ಪೋಸ್ಟ್ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ ಮತ್ತು ದಕ್ಷಿಣ ಕನ್ನಡ ಬಿಜೆಪಿ ನಡುವೆ ಟಾಕ್ ವಾರ್!
ಮಂಗಳೂರು, ಡಿಸೆಂಬರ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ತೀವ್ರ ಸ್ವರೂಪವನ್ನು ಪಡೆಯುತ್ತಿದೆ.
ಡಿ.11ರಂದು ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯನ್ನು ಹಿಡಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸುಮೋಟೋ ಕೇಸ್ ಹಾಕಿದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕರಾವಳಿಯ ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ತೀವ್ರ ಆಕ್ಷೇಪ ಹೊರಹಾಕಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, "ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕರ ವಿರುದ್ಧ ಬರೆದರವರನ್ನು ಜರಿದಿದ್ದಾರೆ. ಹೆಸರೆತ್ತದೆ ಪರೋಕ್ಷವಾಗಿ ಪೋಸ್ಟ್ಕಾರ್ಡ್ ಮಾಲೀಕ ಮಹೇಶ್ ವಿಕ್ರಂ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ ಸುದರ್ಶನ್, ಸಾಮಾಜಿಕ ಜಾಲತಾಣದಲ್ಲಿ ಕೆಲವು ಅತೃಪ್ತ ಆತ್ಮಗಳು ಕೆಲಸ ಮಾಡುತ್ತಿವೆ. ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಬಿರುಕು ಉಂಟು ಮಾಡುವ ಹುನ್ನಾರ ಇದು," ಎಂದು ಜರಿದಿದ್ದಾರೆ.
"ಸಾಮಾಜಿಕ ಜಾಲತಾಣದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಬರೆಯಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯಾಧ್ಯಕ್ಷರು ದುರ್ಬಲರು ಅಂತಾ ಬರೆಯಲಾಗಿದೆ. ರಾಜ್ಯಾಧ್ಯಕ್ಷರು ದುರ್ಬಲರು ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಕೇಳಿದ್ದಾರೆ. ರಾಜ್ಯಾಧ್ಯಕ್ಷ ಹುದ್ದೆ ನೀವು ಕೊಟ್ಟ ಭಿಕ್ಷೆ ಅಲ್ಲ, ಸಂಘಟನಾ ಚಾತುರ್ಯವನ್ನು ಮೆಚ್ಚಿ ಪಕ್ಷ ಕೊಟ್ಟ ಹುದ್ದೆ," ಎಂದು ತಿರುಗೇಟು ನೀಡಿದ್ದಾರೆ.
"ಸಾಮಾಜಿಕ ಜಾಲತಾಣದಲ್ಲಿ ಕಾಣದ ಕೈಗಳು ನಿರಂತರವಾಗಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಕಳೆದ ಅವಧಿಯಲ್ಲಿ ಈಗ ಟೀಕೆ ಮಾಡಿದವರೇ ನಳಿನ್ ಕುಮಾರ್ ಕಟೀಲ್ರನ್ನು ಹೊಗಳಿದ್ದರು. ಈಗ ತೆಗಳಿ ಬರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶಾಸಕ, ಸಂಸದರಾಗುವ ಕನಸನ್ನು ಕಾಣುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ನೈಜ ಕಾರ್ಯಕರ್ತರು ಈ ರೀತಿ ಬರೆಯುವುದಿಲ್ಲ," ಅಂತಾ ಸುದರ್ಶನ್ ಟೀಕಿಸಿದ್ದಾರೆ.
ಸುದರ್ಶನ್ ಮೂಡಬಿದಿರೆಯ ಟೀಕೆಗಳಿಗೆ ಮಹೇಶ್ ವಿಕ್ರಂ ಹೆಗ್ಡೆ ತೀಕ್ಷ್ಣ ಪ್ರತಿಕ್ರಿಯೆ
ಫೇಸ್ಬುಕ್ನಲ್ಲಿ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಮಹೇಶ್ ವಿಕ್ರಂ ಹೆಗ್ಡೆ, "ಇದು ಕೇವಲ ಒಂದು ಪ್ರಶ್ನೆಗೆ ನನಗೆ ಸಿಕ್ಕ ಬಿರುದು. ಹೌದು, ಕಳೆದ ಎರಡು ದಿನಗಳಿಂದ 'ಕೆಲವರು' ನನ್ನ ಪ್ರಶ್ನೆಗೆ ಉತ್ತರಿಸಲಾಗದೆ ನೇರವಾಗಿ ನಾನು ಕಾಂಗ್ರೆಸ್ ಏಜೆಂಟ್ ಎಂಬಂತೆ ಮಾತನಾಡುತ್ತಿದ್ದಾರೆ."
"ಕಳೆದ ಚುನಾವಣೆಯ ಸಂದರ್ಭದಲ್ಲಿ ನಾನು ಬಿಜೆಪಿ ಪರವಾಗಿ ಬರೆದಿದ್ದೆ ಮತ್ತು ಈಗ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುತ್ತಿದ್ದೇನೆ ಎಂಬ ವಿಚಾರವಾಗಿ ಈ ಬಾರಿ ನಾನು ಕಾಂಗ್ರೆಸ್ ಏಜೆಂಟ್ ಆಗಿ ಕಂಡುಬರುತ್ತಿದ್ದೇನೆ. ಇಂತಹ ಪೊಳ್ಳು ಪತ್ರಿಕಾಗೋಷ್ಠಿ ಅಥವಾ ಮಾತಿಗೆ ಯಾವತ್ತೂ ತಲೆಕೆಡಿಸಿಕೊಂಡವನು ನಾನಲ್ಲ. ಆದರೆ ಇದಕ್ಕೆ ಉತ್ತರ ಕೊಡದೆ ಕೂರುವವನೂ ನಾನಲ್ಲ," ಅಂತಾ ಹೇಳಿದ್ದಾರೆ.
"ಕಾಂಗ್ರೆಸ್ಸಿಗರ ಜನ್ಮ ಜಾಲಾಡಿದ ನನಗೆ ಬಿಜೆಪಿಯಲ್ಲಿ ಅಧಿಕೃತವಾಗಿ ಹುದ್ದೆ ನೀಡುವ ಮಾತು ಬಂದಾಗಲೇ ನಾನದನ್ನು ನಿರಾಕರಿಸಿದವನು. ಅಷ್ಟೇ ಮಾತ್ರವಲ್ಲದೆ ಪಕ್ಷದ ಕೆಲಸಕ್ಕೆ ನಾನು ಯಾವತ್ತೂ ಹಣ ಪಡೆದವನಲ್ಲ. ಆದರೆ ನನ್ನ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಜಿಲ್ಲಾಧ್ಯಕ್ಷರು ನಾನು ಕಾಂಗ್ರೆಸ್ ಏಜೆಂಟ್ ಎಂದು ಬಿರುದು ನೀಡಿದರು ಎಂದು ಮಹೇಶ್ ಹೇಳಿದ್ದಾರೆ. ಅಲ್ಲದೇ ಬಿಜೆಪಿ ನಾಯಕರಿಗೆ ಮೂರು ಪ್ರಶ್ನೆಗಳನ್ನು ಕೇಳಿರುವ ಮಹೇಶ್, ಪ್ರಶ್ನೆಗಳಿಗೆ ಉತ್ತರಿಸುವಂತೆ," ಸವಾಲೆಸಿದಿದ್ದಾರೆ.
ಕಾರ್ಕಳ ತಾಲೂಕಿನಲ್ಲಿರುವ ಕ್ರಷರ್ ಬ್ಯುಸಿನೆಸ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು ಮತ್ತು ಆ ಕ್ರಷರ್ ಬ್ಯುಸಿನೆಸ್ ಕಾಂಗ್ರೆಸ್ನ ಕೆಲವರಿಗೆ ಸೇರಿದ್ದು ಎಂಬುದು ಕೂಡ ಗೊತ್ತಿರಬಹುದು. ಆದರೆ ಆ ಬ್ಯುಸಿನೆಸ್ನಲ್ಲಿ ಪಾಲುದಾರನಾಗಿ ಯಾರ ಕಣ್ಣಿಗೂ ಕಾಣದಂತೆ ಇರುವ ವ್ಯಕ್ತಿ ಯಾರೆಂಬುದು ಗೊತ್ತಿದೆಯೇ? ಇದಕ್ಕೆ ನಿಮ್ಮಲ್ಲಿ ಉತ್ತರ ಇದೆಯೇ? ಅಂತಾ ಪ್ರಶ್ನಿಸಿದ್ದಾರೆ.
ವೇಣೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕೆಯಲ್ಲಿ ಪಾಲುದಾರಿಕೆ ಯಾರದ್ದು ಮತ್ತು ಯಾರೊಂದಿಗೆ? ಅಂತಾ ಸ್ಪಷ್ಟಪಡಿಸಿ ಎಂದು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.
ಕಣಚ್ಚೂರು ಮೋನುವಿನ ಮೆಡಿಕಲ್ ಪರವಾನಗಿಗಾಗಿ ದೆಹಲಿಗೆ ಹೋಗಿ, ರಾಜಕೀಯ ಪ್ರಭಾವದಿಂದ ಪಡೆದುಕೊಂಡ ಮಂಗಳೂರಿನ ಪ್ರಭಾವಿ ರಾಜಕಾರಣಿ ಯಾರು? ಎಂದು ಬಿಜೆಪಿ ನಾಯಕರನ್ನು ಮಹೇಶ್ ಪ್ರಶ್ನಿಸಿದ್ದಾರೆ.
ಯುಟಿ ಖಾದರ್ ಅವರ ತಮ್ಮ ನಡೆಸುತ್ತಿರುವ ವೈದ್ಯಕೀಯ ನರ್ಸಿಂಗ್ ಕಾಲೇಜಿನ ಪಾಲುದಾರರಾಗಿ ಇರುವ ನಾಯಕ ಯಾರು? ಅಂತಾ ಮಹೇಶ್ ವಿಕ್ರಂ ಹೆಗ್ಡೆ ಇನ್ನೊಂದು ಪ್ರಶ್ನೆ ಕೇಳಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಉತ್ತರ ಕೊಡುವುದಾಗಿ ಮಹೇಶ್ ವಿಕ್ರಂ ಹೆಗ್ಡೆ ಹೇಳಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರ ಮತ್ತು ನಳಿನ್ ಬೆಂಬಲಿಗರ ಟಾಕ್ ವಾರ್ ಆರಂಭವಾಗಿದೆ. ಈ ವಾರ್ ಹೇಗೆ ಕೊನೆಯಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications