ಮಂಗಳೂರಿನಲ್ಲಿ ಬುಡಸಮೇತ ಮರ ಸ್ಥಳಾಂತರಕ್ಕೆ ಭಾರೀ ಪ್ರಶಂಸೆ
ಮಂಗಳೂರು, ಆಗಸ್ಟ್ 07: ಮಂಗಳೂರಿನಲ್ಲಿ ಮರವೊಂದನ್ನು ಬುಡಸಮೇತ ಇನ್ನೊಂದೆಡೆ ಸ್ಥಳಾಂತರಿಸಲಾಗಿದೆ. ನಗರದ ಲೇಡಿಹಿಲ್ ನ ರಸ್ತೆ ತಿರುವಿನಲ್ಲಿದ್ದ ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿ ಪರಿಸರ ಪ್ರೇಮ ಮೆರೆಯಲಾಗಿದೆ.
ನಗರದ ಲೇಡಿಹಿಲ್ ನಿಂದ ಚಿಲಿಂಬಿ ಕಡೆಗೆ ಸಾಗುವ ರಸ್ತೆಯಲ್ಲಿ ಮರವೊಂದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 'ಪೆಲ್ಟೋಫೋರಂ' ಜಾತಿಯ ಆ ಮರವನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ಕಡಿಯಲು ನಿರ್ಧರಿಸಿತ್ತು. ಪಾಲಿಕೆಯ ಈ ನಿರ್ಧಾರಕ್ಕೆ ಪರಿಸರವಾದಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಜಾಗತಿಕ ತಾಪಮಾನದ ವಿರುದ್ಧ ಯುದ್ಧ ಸಾರಿದ ಮಂಗಳೂರಿನ ಪುಟಾಣಿಗಳು
ಮಂಗಳೂರು ಎನ್ ಇ ಸಿ ಎಫ್ ಪರಿಸರವಾದಿಗಳ ಸಂಘಟನೆ ಕಾರ್ಯಕರ್ತರಿಂದ ಮಹಾನಗರ ಪಾಲಿಕೆಯ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿತ್ತು. ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯು ಮರ ಕಡಿಯುವ ನಿರ್ಧಾರವನ್ನು ಕೈಬಿಟ್ಟು ಮರವನ್ನು ಕಡಿಯುವ ಬದಲು ಬುಡಸಮೇತ ಇನ್ನೊಂದೆಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.
ಮಂಗಳೂರು ಮಾಹಾನಗರ ಪಾಲಿಕೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ ಸಮೀಪದಲ್ಲೇ ಇದ್ದ ಖಾಲಿ ಜಾಗಕ್ಕೆ ಸ್ಥಳಾತಂರಿಸಲಾಯಿತು. ಪಾಲಿಕೆಯ ಈ ಕಾರ್ಯಕ್ಕೆ ಈಗ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಮರಗಳನ್ನು ಕಡೆಯದೆ, ಇದೇ ರೀತಿ ಪಾಲಿಕೆ ಸ್ಥಳಾಂತರಿಸಬೇಕೆಂಬ ಒತ್ತಾಯ ಕೂಡ ಕೇಳಿಬರುತ್ತಿದೆ.