ಫೆಬ್ರವರಿ ಅಂತ್ಯದಲ್ಲಿ ಯುನಿವರ್ಸಿಟಿ ಕಾಲೇಜಿನ 150ನೇ ವರ್ಷಾಚರಣೆ
ಮಂಗಳೂರು, ನವೆಂಬರ್ 07 : ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಕಾಲೇಜಾದ ಯುನಿವರ್ಸಿಟಿ ಕಾಲೇಜಿನ 150ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿ ಕಿಶೋರ್ ಕುಮಾರ್ ಹೇಳಿದ್ದಾರೆ.
ಯುನಿವರ್ಸಿಟಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹಿರಿಯ ಹಳೆವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಜೊತೆ ಸಮಾಲೋಚನೆ ನಡೆಸಿದ ಅವರು, ಚುನಾವಣೆಗೆ ಮುನ್ನ ಫೆಬ್ರವರಿ ಕೊನೆಯ ವಾರವೇ ಕಾರ್ಯಕ್ರಮ ನಡೆಸುವ ಇಂಗಿತ ವ್ಯಕ್ತಪಡಿಸಿದರು. ಕಾಲೇಜಿನ ಮಾಜಿ ಪ್ರಾಂಶುಪಾಲರನ್ನು ಒಳಗೊಂಡಂತೆ ಹಿರಿಯರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಬೇಕು ಎಂದರು.
ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಮಾತನಾಡಿ, 150ನೇ ವರ್ಷಾಚರಣೆಯಲ್ಲಿ ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ-ರಕ್ಷಕ ಸಂಘ, ದಾನಿಗಳ ಮೂಲಕ ಸಂಪನ್ಮೂಲ ಕ್ರೋಢೀಕರಣ, ಅವಶ್ಯಕ ತರಗತಿ ಕೊಠಡಿಗಳು, ಸ್ಮರಣ ಸಂಚಿಕೆ ಪ್ರಕಟಣೆ ಪ್ರಮುಖ ಪಾತ್ರ ವಹಿಸಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ಈಗಾಗಲೇ ಆರಂಭವಾಗಿದೆ. ಕಟ್ಟಡದ ಸಂಪೂರ್ಣ ವೆಚ್ಚ ಭರಿಸುವ ದಾನಿಗಳಿದ್ದರೆ ಅವರ ಹೆಸರಿನಲ್ಲೇ ಕಟ್ಟಡ ನಿರ್ಮಿಸಲು ವಿಶ್ವವಿದ್ಯಾನಿಲಯ ಅನುಮತಿ ನೀಡುವ ವಿಶ್ವಾಸವಿದೆ ಎಂದರು.

ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಶಿವರಾಮ ಶೆಟ್ಟಿ, "150 ವರ್ಷಗಳ ನೆನಪನ್ನು ಪೂರ್ಣವಾಗಿ ಹಿಡಿದಿಡುವುದು ಸಾಧ್ಯವಿಲ್ಲ. ಹೀಗಾಗಿ, ಸ್ಮರಣ ಸಂಚಿಕೆಯ ಪುಟಗಳು ಮತ್ತು ಸ್ವರೂಪವನ್ನು ನಿರ್ಧರಿಸಬೇಕು. ಲೇಖನಗಳ ಸಂಗ್ರಹ ಮತ್ತು ಸೋಸುವಿಕೆಯಲ್ಲಿ ಸ್ಪಷ್ಟತೆಯಿರಬೇಕು" ಎಂದರು.
ಹಳೆ ವಿದ್ಯಾರ್ಥಿ, ವಕೀಲ ದಿನಕರ್ ಶೆಟ್ಟಿ ಕಾಲೇಜಿನ 150ನೇ ವರ್ಷಾಚರಣೆ ಆದಷ್ಟು ಹೆಚ್ಚಿನ ಹಳೆ ವಿದ್ಯಾರ್ಥಿಗಳನ್ನು ತಲುಪುವಂತಾಗಬೇಕು ಎಂದು ಆಶಿಸಿದರು. ಇದಕ್ಕೆ ಸ್ಪಂದಿಸಿದ ಪ್ರಾಂಶುಪಾಲರು, 2019ರ ಅಂತ್ಯದಲ್ಲಿ ಭವ್ಯವಾದ ಸಮಾರೋಪ ಸಮಾರಂಭ ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಸ್ಮರಣ ಸಂಚಿಕೆಯಲ್ಲಿ ಜಾಹೀರಾತು ಸೇರಿದಂತೆ ವಿವಿಧ ಮೂಲಗಳ ಮೂಲಕ ಸಂಪನ್ಮೂಲ ಸಂಗ್ರಹಿಸುವ ಕುರಿತು ಚರ್ಚೆ ನಡೆಸಲಾಯಿತು. ಪ್ರಾಧ್ಯಾಪಕ ಡಾ. ಜಯವಂತ್ ಮಾತನಾಡಿ ಬ್ಯಾಂಕಿಂಗ್, ಸಮಾಜಸೇವೆ, ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಹಳೆ ವಿದ್ಯಾರ್ಥಿಗಳು ಸಂಪರ್ಕಿಸಬಹುದು. ಪ್ರಾಧ್ಯಾಪಕ ವರ್ಗವೂ ತನ್ನ ಮಿತಿಯಲ್ಲಿ ಕೊಡುಗೆ ನೀಡುತ್ತದೆ ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಶುಭೋಧಯ ಕೂಡ್ಲು, ಶಿಕ್ಷಕ- ರಕ್ಷಕ ಸಂಘದ ಕಾರ್ಯದರ್ಶಿ ಹೇಮಲತಾ, ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪ್ರೊ. ನಾಗಪ್ಪಗೌಡ, ಜೊತೆಗೆ ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.












Click it and Unblock the Notifications