ಅಸಹಾಯಕ ವೃದ್ಧರಿಗೆ ಮಾನವೀಯತೆ ಮೆರೆದ ಉಳ್ಳಾಲ ಇನ್'ಸ್ಪೆಕ್ಟರ್
ತೊಕ್ಕೊಟ್ಟಿನ ಶಿವಾಜಿ ಕ್ಲಬ್ ಹತ್ತಿರದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ವೃದ್ಧರೋರ್ವರು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದರು. ವಿಷಯ ತಿಳಿದ ಉಳ್ಳಾಲ ಇನ್ ಸ್ಪೆಕ್ಟರ್ ಕೆ.ಆರ್ ಗೋಪಿಕೃಷ್ಣ ವೃದ್ಧರನ್ನು ಸುರಕ್ಷಿತವಾಗಿ ಮನೆ ಸೇರಿಸಿದ್ದಾರೆ.
ಮಂಗಳೂರು, ಏಪ್ರಿಲ್ 20: ಪೊಲೀಸರು ಜನಸ್ನೇಹಿಗಳಾಗುತ್ತಿರುವುದನ್ನು ಎಷ್ಟೋ ಸಲ ನಾವು ಕಂಡಿದ್ದೇವೆ. ಇದಕ್ಕೆ ಪೂರಕವೆಂಬಂತೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಇಳಿ ವಯಸ್ಸಿನ ವೃದ್ಧರೋರ್ವರನ್ನು ಕರ್ತವ್ಯ ನಿರತ ಉಳ್ಳಾಲ ಇನ್ ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ ಉಪಚರಿಸಿ, ಅವರ ವಿಳಾಸ ಪತ್ತೆ ಹಚ್ಚಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ತೊಕ್ಕೊಟ್ಟಿನ ಶಿವಾಜಿ ಕ್ಲಬ್ ಹತ್ತಿರದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ವೃದ್ಧರೋರ್ವರು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದರು. ಕಂಡವರೆಲ್ಲರೂ ವೃದ್ಧ ಕಂಠಪೂರ್ತಿ ಕುಡಿದಿರಬಹುದೆಂದು ಗ್ರಹಿಸಿ ಯಾರೂ ಸಹಾಯಕ್ಕೆ ತೆರಳದೆ ಅವರ ಪಾಡಿಗೆ ತೆರಳುತ್ತಿದ್ದರು. ವೃದ್ಧರ ಬಗ್ಗೆ ಕನಿಕರಗೊಂಡ ಯಾರೋ ಒಬ್ಬ ನಾಗರಿಕರು ಉಳ್ಳಾಲ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು.

ವಿಷಯ ತಿಳಿದು ಖುದ್ದು ಉಳ್ಳಾಲ ಇನ್ ಸ್ಪೆಕ್ಟರ್ ಕೆ.ಆರ್ ಗೋಪಿಕೃಷ್ಣ ಅವರೇ ಸ್ಥಳಕ್ಕಾಗಮಿಸಿದ್ದು ವೃದ್ಧರು ಮದ್ಯ ವ್ಯಸನಿಯಾಗಿರದೆ ಮಾನಸಿಕ ಸ್ಥಿಮಿತ ಕಳಕೊಂಡಿರುವುದನ್ನು ಗ್ರಹಿಸಿದ್ದಾರೆ. ತಿನ್ನಲು ಆಹಾರ,ಪಾನೀಯವನ್ನು ನೀಡಿ ಅವರಲ್ಲಿ ವಿಳಾಸ ಕೇಳಿದ್ದಾರೆ.[ಹೃದಯವಂತಿಕೆ ಮೆರೆದ ಟ್ರಾಫಿಕ್ ಪೊಲೀಸ್ ಕುಮಾರ್]
ಸ್ಥಿಮಿತ ಕಳಕೊಂಡಿರುವ ವೃದ್ಧರು ಅನೇಕ ವಿಳಾಸಗಳನ್ನು ತಿಳಿಸಿದ್ದು ಕೊನೆಗೆ ಗೋಪಿಕೃಷ್ಣ ಅವರೇ ಸಾರ್ವಜನಿಕರ ಸಹಕಾರದಿಂದ ವಿಳಾಸ ಪತ್ತೆ ಹಚ್ಚಿದ್ದು ವೃದ್ಧರು ಉಳ್ಳಾಲ ಧರ್ಮನಗರದ ದೇಜಪ್ಪ ಪೂಜಾರಿ(80) ಎಂದು ತಿಳಿದು ಬಂದಿದೆ. ನಂತರ ಅವರನ್ನು ಮನೆ ತನಕ ಪೊಲೀಸ್ ಜೀಪಲ್ಲಿಯೇ ತಲುಪಿಸಿದ್ದಾರೆ.

ತಂದೆಯನ್ನು ಮನೆಗೆ ತಂದು ತಲುಪಿಸಿದ ಇನ್ ಸ್ಪೆಕ್ಟರ್ ಮತ್ತು ಅವರ ತಂಡಕ್ಕೆ ದೇಜಪ್ಪ ಪೂಜಾರಿಯ ಮಗ ಮತ್ತು ಮನೆಮಂದಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇಜಪ್ಪರಿಗೆ ಮರೆವಿನ ಸಮಸ್ಯೆ ಕಾಡುತ್ತಿದ್ದು ಬೆಳಿಗ್ಗೆ ಮನೆಯಿಂದ ಹೋದವರು ಹಿಂತಿರುಗದೇ ಇದ್ದುದರ ಬಗ್ಗೆ ಮನೆಯವರೂ ಚಿಂತಾಕ್ರಾಂತರಾಗಿ ಎಲ್ಲೆಡೆ ಶೋಧಿಸಿದ್ದರೆಂದು ಮನೆಯವರು ತಿಳಿಸಿದ್ದಾರೆ.[ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!]
ಖಾಕಿ ಹಾಕಿ ಕರ್ತವ್ಯ ನಿರತ ಇನ್ಸ್ಪೆಕ್ಟರ್ ಒಬ್ಬರು ಹಸಿದ ವೃದ್ಧನ ಹಸಿವು ನೀಗಿಸಿ, ಅವರನ್ನು ಮನೆಗೆ ತಲುಪಿಸಿ ಮಾನವೀಯತೆಯನ್ನು ಪ್ರದರ್ಶಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಸುದ್ದಿಯನ್ನು ಅನೇಕರು ಮೆಚ್ಚಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ.












Click it and Unblock the Notifications