ಧರ್ಮಸ್ಥಳ ಸಹಕಾರಿ ಬ್ಯಾಂಕ್ ಸಿಇಒ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
ಮಂಗಳೂರು, ಮೇ 06; ಧರ್ಮಸ್ಥಳ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರನ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣ ಸಂಬಂಧ ಮೂವರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಹೋದ್ಯೋಗಿಗಳ ಮಾನಸಿಕ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಮೇ 3ರಂದು ಬೆಳ್ತಂಗಡಿಯ ಅಟಲ್ ಜೀ ಸಭಾಭವನದಲ್ಲಿ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್. ಡಿ (60) ಆತ್ಮಹತ್ಯೆ ಮಾಡಿಕೊಂಡಿದ್ದರು. ರವೀಂದ್ರನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಸಹೋದ್ಯೋಗಿಗಳ ಕಿರುಕುಳವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದರು.
ರವೀಂದ್ರನ್ ಈ ತಿಂಗಳ ಕೊನೆಗೆ ನಿವೃತ್ತಿಯಾಗುವವರಿದ್ದು, ಸಹೋದ್ಯೋಗಿಗಳ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಪೂರಕ ಎಂಬಂತೆ ರವೀಂದ್ರನ್ ಮೊಬೈಲ್ನಲ್ಲಿ ಲೆಟರ್ ಪತ್ತೆಯಾಗಿದ್ದು, ಬ್ಯಾಂಕ್ ನಿರ್ದೇಶಕರಾದ ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸಲ್ಲ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಅಂತ್ಯಕಾಲದಲ್ಲಿ ಈ ಮುಟ್ಠಾಳರಿಂದ ಅವಮಾನಿತನಾಗಲು ಇಚ್ಚೆ ಇಲ್ಲ ಅಂತಾ ರವೀಂದ್ರನ್ ಬರೆದುಕೊಂಡಿದ್ದರು.

ಈ ಬಗ್ಗೆ ರವೀಂದ್ರನ್ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಬ್ಬರು ನಿರ್ದೇಶಕರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ ದಾಖಲಾಗಿದೆ. ಇದೀಗ ರವೀಂದ್ರನ್ ಪತ್ನಿ ನೀಡಿರುವ ದೂರಿನಂತೆ ಸಹಕಾರಿ ಬ್ಯಾಂಕಿನ ಅಕೌಂಟೆಂಟ್ ಸ್ವರ್ಣಗೌರಿ ಎಂಬುವವರ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.












Click it and Unblock the Notifications