ಬಿಜೆಪಿಗೆ 2019ರದ್ದು ಕೊನೆಯ ಚುನಾವಣೆ: ಐವನ್ ಡಿಸೋಜಾ
ಮಂಗಳೂರು, ಮಾರ್ಚ್ 26: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್'ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುವುದನ್ನು ಬಿಜೆಪಿ ತಿಳಿದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಅಮಿತ್ ಶಾ ಅವರ ಕುವೆಂಪು ಸ್ಮಾರಕಕ್ಕೆ ಭೇಟಿ ನೀಡುವ ಮೊದಲು ಒಮ್ಮೆ ಯೋಚಿಸಬೇಕು ಎಂದು ಹೇಳಿದರು. ಬಿಜೆಪಿಯ ಸಿದ್ಧಾಂತಕ್ಕೂ ಕುವೆಂಪು ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು.
ಸದಾನಂದ ಗೌಡರು ಕಾಂಗ್ರೆಸ್ ಗೆ ಕೊನೆ ಚುನಾವಣೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಹಲವು ಚುನಾವಣೆ ಗೆದ್ದಿದೆ, ಸೋತಿದೆ. ಬಿಜೆಪಿ ಒಂದು ಬಾರಿ ಗೆದ್ದ ಕ್ಷೇತ್ರದಲ್ಲಿ ಮತ್ತೆ ಗೆದ್ದಿಲ್ಲ. ಆದರೆ ಕಾಂಗ್ರೆಸ್ ಗೆದ್ದಿದೆ. 2019ರ ಲೋಕಸಭಾ ಚುನಾವಣೆ ಬಿಜೆಪಿಗೆ ಕೊನೆಯ ಚುನಾವಣೆ ಎಂದು ಸದಾನಂದ ಗೌಡರು ತಿಳಿದುಕೊಳ್ಳಲಿ ಎಂದು ಅವರು ಕಿಡಿಕಾರಿದರು.
ಸದಾನಂದಗೌಡರು ಫೇಸ್ ಬುಕ್, ಟ್ವಿಟರ್ ನಲ್ಲಿ ಜಾಸ್ತಿ ಇರುತ್ತಾರೆ. ಟ್ವಿಟರ್, ಫೇಸ್ ಬುಕ್ ಗಿಂತ ತನ್ನ ಸಚಿವ ಸ್ಥಾನದ ಬಗ್ಗೆ ಗಮನ ಕೊಡಲಿ. ಅವರಿಗೆ 2019 ರ ಚುನಾವಣೆಯಲ್ಲಿ ಟಿಕೆಟ್ ಸಿಗುವುದೇ ಡೌಟು ಎಂದು ಅವರು ವ್ಯಂಗ್ಯವಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅರ್ಜಿ ಸಲ್ಲಿಸಿದ್ದೇನೆ . ಪಕ್ಷ ಟಿಕೆಟ್ ನೀಡಿದಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.