ಒಂದಲ್ಲ..ಎರಡಲ್ಲ 50,000 ಕಿಮೀ ಸೈಕಲ್ ಯಾತ್ರೆ: ಯುವಕನ ಈ ಸಾಹಸಕ್ಕೆ ಕಾರಣವೇನು..?
ಮಂಗಳೂರು, ಡಿಸೆಂಬರ್ 15: ಕಲುಷಿತಗೊಳ್ಳುತ್ತಿರುವ ಗಾಳಿ - ನೀರು - ಆಹಾರಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣಾ ಜಾಗೃತಿಗಾಗಿ ಯುವ ಜನತೆ ಧ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ವಾತಾವರಣಕ್ಕಾಗಿ ಯುವಕನೊಬ್ಬ ಭಾರತದಾದ್ಯಂತ ಸುಮಾರು 50 ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಇಟಾವಾ ಜಿಲ್ಲೆಯ ರಾಬಿನ್ ಸಿಂಗ್ ಈ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಹಸಿರು ಭಾರತ ಚಳುವಳಿ ಎಂಬ ಅಭಿಯಾನದಡಿಯಲ್ಲಿ ಈ ಸೈಕಲ್ ಯಾತ್ರೆಯನ್ನು 2022ರ ಅಕ್ಟೋಬರ್ 6ರಂದು ಕನ್ಯಾಕುಮಾರಿಯಿಂದ ಆರಂಭಿಸಿದ್ದಾರೆ. 2024ರ ಮಾರ್ಚ್ 24ರಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಯಾತ್ರೆ ಮುಕ್ತಾಯಗೊಳ್ಳುತ್ತದೆ.

ಇಂದು( ಡಿಸೆಂಬರ್ 15) ಶುಕ್ರವಾರ ಅವರು ತಮ್ಮ ಸೈಕಲ್ ಯಾತ್ರೆಯ 434 ದಿನಗಳನ್ನು ಪೂರೈಸಿ 26,000 ಕಿ.ಮೀ. ದೂರವನ್ನು ಕ್ರಮಿಸಿ ಉಡುಪಿಯಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ವೇಳೆಗೆ ಅವರು ಮೈಸೂರಿನತ್ತ ಪ್ರಯಾಣಿಸಲಿದ್ದಾರೆ. ಈ ಸೈಕಲ್ ಯಾತ್ರೆಯ ವೇಳೆ ಅವರು ಭಾರತದಾದ್ಯಂತ ಸುಮಾರು 22 ರಾಜ್ಯಗಳಲ್ಲಿ ಸೈಕಲ್ ಯಾತ್ರೆ ನಡೆಸಲಿದ್ದಾರೆ. ಈಗಾಗಲೇ ಹತ್ತಾರು ರಾಜ್ಯಗಳನ್ನು ದಾಟಿ ಬಂದಿದ್ದಾರೆ.
ರಾಬಿನ್ ಸಿಂಗ್ ಸೈಕಲ್ ಯಾತ್ರೆಯ ಉದ್ದೇಶವೇನು..?
50 ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆ ಸುಲಭದ ಮಾತಲ್ಲ. ಆದರೆ ರಾಬಿನ್ ಸಿಂಗ್ ಪರಿಸರದ ಉಳಿವಿಗಾಗಿ ಈ ಯಾತ್ರೆ ಕೈಗೊಂಡಿದ್ದಾರೆ. ರಾಬಿನ್ ಸಿಂಗ್ ಈ ಸೈಕಲ್ ಯಾತ್ರೆಯ ವೇಳೆ ಎಲ್ಲಿಗೆ ಬರುತ್ತಾರೋ ಅಲ್ಲಿ ಸ್ಥಳೀಯರಿಗೆ ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುತ್ತಾರೆ. ಅಲ್ಲಿಯ ಪ್ರಖ್ಯಾತ ಸ್ಥಳಗಳನ್ನು ಸಂದರ್ಶಿಸುತ್ತಾರೆ.
ಈ ಸೈಕಲ್ ಯಾತ್ರೆ ವೇಳೆ ರಾಬಿನ್ ಸಿಂಗ್ ಈಗಾಗಲೇ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟು ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಮಧುರೈ ಮೀನಾಕ್ಷಿ ಹಾಗೂ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ.ಸ್ಥಳೀಯ ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿರುವ ರಾಬಿನ್ ಸಿಂಗ್, ವಿವಿಧ ಸ್ಥಳಗಳಲ್ಲಿ ಊಟ, ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ.

ತಾನೋರ್ವ ಭಾರತೀಯ ನಾಗರಿಕ, ಆದ್ದರಿಂದ ಭಾರತದಾದ್ಯಂತ ಎಲ್ಲ ನಾಗರಿಕರೂ ಸೈಕಲ್ ಯಾತ್ರೆಯ ವೇಳೆ ತನ್ನ ಬೇಕು - ಬೇಡಗಳಿಗೆ ಸ್ಪಂದಿಸಿದ್ದಾರೆ. ಆದ್ದರಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಯಾತ್ರೆಯನ್ನು ಪೂರೈಸುತ್ತಿದ್ದೇನೆ ಎಂದು ಹೇಳುವ ಅವರು ಮೂರು ಜೊತೆ ಬಟ್ಟೆಯನ್ನಷ್ಟೇ ತನ್ನೊಂದಿಗೆ ತಂದಿದ್ದಾರಂತೆ. 2000, ಕಿ.ಮೀ. ಬಳಿಕ ಸೈಕಲ್ ಸರ್ವೀಸ್ ಮಾಡುತ್ತಾರಂತೆ. ಒಟ್ಟಿನಲ್ಲಿ ರಾಬಿನ್ ಸಿಂಗ್ ಅವರು ಸೈಕಲ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಇಂದು ಮಂಗಳೂರಿನ ಸ್ಥಳೀಯರು ಹಾರೈಸಿದ್ದಾರೆ.












Click it and Unblock the Notifications