ಮಂಗ್ಳೂರಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಎರಡು ಶವ ಪತ್ತೆ
ಮಂಗಳೂರು, ಫೆಬ್ರವರಿ 15: ಮಂಗಳೂರಿನ ಪಂಪ್ ವೆಲ್ ಬಳಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಬ್ಬರು ಅಪರಿಚಿತ ಮೃತ ದೇಹಗಳು ಬುಧವಾರ ಸಂಜೆ ಪತ್ತೆಯಾಗಿದೆ.
ಎರಡೂ ಶವಗಳು ಭಾಗಶ: ಕೊಳೆತಿದ್ದು, ಮೂರು ದಿನಗಳ ಹಿಂದೆ ಸಾವಿಗೀಡಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಎರಡೂ ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿದ್ದು ಮೃತರ ಗುರುತು ಇನ್ನು ಪತ್ತೆಯಾಗಿಲ್ಲ. ಐದಾರು ವರ್ಷಗಳಿಂದ ಪ್ರಾರಂಭಗೊಂಡಿದ್ದ ಈ ಕಟ್ಟಡದ ಕಾಮಗಾರಿ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿತ್ತು.
ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ? ಅಥವಾ ಬೇರೆ ಯಾರೋ ಹತ್ಯೆ ಮಾಡಿದ್ದಾರೋ ಎಂಬ ಸ್ಪಷ್ಟ ಮಾಹಿತಿ ದೊರಕಿಲ್ಲ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಹಲ್ಲೆ : ಅಡಿಕೆ ಮರದ ಸಲಾಕೆಯಿಂದ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಮುರುವ ಎಂಬಲ್ಲಿ ನಡೆದಿದೆ.
ಅಕ್ರಮವಾಗಿ ಮನೆ ಪ್ರವೇಶ ಮಾಡಿದ ಸ್ಥಳೀಯ ನಿವಾಸಿ ಸಿದ್ದಿಕ್ ಎಂಬಾತ ಮನೆಯ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯನ್ನು ತೆಗೆದು ಜುಬೈದಾ ಎಂಬವರು ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಸ್ಥಳೀಯರಾದ ಹಸನ್ ಮದನಿ ಎಂಬವರ ಪತ್ನಿ ಅವ್ವಾಬಿ ಎಂಬಾಕೆ ಆತನಿಗೆ ಬೆಂಬಲ ನೀಡಿರುವುದಾಗಿ ಆರೋಪಿಸಿ ಜುಬೈದಾ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳಾದ ಸಿದ್ದಿಕ್ ಮತ್ತು ಅವ್ವಾಬಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.