ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ ಎಂದು ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ ಮಾಡಿದ್ದಾರೆ. ಹಾಗಾದರೆ ಈ ಕುರಿತು ಪೇಜಾವರ ಶ್ರೀಗಳು ಇದುವರೆಗೂ ಯಾರಿಗೆಲ್ಲ ಮನವಿ ಸಲ್ಲಿಸಿದ್ದಾರೆ ಎನ್ನುವ ವಿವರ ಇಲ್ಲಿದೆ.
ಉಡುಪಿ, ಫೆಬ್ರವರಿ, 01: ಗ್ರಾಮಗಳು ವೃದ್ಧಾಶ್ರಮವಾಗಿವೆ. ಗದ್ದೆಗಳು ಹಡೀಲು ಬಿದ್ದಿದೆ. ಕೆಲಸಕ್ಕಾಗಿ ವಲಸೆ ಹೋದ ಯುವಕ-ಯುವತಿಯರು ಮರಳಿ ಮನೆಗೆ ಬರೋದನ್ನೇ ಹಿರಿಯ ಜೀವಗಳು ಕಾಯುತ್ತಿವೆ. ಆದ್ದರಿಂದ ಆದಷ್ಟು ಬೇಗ ಉಡುಪಿಯಲ್ಲೊಂದು ಸಾಫ್ಟ್ವೇರ್ ಐಟಿ ಪಾರ್ಕ್ ನಿರ್ಮಿಸಿ ಎಂದು ಉಡುಪಿಯ ಪೇಜಾವರ ಶ್ರೀ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ
ಉಡುಪಿಯಲ್ಲಿ ಸಾಫ್ಟ್ವೇರ್ ಐಟಿ ಪಾರ್ಕ್ ಸ್ಥಾಪನೆ ಮಾಡಿ ಎಂದು ಪೇಜಾವರ ಶ್ರೀ ಕೇಂದ್ರ ಸರ್ಕಾಕ್ಕೆ ಆಗ್ರಹಿಸಿದ್ದಾರೆ. ಸಾಫ್ಟ್ವೇರ್ ಪಾರ್ಕ್ಗೆ 500 ಕೋಟಿ ಅನುದಾನ ಶೀಘ್ರವೇ ಒದಗಿಸುವಂತೆ ಪೇಜಾವರ ಶ್ರೀ ಒತ್ತಾಯ ಮಾಡಿದ್ದಾರೆ. ಹಾಗೆಯೇ ಕರಾವಳಿಯ ಕೌಟುಂಬಿಕ ಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿಯ ಗ್ರಾಮಗಳು ವೃದ್ಧಾಶ್ರಮಗಳಂತಾಗಿದೆ. ಇದರಿಂದ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಆಸರೆ ಇಲ್ಲದಂತಾಗಿದೆ. ಯುವಕರ ಪ್ರತಿಭಾ ಪಲಾಯನದಿಂದ ಕರಾವಳಿಯ ಕೃಷಿ ಭೂಮಿಗಳು ಹಡಿಲು ಬಿದ್ದಿವೆ. ಹೀಗಾಗಿ ಜಿಲ್ಲೆಯ ಆರ್ಥಿಕತೆ ಅಭಿವೃದ್ಧಿಗೆ ಸಾಫ್ಟ್ವೇರ್ ಪಾರ್ಕ್ ನಿರ್ಮಿಸುವುದು ಅತಿ ಅಗತ್ಯ ಎಂದು ಪೇಜಾವರ ಶ್ರೀ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಫಾಝಿಲ್ ಹತ್ಯೆ ಸಮರ್ಥಿಸಿಕೊಂಡ ಶರಣ್ ಪಂಪ್ವೆಲ್: ಶೌರ್ಯ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ
ರಾಜೀವ್ ಚಂದ್ರಶೇಖರ್ಗೆ ಮನವಿ
ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಎಂಟ್ರಪ್ರನರ್ಶಿಪ್ ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಪೇಜಾವರ ಶ್ರೀ ಪತ್ರ ಬರೆದಿದ್ದು, ರಾಜ್ಯದಿಂದ ಪ್ರಸ್ತಾವನೆ ಬಂದ ತಕ್ಷಣ ಕಾರ್ಯಪ್ರವೃತ್ತ ಆಗುವುದಾಗಿ ರಾಜೀವ್ ಚಂದ್ರಶೇಖರ್ ಭರವಸೆ ನೀಡಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೂ ಈ ಕುರಿತು ಶ್ರೀಗಳು ಪತ್ರ ಬರೆದಿದ್ದಾರೆ. ಉಡುಪಿ ಜಿಲ್ಲಾಡಳಿತದಿಂದ ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಪೇಜಾವರ ಶ್ರೀ ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂಬೈ, ಪೂನಾ, ಬೆಂಗಳೂರು, ಅಮೆರಿಕಾ ಸೇರಿದಂತೆ ವಿವಿಧಡೆಗಳಿಗೆ ಕರಾವಳಿಯ ಯುವಕರ ಪ್ರತಿಭಾ ಪಲಾಯನವಾಗುತ್ತಿದೆ. ಐಟಿ ಪಾರ್ಕ್ ನಿರ್ಮಿಸುವುದರಿಂದ ಯುವಕರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಇದರಿಂದ ಹೆತ್ತವರಿಗೆ ಮಕ್ಕಳು ಆಸರೆ ನೀಡಿದಂತಾಗುತ್ತದೆ. ಯೋಗ್ಯ ಉದ್ಯೋಗ ದೊರೆತರೆ ಯುವಕರು ವಲಸೆ ಹೋಗುವುದು ನಿಲ್ಲುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.