ಕುಂಟ್ರಕಳದಲ್ಲಿ ಮೇರಿ ಆರಾಧನಾ ಕಟ್ಟೆ ಧ್ವಂಸ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಸೆಪ್ಟೆಂಬರ್. 30: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ಮೇರಿ ಮಾತೆ ಗ್ರೊಟ್ಟೊ ನಾಶಮಾಡಿ ಕೊರಗಜ್ಜನ ಕಟ್ಟೆ ಸ್ಥಾಪಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಳ್ನಾಡು ಗ್ರಾಮದ ಕುಂಟ್ರಕಳ ನಿವಾಸಿಗಳಾದ ಜಯರಾಮ ನಾಯ್ಕ ಮತ್ತು ಮೋನಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಅಕ್ಟೋಬರ್. 12ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆಪ್ಟೆಂಬರ್. 27 ರಂದು ಕ್ರೈಸ್ತರ ಆರಾಧನ ಸ್ಥಳಕ್ಕೆ ದುಷ್ಕರ್ಮಿಗಳು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ್ದರು. ಕಳೆದ 45 ವರ್ಷಗಳಿಂದ ಕ್ರೈಸ್ತರು ಆ ಸ್ಥಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದರು.

ಮೇರಿಯ ಮೂರ್ತಿಯನ್ನಿಟ್ಟ ಸ್ಥಳ ಸರ್ಕಾರಿ ಜಾಗವಾದ ಕಾರಣ ಅಲ್ಲಿ ಮೇರಿ ಆರಾಧನೆ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು ಎಂದು ಹೇಳಲಾಗಿತ್ತು.
ಕಿಡಿಗೇಡಿಗಳ ತಂಡ ಮೇರಿ ಮೂರ್ತಿ ಇದ್ದ ಸ್ಥಳದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಸುತ್ತಲೂ ಕೇಸರಿ ಬಂಟಿಗ್ಸ್ ಕಟ್ಟಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸೆಪ್ಟೆಂಬರ್ 28 ರ ಮುಂಜಾನೆ ಎರಡೂ ಸಮುದಾಯದ ಯುವಕರ ಗುಂಪು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತವರಣ ನಿರ್ಮಾಣವಾಗಿತ್ತು.
ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.ಕ್ರೈಸ್ತರ ಮೇರಿ ಆರಾಧನಾ ಕಟ್ಟೆಯ ಧ್ವಂಸ ಪ್ರಕರಣ ಇಬ್ಬರು ಆರೋಪಿಗಳ ಬಂಧನ












Click it and Unblock the Notifications