಲೇ ಆರ್ಭಟಿಸಿದ್ದ ಮಳೆ, ಜನಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ರಾತ್ರಿಯೆಲ್ಲಾ ಬಿಡುವು ಕೊಡದೆ ಸುರಿದ ಮಳೆಗೆ ಬೆಳಗಾಗುವಷ್ಟರಲ್ಲಿ ಊರಿಗೆ ಊರೇ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತಿತ್ತು. ರಸ್ತೆಗಳಲ್ಲೆಲ್ಲಾ ತುಂಬಿ ಹರಿದ ನೀರು, ಕಂಗಾಲಾದ ಜನ. ಮನೆ, ಅಂಗಡಿಗಳಿಗೆ ನೀರು ನುಗ್ಗಿ ಆದ ಹಾನಿಗಳಿಗೆ ಲೆಕ್ಕವಿಲ್ಲ. ಯಾವ ಕಡೆ ನೋಡಿದರೂ ನೀರು ನೀರು ನೀರು... ಈ ಮಾಯದಂಥ ಮಳೆ ಮಾಯವಾದರೆ ಸಾಕು ಎಂದು ಜಪಿಸುತ್ತಿದ್ದವರೇ ಎಲ್ಲ. ಈ ಘಟನೆ ನಡೆದು ಇಂದಿಗೆ ಒಂದು ವರ್ಷವಷ್ಟೆ.
ಕಳೆದಿದ್ದು ವರ್ಷವಾದರೂ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧ. ವರ್ಷದ ಹಿಂದೆ ನೀರಿನಿಂದ ತುಂಬಿ ಹರಿದಿದ್ದ ಇಲ್ಲಿನ ನದಿಗಳಲ್ಲಿ ಬಹುಪಾಲು ಈಗ ಒಣಗುವ ಹಂತದಲ್ಲಿವೆ. ಕುಡಿಯುವ ನೀರಿಗೂ ಕೊರತೆಯಾಗಿ ಮಂಗಳೂರು ಮಹಾನಗರ ಪಾಲಿಕೆ ನೀರು ರೇಶನಿಂಗ್ ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ನೀರಿನ ಅಭಾವದಿಂದ ತತ್ತರಿಸುವ ಸ್ಥಿತಿ ಈಗಿನದ್ದು. ಧರ್ಮಸ್ಥಳದಲ್ಲಿ ಪ್ರವಾಸಿಗರಿಗೆ ನೀರಿನ ಅಭಾವದ ಕಾರಣ ಪ್ರವಾಸ ಮುಂದೂಡುವಂತೆ ಸ್ವತಃ ಧರ್ಮಾಧಿಕಾರಿಗಳೇ ಮನವಿ ಮಾಡಿದ್ದು ನೀರಿನ ಬವಣೆಗೆ ಹಿಡಿದ ಕನ್ನಡಿ. ಬದಲಾಗಿದ್ದು ವರ್ಷವಷೇ ಅಲ್ಲ, ಇಡೀ ಮಂಗಳೂರಿನ ಚಿತ್ರಣ ಎಂಬುದು ಈಗ ಗೋಚರಿಸುತ್ತಿದೆ.
ಆಗ ಅತಿವೃಷ್ಟಿ; ಈಗ ಅನಾವೃಷ್ಟಿ
ಕೇರಳ ಮೂಲಕ ಕರಾವಳಿಯಲ್ಲಿ ಪೂರ್ವ ಮುಂಗಾರು ಹೆಚ್ಚೇ ಆರ್ಭಟಿಸಿತ್ತು. ಉಡುಪಿ ಮತ್ತು ಮಂಗಳೂರಿನಲ್ಲಿ ಸುರಿದ ಮಳೆಯು ಜನರಲ್ಲಿ ಪ್ರವಾಹದ ಭೀತಿಯನ್ನು ಉಂಟು ಮಾಡಿತ್ತು. ಅತಿವೃಷ್ಟಿಯಿಂದಾಗಿ ಅಂಡರ್ ಪಾಸ್ಗಳಲ್ಲಿ, ರಸ್ತೆಗಳಲ್ಲಿ , ತೋಟಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಮಳೆ ನೀರು ನಿಂತು ಜನಜೀವನವೇ ಅಸ್ತವ್ಯಸ್ಥಗೊಂಡಿತ್ತು. ಬೆಳ್ತಂಗಡಿ, ಸುಳ್ಯ, ಬಂಟ್ವಾಳಗಳಲ್ಲಿ ಭರ್ಜರಿ ಮಳೆಯಾಗಿತ್ತು. ಈಗ ಇಡೀ ಚಿತ್ರಣ ಬದಲಾಗಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಿಯಾಗಿ ಮಳೆಯೂ ಆಗಿಲ್ಲ. ಇದರಿಂದ ನದಿಗಳು ಬತ್ತಿಹೋಗಿದ್ದು, ಕುಡಿಯುವ ನೀರಿಗೂ ತತ್ವಾರವಾಗಿದೆ.
ಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರು
ನೀರು ರೇಶನಿಂಗ್ ಆರಂಭ
ಕರಾವಳಿಯಲ್ಲಿ ನೀರಿನ ಕೊರತೆ ಹೇಗೆ ಸಾಧ್ಯ ಎನ್ನುವವರಿಗೆ ಇಂದಿನ ಪರಿಸ್ಥಿತಿ ಎಲ್ಲವನ್ನೂ ಬಿಡಿಸಿ ಹೇಳುತ್ತಿದೆ. ನೀರಿನ ಅಭಾವ, ಅದರಲ್ಲೂ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ರೇಶನಿಂಗ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಜೊತೆಗೆ ನೀರಿಗೆ ಅಭಾವವಿರುವ ಕಾರಣ ಜನರು ತಮ್ಮ ಮನೆಗಳಲ್ಲಿ ಕೈತೋಟಗಳಿಗೆ, ವಾಹನ ತೊಳೆಯಲು, ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವಂತೆ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ಪ್ರವಾಹ ಪೀಡಿತ ಕರಾವಳಿಗೆ ಪರಿಹಾರ: ಸಿಎಂ ಎಚ್ಡಿಕೆ ಭರವಸೆ
ಆಗ ಮಳೆ ಹಾನಿ ಪರಿಹಾರ; ಈಗ ನೀರಿನ ಅಭಾವಕ್ಕೆ ಪರಿಹಾರ
ಅಂದು ನೆರೆ ಹಾವಳಿಯಿಂದ ತತ್ತರಿಸಿದ್ದ ಕರಾವಳಿಗೆ ಸಿ.ಎಂ. ಕುಮಾರಸ್ವಾಮಿ ಪರಿಹಾರ ನೀಡಲು ಸೂಚಿಸಿದ್ದರು. ಜಿಲ್ಲಾಡಳಿತಕ್ಕೆ ಅತಿವೃಷ್ಟಿ ಅನುದಾನದಡಿ ಹೆಚ್ಚು ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದ್ದರು. ಇದೀಗ ನೀರಿನ ಅಭಾವದಿಂದ ಇದೇ ಮೊದಲ ಬಾರಿಗೆ ಧರ್ಮಸ್ಥಳದಲ್ಲಿ ಆಗಿರುವ ಸಮಸ್ಯೆಗೂ ಪರಿಹಾರ ದೊರಕಿಸುವುದಾಗಿ ಹೇಳಿದ್ದಾರೆ. ಈ ಸಮಸ್ಯೆಗೆ ಸ್ಪಂದನೆ ದೊರಕಿಸಿ ಅನುದಾನಕ್ಕೆ ಒಪ್ಪಿಗೆ ನೀಡಿದ್ದಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಕುಮಾರಸ್ವಾಮಿಯವರಿಗೆ ಧನ್ಯವಾದವನ್ನೂ ಹೇಳಿದ್ದಾರೆ.
ಕುಮಾರಸ್ವಾಮಿಗೆ ಧನ್ಯವಾದ ಹೇಳಿದ ಡಿ.ವೀರೇಂದ್ರ ಹೆಗ್ಗಡೆ
ಟ್ಯಾಂಕರ್ ನೀರಿಗೆ ಮೊರೆ ಹೋದ ಜನ
ಕರಾವಳಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ನೀರಿನ ಬಿಸಿ ತಟ್ಟಿದ್ದು, ವಿದ್ಯಾರ್ಥಿಗಳು ಉಳಿದುಕೊಳ್ಳುವ ಪಿಜಿ, ಹಾಸ್ಟೆಲ್ ಗಳಲ್ಲೂ ನೀರಿಲ್ಲದೆ ಸಮಸ್ಯೆ ಅನುಭವಿಸಬೇಕಾಗಿದೆ. ಕೆಲವೆಡೆ, ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್ ಕೂಡ ಲಭಿಸದ ಪರಿಸ್ಥಿತಿ ಇದೆ. ನೀರಿನ ಬರ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಕೆಲವು ಹೋಟೆಲ್ಗಳು ಬೋರ್ವೆಲ್, ಬಾವಿಗಳ ನೀರನ್ನು ಆಶ್ರಯಿಸಿದ್ದರೆ ಕೆಲವು ಚಿಕ್ಕ ಹೋಟೆಲ್ ಗಳು ಪಾಲಿಕೆ ನೀರು, ಟ್ಯಾಂಕರ್ ನೀರಿಗಾಗಿ ಕಾಯುವ ಸ್ಥಿತಿ ಎದುರಾಗಿದೆ.