ಉಳ್ಳಾಲ: ಪಾನಮತ್ತನಾಗಿ ಯುವಕನ ಮೇಲೆ ಕಾಂಗ್ರೆಸ್ ಕೌನ್ಸಿಲರ್ ಹಲ್ಲೆ
ಮಂಗಳೂರು,ಜುಲೈ 17: ತೊಕ್ಕೊಟ್ಟಿನ ಹಳೆಯ ಸಾಗರ್ ಕಲೆಕ್ಷನ್ ವಸ್ತ್ರ ಮಳಿಗೆಯ ಕಟ್ಟಡದ ಜಾಗದಲ್ಲಿ ಅಕ್ರಮವಾಗಿ ಶೆಡ್ಡೊಂದನ್ನು ನಿರ್ಮಿಸಿ ಬಾಡಿಗೆಗೆ ಕೊಡಲು ಉಳ್ಳಾಲ ನಗರಸಭಾ ಸದಸ್ಯ ಬಾಝಿಲ್ ಡಿಸೋಜಾ ಯತ್ನಿಸಿದ್ದರು. ಇದನ್ನು ಪ್ರಶ್ನಿಸಲು ಬಂದ ಸಾಗರ್ ಕಲೆಕ್ಷನ್ ಮಳಿಗೆಯ ನೌಕರನಿಗೆ ನಗರಸಭಾ ಸದಸ್ಯ ಕಂಠಪೂರ್ತಿ ಕುಡಿದು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಬಾಝಿಲ್ ಡಿಸೋಜಾ ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿಯಾಗಿದ್ದು ನಗರಸಭೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಇದೀಗ ನಗರಸಭಾ ಸದಸ್ಯನಿಂದ ಹಲ್ಲೆಗೊಳಗಾಗಿ ಸಾಗರ್ ಕಲೆಕ್ಷನ್ಸ್ ವಸ್ತ್ರ ಮಳಿಗೆಯ ನೌಕರ ತೌಸೀಫ್(24) ಆಸ್ಪತ್ರೆ ಸೇರಿದ್ದಾರೆ.

ತೊಕೊಟ್ಟಿನಲ್ಲಿ ವಹಿವಾಟು ನಡೆಸುತ್ತಿದ್ದ ಸಾಗರ್ ಕಲೆಕ್ಷನ್ಸ್ ಮಳಿಗೆಯು ಹೆದ್ದಾರಿ ಅಗಲೀಕರಣದಿಂದಾಗಿ ಕೆಲ ತಿಂಗಳುಗಳ ಹಿಂದಷ್ಟೇ ಹತ್ತಿರದ ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಸಾಗರ್ ಕಲೆಕ್ಷನ್ಸ್ ನ ಹಳೆಯ ಕಟ್ಟಡದ ಜನರೇಟರ್ ಇದ್ದ ಕೊಠಡಿಯ ಹತ್ತಿರ ನಗರಸಭಾ ಸದಸ್ಯ ಬಾಝಿಲ್ ಡಿಸೋಜಾ ಏಕಾಏಕಿ ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಲು ಮುಂದಾಗಿದ್ದರೆನ್ನಲಾಗಿದೆ.
ಭಾನುವಾರ ರಾತ್ರಿ ಶೆಡ್ನಲ್ಲಿ ಕಂಠಪೂರ್ತಿ ಕುಡಿದು ನಿಂತಿದ್ದ ಬಾಝಿಲ್ನನ್ನು ಸಾಗರ್ ಕಲೆಕ್ಷನ್ಸ್ನ ಮಾಲಕ ಇಸ್ಮಾಯಿಲ್ ಅವರು ವಿಚಾರಿಸಿದ್ದಾರೆ. ಈ ವೇಳೆ ಕೆರಳಿದ ಬಾಝಿಲ್ ಇಸ್ಮಾಯಿಲ್ ಅವರನ್ನು ತಳ್ಳಿ ಅವರ ಮಳಿಗೆಯ ನೌಕರ ತೌಸೀಪ್ನಿಗೆ ಕೈ ಮತ್ತು ಕಾಲಿನಿಂದ ಹಲ್ಲೆಗೈದಿದ್ದಾನೆಂದು ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿದೆ.

ಬಾಝಿಲ್ ಡಿಸೋಜಾರ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕ್ಷೇತ್ರದ ಶಾಸಕ ಸಚಿವ ಯು.ಟಿ ಖಾದರ್, ಅರಣ್ಯ ಸಚಿವ ರಮಾನಾಥ ರೈ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರ ಜೊತೆ ಅನ್ಯೋನ್ಯವಾಗಿರುವ ಬಾಝಿಲ್ ತಾನು ಜನಪ್ರತಿನಿಧಿಯಾಗಿದ್ದರೂ ಇತ್ತೀಚಿನ ದಿವಸಗಳಲ್ಲಿ ಸಾರ್ವಜನಿಕವಾಗಿ ಗೂಂಡಾಗಿರಿ ಪ್ರದರ್ಶಿಸುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.












Click it and Unblock the Notifications