ಬಂಟ್ವಾಳದ ಹೈವೋಲ್ಟೇಜ್ ಚುನಾವಣಾ ಕದನದಲ್ಲಿ ಅಧಿಕಾರದ ಕಪ್ ಯಾರಿಗೆ?
ಮಂಗಳೂರು ಮೇ 02: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಕೊನೆಯ ಹಂತದ ಪ್ರಚಾರ ಆರಂಭಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗಿದೆ. ಈ ನಡುವೆ ಚನಾವಣೆಯಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಆರಂಭವಾಗಿದೆ. ಕ್ಷೇತ್ರದಲ್ಲಿ ಒಂದೆಡೆ ಐಪಿಎಲ್, ಇನ್ನೊಂದೆಡೆ ರಾಜಕೀಯ ಚುನಾವಣಾ ಕದನದ ಕುರಿತು ಭಾರೀ ಚರ್ಚೆ ಆರಂಭವಾಗಿದ್ದು, ಈ ಬಾರಿ ಚುನಾವಣೆ ಎಂಬ ಪಂದ್ಯದಲ್ಲಿ ಅಧಿಕಾರದ ಕಪ್ ಯಾರಿಗೆ ಎಂಬ ಕುತೂಹಲ ದುಪ್ಪಟ್ಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿರುವುದು ಬಂಟ್ವಾಳ ವಿಧಾನಸಭಾ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಈ ಚುನಾವಣೆ ಹೈ ವೋಲ್ಟೇಜ್ ಕದನ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ್ ರೈ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಬಿಜೆಪಿಯ ಅಭ್ಯರ್ಥಿ ರಾಜೇಶ್ ನಾಯ್ಕ್ ಈ ಬಾರಿ ನೇರ ಬೌಂಡರಿ ಬಾರಿಸುವ ತವಕದಲ್ಲಿದ್ದಾರೆ.
ರಮಾನಾಥ್ ರೈ ಅವರಿಗೆ ಇದು 8ನೇ ಚುನಾವಣೆ. ರಾಜೇಶ್ ನಾಯ್ಕ್ 2 ನೇ ಬಾರಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಇರುವುದರಿಂದ ಎರಡೂ ಪಕ್ಷಗಳು ಅಭಿವೃದ್ಧಿ, ಕೋಮುವಾದ ಮತ್ತು ತುಷ್ಟೀಕರಣ ವಿಚಾರವನ್ನು ಮುಂದಿಟ್ಟು ಪ್ರಚಾರ ಮಾಡುತ್ತಿವೆ.

ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಬೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣೆ ಘೋಷಣೆಗೂ ಮುನ್ನವೇ ಬಂಟ್ವಾಳದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ ಚುನಾವಣಾ ರಣತಂತ್ರ ರೂಪಿಸಿ ತೆರಳಿದ್ದಾರೆ.
ಮತದಾರರ ವಿವರ
ಈ ಬಂಟ್ವಾಳ ವಿಧಾನ ಸಭಾಕ್ಷೇತ್ರದಲ್ಲಿ 2,16,027 ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ ಗೌಡ ಸಮುದಾಯದವರು 10,022ರಷ್ಟಿದ್ದಾರೆ. ಬಿಲ್ಲವರು 57,737, ಮುಸ್ಲಿಮರು 44,600, ಕ್ರಿಶ್ಚಿಯನ್ನರು 13,025 ರಷ್ಟಿದ್ದರೆ, ಪರಿಶಿಷ್ಟ ಜಾತಿ ಸಮುದಾಯದವರು 12,067ರಷ್ಟಿದ್ದಾರೆ. ಪರಿಶಿಷ್ಟ ಪಂಗಡದವರ ಸಂಖ್ಯೆ ಸುಳ್ಯದಲ್ಲಿ 13,562ದಷ್ಟಿದೆ. ಇಲ್ಲಿ ಬ್ರಾಹ್ಮಣ ಮತದಾದರು 7,000 ಸಾವಿರ ದಷ್ಟಿದ್ದಾರೆ. ಬಂಟ ಸಮುದಾಯದವರು 15,000ದಷ್ಟಿದ್ದರೆ, ಕುಲಾಲರು 18,357 ರಷ್ಟಿದ್ದು ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ.
ಅದಲ್ಲದೆ ಈ ವಿಶ್ವಕರ್ಮ, ಜೈನ, ಕ್ಷತ್ರಿಯ, ಸವಿತಾ ಸಮಾಜ, ಮಡಿವಾಳ, ಗೌಡ ಸರಸ್ವತ ಬ್ರಾಹ್ಮಣ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಮತಗಳೇ ನಿರ್ಣಾಯಕ ಎಂದು ಹೇಳಲಾಗುತ್ತದೆ












Click it and Unblock the Notifications