ಫೆ.4 ರಂದು ಹಿಂದೂ ಮಹಾಸಭಾದ ಕೃತ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು, ಫೆಬ್ರವರಿ 03: ಗಾಂಧಿ ಹತ್ಯೆಗೆ ಕಾರಣ ಮತೀಯ ಉಗ್ರವಾದ. ಮತೀಯ ಉಗ್ರವಾದ ದೇಶದಲ್ಲಿ ಹೆಚ್ಚಾಗುತ್ತಿದ್ದು, ಹಿಂಸಾಚಾರ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ. ನಾಳೆ ಹಿಂದೂಮಹಾಸಭಾದ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಮಂಡ್ಯ ಸೀಟು ಬೇಡಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಕಾಂಗ್ರೆಸ್ ನಲ್ಲಿ ಸೀಟು ಹಂಚಿಕೆ ಚರ್ಚೆ ಆಗಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಕಾಂಗ್ರೆಸ್ ಕ್ಷೇತ್ರದಲ್ಲಿ ಜೆಡಿಎಸ್ ನವರು ಕೇಳಬಹುದು. ಜೆಡಿಎಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ಕೇಳಬಹುದು. ಎಲ್ಲರಿಗೂ ಸಮಾನ ಅವಕಾಶ ನೀಡುತ್ತೇವೆ. ಸೀಟಿಗೆ ಬೇಡಿಕೆ ಇಡೋದು ಎಲ್ಲರ ಹಕ್ಕು ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ ಬಿಜೆಪಿಯವರು 30ಕೋಟಿ ಆಫರ್ ಕೊಟ್ಟಿದ್ದಾರೆ. ಹಣ ಇದೆ ತೆಗೆದುಕೊಳ್ಳಿ ಅಂದಿದ್ದಾರೆ. ಬಿಜೆಪಿಯವರಿಗೆ ಹಣ ಎಲ್ಲಿಂದ ಬರುತ್ತೆ?. ಸಾಲದೆಂಬಂತೆ ಸ್ಟಾರ್ ಹೊಟೇಲ್ ನಲ್ಲಿ ವಾಸ್ತವ್ಯ ಮಾಡ್ತಾರೆ. ಬಿಜೆಪಿಯದ್ದು ಪ್ರಜಾಪ್ರಭುತ್ವ ವಿರೋಧಿ ನೀತಿ. ಬಿಜೆಪಿಯವರಂತಹ ಮೋಸಗಾರರು, ಭ್ರಷ್ಟರು ಯಾರೂ ಇಲ್ಲ ಎಂದು ಆರೋಪಿಸಿದರು.
ಶಾಸಕ ಗಣೇಶ್ - ಆನಂದ್ ಸಿಂಗ್ ಹೊಡೆದಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ದಿನೇಶ್ ಗುಂಡೂರಾವ್, ಗಣೇಶ್ ಪ್ರಕರಣದ ಬಗ್ಗೆ ಪಕ್ಷದ ಸಮಿತಿ ವಿಚಾರಣೆ ಮಾಡುತ್ತಿದೆ. ಡಿಸಿಎಂ ಪರಮೇಶ್ವರ್ ಸೋಮವಾರ ಸಭೆ ನಡೆಸಲಿದ್ದು, ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.












Click it and Unblock the Notifications