ಮಂಗಳೂರಲ್ಲಿ ಸೋಮವಾರದಿಂದ ರಂಜಾನ್ ಉಪವಾಸ
ಮಂಗಳೂರು, ಜೂನ್ 06 : ಮಂಗಳೂರು ನಗರದಲ್ಲಿ ಸೋಮವಾರದಿಂದ ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ. ರಂಜಾನ್ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುವವರ ಮೇಲೆ ಹಲ್ಲೆ ಅಥವಾ ಇನ್ನಿತರ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಯು.ಟಿ.ಖಾದರ್ ಪೊಲೀಸರಿಗೆ ಸೂಚಿಸಿದ್ದಾರೆ.
'ರಂಜಾನ್ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಜೊತೆ ಚರ್ಚಿಸಿರುವುದಾಗಿ' ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. [ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ]

ಮುಸ್ಲಿಂ ಬಾಂಧವರು ರಂಜಾನ್ ವಿಶೇಷ ಪ್ರಾರ್ಥನೆ ಮುಗಿಸಿ ರಾತ್ರಿ ಮನೆಗೆ ಹೋಗುತ್ತಾರೆ. ಮಳೆಗಾಲ ಆರಂಭವಾಗಿದ್ದು, ಅಲ್ಲಲ್ಲಿ ಮರಗಳು ಉರುಳಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುತ್ತದೆ. ಇಂತಹ ವೇಳೆಯಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ, ವಿದ್ಯುತ್ ಸಂಪರ್ಕ ಸ್ಥಗಿತಗೊಂಡರೆ ತಕ್ಷಣ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ಕೊಟ್ಟಿದ್ದಾರೆ. [ರಂಜಾನ್ : ರಸಲ್ ಮಾರ್ಕೆಟ್ ನಲ್ಲಿ ಒಣ ಹಣ್ಣುಗಳಿಗೆ ಬೇಡಿಕೆ]
ಶಾಂತಿ ಕಾಪಾಡಲು ಮನವಿ : 'ಮುಸ್ಲಿಂಮರ ಪಾಲಿಗೆ ರಂಜಾನ್ ತಿಂಗಳು ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಶಾಂತಿ, ಸೌಹಾರ್ದವನ್ನು ಕಾಪಾಡಿಕೊಳ್ಳಬೇಕೆಂದು' ಸಚಿವ ಯು.ಟಿ.ಖಾದರ್ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications