ಪಂಪ್ವೆಲ್ ಮೇಲ್ಸೇತುವೆ ಮೇಲೆ ಬರಹ: ತನಿಖೆ ನಡೆಸಿದ ಪೊಲೀಸರಿಗೆ ಫುಲ್ ಸುಸ್ತು!
ಮಂಗಳೂರು, ಏಪ್ರಿಲ್ 28: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿನ ಪಂಪ್ವೆಲ್ ಮೇಲ್ಸೇತುವೆ ಗೋಡೆ ಮೇಲೆ ಲಾಕ್ಡೌನ್ ಬೇಕು ಎಂದು ಬರೆದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಲಾಕ್ಡೌನ್ ಆದರೆ ಪರೀಕ್ಷೆ ಮುಂದೂಡುತ್ತದೆ ಎಂಬ ಕಾರಣಕ್ಕಾಗಿ ಗೋಡೆ ಮೇಲೆ ಬರೆದಿರುವುದಾಗಿ ಹೇಳಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ಕಾಲೇಜು ವಿದ್ಯಾರ್ಥಿಗಳು ತಾವು ಎಸಗಿರುವ ತಪ್ಪನ್ನು ಒಪ್ಪಿಕೊಂಡಿದ್ದು, ಲಾಕ್ಡೌನ್ ಆದರೆ ಕಾಲೇಜು ಪರೀಕ್ಷೆಗಳು ಮುಂದೂಡಲ್ಪಡುತ್ತದೆ. ನಮಗೆ ಕಾಲೇಜಿಗೆ ಹೋಗೋಕೆ ಇಷ್ಟ ಇಲ್ಲ ಹಾಗಾಗಿ ಲಾಕ್ಡೌನ್ ಬೇಕು ಎಂಬುದಾಗಿ ಬರೆದಿದ್ದೇವೆ ಎಂದು ವಿಚಾರಣೆ ವೇಳೆ ವಿದ್ಯಾರ್ಥಿಗಳು ಹೇಳಿದ್ದಾರೆ.
ಇಬ್ಬರು ಮಂಗಳೂರು ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕಾಲೇಜು ಕಾರ್ಯಾರಂಭ ಮಾಡಿದ ಬಳಿಕವೂ ಕಾಲೇಜಿಗೆ ಹೋಗುವುದೆಂದರೆ ಆಲಸ್ಯ ಮಾಡುತ್ತಿದ್ದರು. ಅಲ್ಲದೆ ಆನ್ ಲೈನ್ ತರಗತಿಗೆ ಹಾಜರಾಗಿ ಪಾಠ ಕೇಳೋದನ್ನು ಯಾವಾಗಲೂ ತಪ್ಪಿಸುತ್ತಿದ್ದರು.
ಮನೆಯವರ ಒತ್ತಾಯಕ್ಕೆ ಮಣಿದು ಕಾಲೇಜಿಗೆ ಹೋಗುತ್ತಿದ್ದ ಇವರು, ಪರೀಕ್ಷೆಗಳಿಗೆ ದಿನ ನಿಗದಿಯಾದ ಬಳಿಕ ಸರ್ಕಾರ ಆದಷ್ಟು ಬೇಗ ಲಾಕ್ಡೌನ್ ಮಾಡಲಿ ಎಂಬ ಉದ್ದೇಶದಿಂದ ಗೋಡೆಬರಹ ಬರೆದಿದ್ದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಪರೀಕ್ಷೆಗಳು ಮುಂದೂಡಿದರೆ ಮತ್ತಷ್ಟು ದಿನ ನಿರಾಳವಾಗಿ ಇರಬಹುದು ಎಂಬ ಉದ್ದೇಶದಿಂದ ಬರೆದಿರೋದಾಗಿ ವಿಚಾರಣೆ ವೇಳೆ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.
ಏ.20 ರಂದು ಪಂಪ್ವೆಲ್ ಮೇಲ್ಸೇತುವೆ ಗೋಡೆಯ ಮೇಲೆ ಲಾಕ್ಡೌನ್ ಬೇಕು ಸೇರಿದಂತೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿತ್ತು. ಮಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಮೇಲ್ಸೇತುವೆಗೆ ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬಣ್ಣ ಬಳಿದು, ವರ್ಲಿ ಆರ್ಟ್ ಸೇರಿದಂತೆ ಚಿತ್ರಗಳನ್ನು ಬಿಡಿಸಲಾಗುತಿತ್ತು. ವಿದ್ಯಾರ್ಥಿಗಳು ಈ ಚಿತ್ರಗಳ ಮೇಲೆಯೇ ಬರೆದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.