ದಕ್ಷಿಣ ಕನ್ನಡ ಜಿಲ್ಲೆಯ ಭಯೋತ್ಪಾದಕ ಫ್ಯಾಕ್ಟರಿಗಳಿಗೆ ಬೀಗ: ರಾಮಲಿಂಗಾ ರೆಡ್ಡಿ
ಮಂಗಳೂರು, ಮಾರ್ಚ್ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಗುಡುಗಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಘ ಪರಿವಾರದ ಫ್ಯಾಕ್ಟರಿ ಹಾಗೂ ಎಸ್ ಡಿಪಿಐ, ಪಿಎಫ್ಐ ಫ್ಯಾಕ್ಟರಿಗಳನ್ನು ಬಂದ್ ಮಾಡ್ತೇವೆ," ಎಂದು ತಿಳಿಸಿದ್ದಾರೆ.
"ಪಿಎಫ್ಐ ಬ್ಯಾನ್ ಮಾಡಿ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಪಿಎಫ್ಐ ಯಾಕೆ ಬ್ಯಾನ್ ಮಾಡಿಲ್ಲ?" ಎಂದು ಪ್ರಶ್ನಿಸಿದ ಅವರು, "ಕಾಂಗ್ರೆಸ್ ಮತ ಒಡೆಯಲು ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ಬೆಳೆಸಿದವರೇ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ಗೌರಿ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ವಿಧಾನಸಭೆಯಲ್ಲೂ ಪ್ರಕರಣ ಬೇಗ ಪತ್ತೆಯಾಗುತ್ತದೆ ಎಂದು ತಿಳಿಸಿದ್ದೇನೆ. ಪ್ರಕರಣದ ಕುರಿತಂತೆ ಎಸ್ಐಟಿ ಯವರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸೋದಿಲ್ಲ," ಎಂದು ತಿಳಿಸಿದರು.
"ಸಾಕಷ್ಟು ಪ್ರಕರಣಗಳಲ್ಲಿ ಹಿಂದೂ - ಹಿಂದೂಗಳೇ ಜಗಳವಾಡಿ ಸಾವನ್ನಪ್ಪಿದ್ದಾರೆ. ಇವರು ಬಿಜೆಪಿ ಕಾರ್ಯಕರ್ತರಾಗಿದ್ದರೂ ಸಾವಿಗೆ ಕಾರಣ ಬೇರೆ ಬೇರೆ ಇದೆ. ಆದರೆ, ಬಿಜೆಪಿ ಪಕ್ಷದ ಕಾರ್ಯಕರ್ತರು ಸತ್ತರು ಎಂದು ಇವರು ಪಟ್ಟಿ ಮಾಡಿಕೊಂಡು ಹೋಗಿದ್ದಾರೆ," ಎಂದು ಅವರು ದೂರಿದರು.
ಹೊನ್ನಾವರದಲ್ಲಿ ಸಾವಿಗೀಡಾದ ಪರೇಶ್ ಮೇಸ್ತ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳು ಆರೋಪಿಗಳನ್ನು ಹಿಡಿಯಲು ಕ್ರಮ ಕೈಗೊಂಡಿಲ್ಲವೆಂದು ಆರೋಪ ಮಾಡುತ್ತಾರೆ ಎಂದು ಅವರು ಕಿಡಿಕಾರಿದರು.
ಶ್ರೀರಾಮ ಸೇನೆ, ಭಜರಂಗದಳ, ವಿಹಿಂಪಾ ಕೂಡಾ 11 ಕೊಲೆ ನಡೆಸಿವೆ. ಇದನ್ನು ಮಾತ್ರ ಬಿಜೆಪಿಯವರು ಹೇಳುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇವರ ಪರವಾಗಿ ಮಾತನಾಡಲು ಉತ್ತರ ಪ್ರದೇಶದಿಂದ ಆದಿತ್ಯನಾಥರನ್ನು ಕರೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಗೋಮಾಂಸ ರಫ್ತು ಯಾಕೆ ನಿಲ್ಲಿಸಿಲ್ಲ ಎಂದು ಪ್ರಶ್ನಿಸಿದ ಅವರ, "ಮೊದಲು ರಫ್ತು ನಿಲ್ಲಿಸಿ, ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿ" ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ದೊಡ್ಡ ದೊಡ್ಡ ಗೋಮಾಂಸದ ಫ್ಯಾಕ್ಟರಿಗಳಿವೆ. ಗೋಹತ್ಯೆಯ ಜತೆ ಪ್ರತೀ ಪ್ರಾಣಿಯ ಹತ್ಯೆಯೂ ನಿಲ್ಲಬೇಕು. ಎಲ್ಲಾ ಪ್ರಾಣಿಗಳನ್ನು ಹತ್ಯೆ ಮಾಡುವುದು ನಿಲ್ಲಿಸುವುದಕ್ಕೆ ನಮ್ಮ ಬೆಂಬಲವಿದೆ. ಅದನ್ನು ಬಿಟ್ಟು ಕೇವಲ ಗೋವುಗಳ ಬಗ್ಗೆ ಇವರಿಗೆ ಆಸಕ್ತಿಯಿದ್ದರೆ ರಫ್ತು ನಿಲ್ಲಿಸಲಿ ಎಂದು ಅವರು ಸವಾಲು ಹಾಕಿದರು.












Click it and Unblock the Notifications