2 ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಕಾದಾಟ; ಇದು ಕಟೀಲು ಜಾತ್ರೆಯ 'ತೂಟೆದಾರ'ದ ವಿಶೇಷ
ಮಂಗಳೂರು, ಏಪ್ರಿಲ್ 22: ಅಲ್ಲೊಂದು ಯುದ್ಧ ಭೂಮಿ ರೆಡಿಯಾಗಿತ್ತು. ಅವರೆಲ್ಲ ಮಿತ್ರರಾದರೂ ಯುದ್ಧ ಮಾಡುತ್ತಿದ್ದರು. ಆವೇಶದಿಂದ ಒಬ್ಬರ ಮೇಲೆ ಒಬ್ಬರು ಬೆಂಕಿಯನ್ನು ಎಸೆಯುತ್ತಿದ್ದರು. ಆ ದೃಶ್ಯ ರಾಮಾಯಣ, ಮಹಾಭಾರತದಲ್ಲಿ ಬರುವ ಯುದ್ಧ ದೃಶ್ಯವನ್ನು ನೆನಪಿಸುವಂತಿತ್ತು. ಎರಡೂ ತಂಡಗಳು ಬದ್ಧ ವೈರಿಗಳಂತೆ ಬೆಂಕಿಯಲ್ಲಿ ಹೋರಾಡಿದರೂ ಯಾರಿಗೂ ಏನೂ ಆಗಲಿಲ್ಲ. ಯಾಕೆಂದರೆ ಇವರು ಈ ರೀತಿ ಮಾಡಿಕೊಳ್ಳುತ್ತಿರುವುದು ಕೇವಲ ಹರಕೆ ತೀರಿಸುವುದಕ್ಕೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ಜನರ ಆರಾಧ್ಯ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ಹೇಳಿಕೊಂಡಿರುವ ಹರಕೆ ಇದು. ಪ್ರತೀ ವರ್ಷ ನಡೆಯುವ ಕಟೀಲು ಶ್ರೀದುರ್ಗೆಯ ಜಾತ್ರೆಯ ಕೊನೆಯ ದಿನ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಈ ಬಾರಿಯೂ ಜಾತ್ರೋತ್ಸವ ದೇವಿಯ ಅವಭೃತ ಸ್ನಾನದೊಂದಿಗೆ ಸಂಪನ್ನವಾಗಿದೆ.
Recommended Video

ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ಕಾದಾಟ
ಬಳಿಕ ನಡೆಯುವ ಈ ಬೆಂಕಿಯ ಆಟ ದೇವರಿಗೆ ಬಲು ಇಷ್ಟ ಎಂಬುದು ಭಕ್ತರ ನಂಬಿಕೆ. ದುಷ್ಟ ಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಿಪಡಿಸಲು ಈ ರೀತಿಯ ಆಟವನ್ನು ಹಿಂದಿನ ಕಾಲದಲ್ಲಿ ಆಡಿದ್ದರು ಎನ್ನುವ ಕಥೆ ಇದೆ. ಹೀಗಾಗಿ ಈಗಲೂ ಈ ಬೆಂಕಿಯ ಹೋರಾಟವನ್ನು ಸ್ಥಳೀಯರು ನಡೆಸಿಕೊಂಡು ಬರುತ್ತಿದ್ದಾರೆ. ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ಬೆಂಕಿಯ ಜ್ವಾಲೆಗಳಿರುವ ದೀವಟಿಗೆಯನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ, ಈವರೆಗಿನ ಇತಿಹಾಸದಲ್ಲಿ ಈ ಬೆಂಕಿಯ ಕೊಳ್ಳಿಯ ಹೋರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕನಿಷ್ಟ ಉಟ್ಟ ಬಟ್ಟೆಗೂ ಬೆಂಕಿ ತಗುಲಿಲ್ಲ.
ಜಾತ್ರೆ ಸಂದರ್ಭದಲ್ಲಿ ಮಾತ್ರ ನಡೆಯುವ ಹರಕೆಯ ರೂಪದ ಈ ಕೊಳ್ಳಿಯ ಹೋರಾಟದಲ್ಲಿ ಭಾಗವಹಿಸುವ ಎರಡೂ ತಂಡಗಳಿಗೆ ದೇವರ ಅವಭೃತದ ಬಳಿಕ ಪ್ರಸಾದ ನೀಡಲಾಗುತ್ತದೆ. ಭಕ್ತರು ದೇವಿಯ ಕುಂಕುಮವನ್ನು ಮೈಗೆ ಲೇಪಿಸಿಕೊಳ್ಳುತ್ತಾರೆ. ದೇವಳದ ಸಮೀಪದ ಗುಡ್ಡವೊಂದರಲ್ಲಿ ಮೊದಲ ಸುತ್ತಿನ ಬೆಂಕಿಯ ಹೋರಾಟ ನಡೆಯುತ್ತದೆ. ನಂತರ ದೇವಸ್ಥಾನದ ಮುಂಭಾಗದಲ್ಲಿ ಹೋರಾಟ ನಡೆಯುತ್ತದೆ.

ಯಾರು ಹಿಂದಕ್ಕೆ ಸರಿಯುತ್ತಾರೋ ಅವರು ಸೋಲುತ್ತಾರೆ
ಇದೊಂದು ಸಾಂಕೇತಿಕ ಹೋರಾಟವಾಗಿದ್ದರೂ, ಈ ಸಂದರ್ಭದಲ್ಲಿ ಮಾತ್ರ ಆವೇಶದಿಂದ ನೈಜ ವೈರಿಗಳ ಥರ ಹೋರಾಟ ನಡೆಸುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗುವುದೂ ಇದೆ. ಇವರನ್ನು ನಿಯಂತ್ರಿಸಲೆಂದೇ ಗ್ರಾಮದ ಹಿರಿಯರೂ ಇರುತ್ತಾರೆ. ಮೂರು ಬಾರಿ ಈ ರೀತಿ ಬೆಂಕಿ ಎಸೆಯುವಾಗ ಯಾರು ಹಿಂದಕ್ಕೆ ಸರಿಯುತ್ತಾರೋ ಅವರು ಸೋಲುತ್ತಾರೆ. ಹಾಗಾಗಿ ಗೆಲ್ಲುವ ಛಲದಿಂದಲೇ ಹೋರಾಟ ನಡೆಸುತ್ತಾರೆ.

ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ
ಬೆಂಕಿಯನ್ನು ಎಸೆಯುವಾಗ ಇವರಲ್ಲಿರುವ ಕೋಪಾವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಬೆಂಕಿ ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ, ಇದುವರೆಗೆ ಯಾರಿಗೂ ಏನೂ ಆಗದಿರುವುದಕ್ಕೆ ಇಲ್ಲಿನ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ. ಈ ಆಟದಲ್ಲಿ ಭಾಗವಹಿಸಲೆಂದೇ ದೂರದ ಊರಿನಲ್ಲಿರುವ ಗ್ರಾಮದ ಜನರು ಬಂದು ಸೇರುವುದು ಇಲ್ಲಿನ ಇನ್ನೊಂದು ವಿಶೇಷ.

ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆ ತರುತ್ತಾರೆ
ಎಂಟು ದಿನಗಳ ಜಾತ್ರಾ ಮಹೋತ್ಸದ ಕೊನೆಯ ದಿನ ಈ ಅಗ್ನಿಕೇಳಿ ನಡೆಯುತ್ತದೆ. ಈ ಅಗ್ನಿಕೇಳಿಗೆ ತುಳುವಿನಲ್ಲಿ ತೂಟೆದಾರ ಅಂತಾನೂ ಕರೆಯುತ್ತಾರೆ. ಈ ಆಟ ಆಡಲು ಎಲ್ಲರಿಗೂ ಅವಕಾಶ ಇಲ್ಲ. ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡು ಗ್ರಾಮದ ಜನರಿಗೆ ಮಾತ್ರ ಅವಕಾಶ ಇದೆ. ಎಂಟು ದಿನಗಳ ಕಾಲ ಶುದ್ಧ ಶಾಖಾಹಾರಿಗಳಾಗಿ, ದುಶ್ಚಟಗಳನ್ನು ತ್ಯಜಿಸಿ, ದೇವಿಯ ಅವಭೃತ ಸ್ನಾನದ ಬಳಿಕ ತಾವೂ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಈ ಅಗ್ನಿ ಕೇಳಿಯಲ್ಲಿ ಗ್ರಾಮಸ್ಥರು ಭಾಗವಹಿಸುತ್ತಾರೆ. ಗ್ರಾಮಸ್ಥರು ಬರುವಾಗ ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆಯನ್ನು ತರುತ್ತಾರೆ. ಈ ಬಾರಿಯ 300ಕ್ಕೂ ಅಧಿಕ ಭಕ್ತರು ಈ ತೂಟೆದಾರ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications