ದಕ್ಷಿಣ ಕನ್ನಡ ಜಿಲ್ಲೆಯ ನೂತನ ತಾಲೂಕಾಗಿ ಉಳ್ಳಾಲ, ಮುಲ್ಕಿ ಘೋಷಣೆ
ಮಂಗಳೂರು, ಮಾರ್ಚ್ 01: ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲವನ್ನು ತಾಲೂಕು ಕೇಂದ್ರವಾಗಿ ಘೋಷಿಸಿ ರಾಜ್ಯ ಸರ್ಕಾರ ಅಚ್ಚರಿಯ ಆದೇಶ ಹೊರಡಿಸಿದೆ.ಇದರ ಜೊತೆಗೆ ಮುಲ್ಕಿಯನ್ನು ಕೂಡ ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದೆ.
ಉಳ್ಳಾಲ ಹಾಗೂ ಮುಲ್ಕಿ ತಾಲೂಕು ಕೇಂದ್ರವಾಗಿ ಬದಲಾಗಿರುವ ಕಾರಣ ಇನ್ನು ಮುಂದೆ ಪ್ರತ್ಯೇಕ ತಾಲೂಕು ಕಚೇರಿ, ತಹಶೀಲ್ದಾರ್ ನೇಮಕ ಕೆಲಸಗಳು ನಡೆಯಲಿವೆ. ಇಷ್ಟು ದಿನ ಮಂಗಳೂರು ತಾಲೂಕು ವ್ಯಾಪ್ತಿಗೆ ಒಳಪಟ್ಟಿದ್ದ ಉಳ್ಳಾಲ ಇನ್ನು ಮುಂದೆ ಅಧಿಕೃತವಾಗಿ ಉಳ್ಳಾಲ ತಾಲೂಕು ಆಗಿ ಬದಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನ ಸಭಾ ಕ್ಷೇತ್ರದ ನಾಲ್ಕು ಗ್ರಾಮಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಾಮಗಳು ನೂತನ ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಮಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ಉಳ್ಳಾಲ ಇನ್ನಷ್ಟು ಅಭಿವೃದ್ಧಿಯಾಗಲಿದೆ.
ಹೊಸ ತಾಲೂಕು ರಚನೆಯಿಂದ ಹಲವು ವರ್ಷಗಳ ಬೇಡಿಕೆಯಾಗಿರುವ ಆಟದ ಮೈದಾನ, ಅಗ್ನಿಶಾಮಕ ಠಾಣೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಯಾಗಲಿವೆ.

ರಾಜ್ಯ ಸರಕಾರ ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಉಳ್ಳಾಲವನ್ನು ತಾಲೂಕು ಆಗಿ ಘೋಷಣೆ ಮಾಡಿದೆ. ಯು.ಟಿ.ಖಾದರ್ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಉಳ್ಳಾಲ ಮತ್ತು ಮುಲ್ಕಿ ನೂತನ ತಾಲೂಕಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಇಲ್ಲಿನ ನಾಗರಿಕರು ಮಂಗಳೂರಿಗೆ ಆಡಳಿತಾತ್ಮಕ ಕೆಲಸಕ್ಕೆ ಅಲೆಯುವುದು ತಪ್ಪಲಿದೆ.












Click it and Unblock the Notifications