ಕುಳಾಯಿಯಲ್ಲಿ ಮಕ್ಕಳಿಗೆ ಹೂ, ಪನ್ನೀರಿನ ಸ್ವಾಗತ
ಮಂಗಳೂರು, ಮೇ 29 : ಶಾಲಾ ಮಕ್ಕಳ ಬೇಸಿಗೆ ರಜೆ ಅಂತ್ಯಗೊಂಡಿದ್ದು ಮೇ 31ರಿಂದ ಶಾಲೆಗಳು ಆರಂಭವಾಗಲಿವೆ. ಕುಳಾಯಿಯ ಶ್ರೀ ವೆಂಕಟರಮಣ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಹೂ ಮತ್ತು ಪನ್ನೀರಿನ ಸ್ವಾಗತದೊಂದಿಗೆ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.
ಮಂಗಳೂರಿನ ಕುಳಾಯಿಯ ಶ್ರೀ ವೆಂಕಟರಮಣ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸಲು 'ಬಣ್ಣದ ಲೋಕದ ಚಿಣ್ಣರ ನಾವು ಕನ್ನಡ ಕನಸನು ಕಾಣುವೆವು" ಎಂಬ ಪರಿಕಲ್ಪನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಕೆ.ಕೆ.ಪೇಜಾವರ್ ಹೇಳಿದ್ದಾರೆ. ಮಕ್ಕಳು ಕಾಗದದಿಂದ ಮಾಡಿದ ಕನ್ನಡದ ಅಕ್ಷರಗಳನ್ನು ಹಿಡಿದು ಶಾಲೆಗೆ ಆಗಮಿಸಲಿದ್ದಾರೆ.

ಹೊಸದಾಗಿ ಶಾಲೆಗೆ ಬರುವ ಮಕ್ಕಳನ್ನು ಲಯಬದ್ಧವಾದ ಚಂಡೆ, ಮದ್ದಳೆಗಳ ಸದ್ದಿಗೆ ಹೆಜ್ಜೆ ಹಾಕುವ ಯಕ್ಷಪಾತ್ರಧಾರಿಗಳು ಮೆರವರಣಿಗೆಯಲ್ಲಿ ಕರೆತರಲಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳನ್ನು ಆಕರ್ಷಿಸಲು ಕನ್ನಡ ಗೋಪುರವನ್ನು ನಿರ್ಮಿಸಲಾಗಿದೆ. ಗ್ರಾಮಸ್ಥರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಮಕ್ಕಳನ್ನು ಸ್ವಾಗತಿಸಲಿದ್ದಾರೆ.
ಕುಳಾಯಿ ಗ್ರಾಮಸ್ಥರು ಮಕ್ಕಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಲೆಯ ಶಿಕ್ಷಕರು ಹೂ ಮತ್ತು ಪನ್ನೀರಿನ ಸ್ವಾಗತದೊಂದಿಗೆ ಮಕ್ಕಳನ್ನು ಶಾಲಾ ಕೊಠಡಿಗೆ ಬರಮಾಡಿಕೊಳ್ಳುವರು. ಮೊದಲ ದಿನ ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಶಿಕ್ಷಕರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಶಾಸಕರಾದ ಮೊಯಿದ್ದೀನ್ ಭಾವ, ಗಣೇಶ್ ಹೊಸಬೆಟ್ಟು, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಶ್ರೀಮತಿ ಪ್ರತಿಭಾ ಕುಳಾಯಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಮಕ್ಕಳೆ ಶಾಲೆಗೆ ನಿಮಗೆ ಸ್ವಾಗತ.












Click it and Unblock the Notifications