ವಿಟ್ಲ ಅಪಹರಣ ಪ್ರಕರಣದಲ್ಲಿ ಜೋಗಿ ಹನೀಫ್ ಅರೆಸ್ಟ್
ವಿಟ್ಲದ ಅಬ್ದುಲ್ ರಝಾಕ್ ಮೋನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಗಿ ಹನೀಫ್ ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಇನ್ನು ತಲೆ ತಪ್ಪಿಸಿಕೊಂಡಿರುವ ಆತನ ಸಹಚರರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ
ಮಂಗಳೂರು, ಮಾರ್ಚ್ 24: ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಪ್ರಮುಖ ಆರೋಪಿ ಜೋಗಿ ಹನೀಫ್ ನನ್ನು ಬಂಧಿಸಿದ್ದಾರೆ. ಕೇಪು ಗ್ರಾಮದ ನೀರ್ಕಜೆ ಕುಕ್ಕೆಬೆಟ್ಟು ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್ (36) ಬಂಧಿತ ಆರೋಪಿ.
ಮಾರ್ಚ್ 19ರ ರಾತ್ರಿ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬ್ದುಲ್ ರಝಾಕ್ ಮೋನು ತನ್ನ ಸ್ನೇಹಿತ ಮನ್ಸೂರು ಎಂಬಾತನ ಬೈಕ್ ನಲ್ಲಿ ವಿಟ್ಲದಿಂದ ಒಕ್ಕೆತ್ತೂರಿಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಜೋಗಿ ನೇತೃತ್ವದ ತಂಡ ಅಪಹರಿಸಿತ್ತು. ಕೂಡಲೇ ವಿಟ್ಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.[ಅಪ್ರಾಪ್ತೆ ಮೇಲೆ ಕ್ಯಾಮರಾಮನ್ ನಿಂದ ಅತ್ಯಾಚಾರ]

ಈ ಮಧ್ಯೆ ಅಪಹರಣಕಾರರು ರಝಾಕ್ಗೆ ಕೋಳಿ ಅಂಕಕ್ಕೆ ಬಳಸುವ ಚೂರಿಯಿಂದ ಚುಚ್ಚಿ ಗಾಯಗೊಳಿಸಿ, 10 ಸಾವಿರ ನಗದು, ಮೊಬೈಲ್ ಫೋನ್ ದರೋಡೆ ಮಾಡಿದ್ದರು. ಅಲ್ಲದೆ ಬಿಡುಗಡೆ ಮಾಡಲು 2 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದರು. ಪೊಲೀಸರ ಕಾರ್ಯಾಚರಣೆ ಮಾಹಿತಿ ಅರಿತ ಅಪಹರಣಕಾರರು, ರಝಾಕ್ನನ್ನು ದೇರಳಕಟ್ಟೆಯಲ್ಲಿ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು.
ಮನ್ಸೂರ್ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದರು. ವಿಟ್ಲ ಠಾಣೆ ಪೊಲೀಸರು ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಹನೀಫ್ ಯಾನೆ ಜೋಗಿ ಹನೀಫ್ ಶುಕ್ರವಾರ ಕೊಡಪದವು ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ಪಡೆದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.[ಪುತ್ತೂರು: ಕೃಷ್ಣ ಮೃಗ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ]
ಆತನಿಂದ ರಝಾಕ್ನ ಮೊಬೈಲ್ ಫೋನ್, 4 ಸಾವಿರ ರುಪಾಯಿ ನಗದು, ಹಲ್ಲೆ ನಡೆಸಿದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಹನೀಫ್ ಗಾಂಜಾ ದಂಧೆಯಲ್ಲಿ ತೊಡಗಿದ್ದ. ಈತನ ಮೇಲೆ ಗಾಂಜಾ ಮಾರಾಟ, ಸೇವನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಅಲ್ಲದೇ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿವೆ. ಅಪಹರಣ ಪ್ರಕರಣದಲ್ಲಿ ಭಾಗಿಯಾದ ಹನೀಫ್ ನ ಇನ್ನಿಬ್ಬರು ಸಹಚರರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.












Click it and Unblock the Notifications