ಉಪನ್ಯಾಸಕ ವಿಕ್ರಮ್ ಜೈನ್ ಕೊಲೆ ಪ್ರಕರಣ: ಇಬ್ಬರ ಬಂಧನ
ಮಂಗಳೂರು ಮೇ 29 : ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ ಅವರನ್ನು ತಡರಾತ್ರಿ ನಡುರಸ್ತೆಯಲ್ಲೇ ಬರ್ಬರವಾಗಿ ಇರಿದು ಹತ್ಯೆಗೈದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ವಿಕ್ರಮ್ ಜೈನ್ ಎಂಬುವರನ್ನು ಮೇ 27ರ ತಡ ರಾತ್ರಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಡರಾತ್ರಿ ನಡು ರಸ್ತೆಯಲ್ಲಿ ಐಟಿಐ ಕಾಲೇಜು ಉಪನ್ಯಾಸಕನ ಬರ್ಬರ ಕೊಲೆ
ಬಂಧಿತ ಆರೋಪಿಗಳು ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ (32) ಹಾಗೂ ಡೀಕಯ್ಯ ನಲ್ಕೆ (39) ಎಂದು ಗುರುತಿಸಲಾಗಿದೆ. ಆರೋಪಿಗಳು ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ (45) ಅವರನ್ನು ಮೇ 27ರ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಕೊಲೆ ಆರೋಪಿಗಳ ಪೈಕಿ ಒಬ್ಬನಿಗೆ ಆತನ ಹತ್ತಿರ ಸಂಬಂಧಿ ಮಹಿಳೆಯೊಬ್ಬರ ವಿಚಾರವಾಗಿ ವಿಕ್ರಂ ಅವರೊಂದಿಗೆ ದ್ವೇಷವಿದ್ದು, ಇನ್ನೋರ್ವ ಆರೋಪಿಗೆ ರಸ್ತೆ ವಿಚಾರವಾಗಿ ದ್ವೇಷವಿತ್ತು ಎನ್ನಲಾಗಿದೆ. ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ವಿಕ್ರಮ್ ಜೈನ್ ರವರನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಆರೋಪಿಗಳು ಅವರಿಗೆ ಪರಿಚಿತರಾಗಿದ್ದರಿಂದ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭ ಆರೋಪಿಗಳಿಬ್ಬರು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.