ಜನಮನಗೆದ್ದ ಕುದ್ರೋಳಿ ಕ್ಷೇತ್ರದಲ್ಲಿ ಮೂಡಿದ ಧಾನ್ಯದ ತಿರಂಗ
ಮಂಗಳೂರು, ಆಗಸ್ಟ್ 15: ದೇಶ ಸ್ವಾತಂತ್ರ್ಯ ಅಮೃತೋತ್ಸವದ ಸಡಗರದಲ್ಲಿ ಮಿಂದೆದ್ದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತಾದ್ಯಾಂತ ತಿರಂಗ ರಾರಾಜಿಸುತ್ತಿದೆ. ಮನೆಯಿಲ್ಲದ ದೇಶಪ್ರೇಮಿ, ತುಂಬುಮನಸ್ಸಿನಿಂದ ತನ್ನ ಗುಡಿಸಲಿನ ಮೇಲೆ ತ್ರಿವರ್ಣ ಧ್ವಜ ಕಟ್ಟಿದರೆ, ಬಹು ಅಂತಸ್ಥಿನ ಕಟ್ಟಡದಲ್ಲಿ ವಾಸಿಸುವ ವಿವಿಐಪಿಗಳೂ ಕೈಯಲ್ಲಿ ತಿರಂಗ ಹಿಡಿದು ಸ್ವಾತಂತ್ಯ್ರದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.
ಹಾಗೆಯೇ ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯ ರಾಜಗೋಪುರದ ಮುಂಭಾಗದ ನೆಲದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 900 ಕೆಜಿ ಧಾನ್ಯಗಳ ಬೃಹತ್ ತಿರಂಗ ಭಕ್ತರ ಗಮನಸೆಳೆದಿದೆ.
ಈ ಬೃಹತ್ ತಿರಂಗ 38 ಅಡಿ ಅಗಲವನ್ನು ಹೊಂದಿದೆ. ತಲಾ 300 ಕೆಜಿ ಮಸ್ಸೂರು ದಾಲ್, ಸಬ್ಬಕ್ಕಿ, ಹೆಸರು ಕಾಳುಗಳನ್ನು ಬಳಸಿ ತಿರಂಗವನ್ನು ಸೃಷ್ಟಿಸಲಾಗಿದೆ. ಫೋಮ್ ನಲ್ಲಿ ರಚಿಸಿರುವ ಅಶೋಕ ಚಕ್ರ 8 ಫೀಟ್ ಅಗಲವಿದೆ. ಅಲ್ಲದೆ ತಿರಂಗದ ಅಲಂಕಾರಕ್ಕೆ 54 ಕಲಶ, 138 ಬಾಳೆ ಎಲೆಯಲ್ಲಿ ಅಕ್ಕಿ ಎಳೆಯಡಿಕೆ, ಚೆಂಡು ಹೂಗಳನ್ನು ಬಳಸಲಾಗಿದೆ. ಜೊತೆಗೆ ಕ್ಯಾರೆಟ್, ಮೂಲಂಗಿ, ಬೆಂಡೆಯಿಂದ ಮಾಡಿರುವ 75 ಅಕ್ಷರದಲ್ಲೂ ತಿರಂಗದ ಕಲ್ಪನೆಯನ್ನು ಮೂಡಿಸಲಾಗಿದೆ.

ಫೋಟೋ ಜರ್ನಲಿಸ್ಟ್ ಸತೀಶ್ ಇರಾ ಪರಿಕಲ್ಪನೆ ಹಾಗೂ ಖ್ಯಾತ ಫೋಟೋ ಗ್ರಾಫರ್, ಕಲಾವಿದ ಪುನೀಕ್ ಶೆಟ್ಟಿಯವರ ಕೈಚಳದಲ್ಲಿ ಈ ಬೃಹತ್ ತಿರಂಗವು ಅದ್ಭುತವಾಗಿ ಮೂಡಿ ಬಂದಿದೆ. ಶ್ರೀಕ್ಷೇತ್ರದ ಗುರು ಬೆಳದಿಂಗಳು ಹಾಗೂ ಗೋಕರ್ಣನಾಥ ಸೇವಾದಳ ತಂಡ ಈ ತಿರಂಗ ಕಾರ್ಯಕ್ಕೆ ಸಹಕರಿಸಿದೆ.

ಆಗಸ್ಟ್ 13ರ ಮಧ್ಯಾಹ್ನದಿಂದಲೇ ಈ ತಿರಂಗ ರಚನೆಗೆ ಸಾಮಾಗ್ರಿಗಳನ್ನು ಖರೀದಿಸಲಾಗಿದೆ. ರಾತ್ರಿ 9ರಿಂದ ತಿರಂಗದ ಸ್ಕೆಚ್ ತಯಾರಿಸಲಾಗಿದ್ದು, ಆಗಸ್ಟ್ 14ರ ಬೆಳಗ್ಗೆ 11ರ ವೇಳೆಗೆ ತಿರಂಗ ಸಂಪೂರ್ಣಗೊಂಡಿದೆ. ಕೇಂದ್ರದ ಮಾಜಿ ಸಚಿವ, ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿಯವರು ಈ ಬೃಹತ್ ತಿರಂಗವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿಯವರೂ ಟ್ವೀಟರ್ ನಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಮೂಡಿಬಂದ ತಿರಂಗದ ಫೋಟೋ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications