ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿರುವ ವಾಮಂಜೂರಿನ ಮಹಿಳೆ
ಮಂಗಳೂರು, ನವೆಂಬರ್ 21: ಕುಟುಂಬ ನಿರ್ವಹಣೆಗಾಗಿ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯಪೀಡಿತ ಪತಿ ಹಾಗೂ ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಿರ್ವಹಿಸಲು ವಿದೇಶದ ಉದ್ಯೋಗಕ್ಕೆ ತೆರಳಿದ್ದ ಮಂಗಳೂರು ಸಮೀಪದ ವಾಮಂಜೂರಿನ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾಮಂಜೂರಿನ ಕೆಲರಾಯ್ ಕೋಡಿಯ 2ನೇ ಬ್ಲಾಕ್ ನಿವಾಸಿ ಬಾಲಪ್ಪ ಬಾಲಕೃಷ್ಣ ಎಂಬವರ ಪತ್ನಿ ವಿಜಯಾ (43) ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೀಡಾಗಿರುವ ಮಹಿಳೆ. 2015ರ ಜುಲೈ 15 ರಂದು ಬಜಪೆಯ ಮಹಿಳೆಯೊಬ್ಬರ ಪರಿಚಯದ ಮೂಲಕ ಸೌದಿ ಅರೇಬಿಯಾಕ್ಕೆ ಮನೆ ಕೆಲಸಕ್ಕೆಂದು ವಿಜಯಾ ತೆರಳಿದ್ದರು.

ಅಪರೂಪಕ್ಕೊಮ್ಮೆ ಅಲ್ಲಿಂದ ದೂರವಾಣಿ ಕರೆ ಮಾಡುತ್ತಿದ್ದ ವಿಜಯಾ ಆ ನಂತರ ಕರೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಮಂಗಳೂರಿನಲ್ಲಿ ಪತಿ ಬಾಲಕೃಷ್ಣ ಅನಾರೋಗ್ಯಪೀಡಿತರಾದ ಹಿನ್ನೆಲೆಯಲ್ಲಿ ವಿಜಯಾ ಅವರು ಮನೆಗೆ ಮರಳಲು ಬಯಸಿದರೂ ಅದು ಸಾಧ್ಯವಾಗಿಲ್ಲ.
ಆಕೆ ಕೆಲಸ ಮಾಡುವ ಮನೆಯ ಮಾಲೀಕ ವಿಜಯಾ ಅವರಿಗೆ ಮೊಬೈಲ್ ಫೋನ್ ಕೂಡ ನೀಡದೆ ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸೌದಿ ಅರೇಬಿಯಾದ ದಮಾಮ್ ನಲ್ಲಿರುವ ವಿಜಯ್ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ .
ಈ ಕುರಿತು ಕೇಂದ್ರದ ವಿದೇಶಾಂಗ ಸಚಿವಾಲಯವನ್ನು ಕೂಡ ಸಂಪರ್ಕಿಸಲಾಗಿದೆ. ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಂಡಿಯನ್ ಸೋಷಿಯಲ್ ಫೋರಂ ಸದಸ್ಯರು ವಿಜಯಾ ಪ್ರಕರಣವನ್ನು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗಮನಕ್ಕೂ ಕೂಡ ತಂದಿದ್ದಾರೆ.












Click it and Unblock the Notifications