ನೀರಿನ ಟ್ಯಾಂಕ್ ಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳ ಸಾವು
ಮಂಗಳೂರು, ಏಪ್ರಿಲ್ 3: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ನೀರಿನ ಟ್ಯಾಂಕ್ ಗೆ ಬಿದ್ದು, ಇಬ್ಬರು ಬಾಲಕಿಯರು ಹಾಗೂ ಒಬ್ಬ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಸಮೀಪದ ಪಾಣಾಜೆಯ ಉಡ್ಡಂಗಳದಲ್ಲಿ ಈ ಘಟನೆ ಸಂಭವಿಸಿದೆ. ಸಂಜೆ ವೇಳೆಗೆ ಶಾಲೆಯಿಂದ ಹಿಂತಿರುಗಿದ ಬಳಿಕ ಮನೆಯ ಸಮೀಪ ಪಂಚಾಯತ್ ವತಿಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ನಿರ್ಮಿಸಿದ್ದ ನೂತನ ನೀರಿನ ಟ್ಯಾಂಕ್ ಬಳಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು.
ಸೆಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಾಟ ಆಡಲು ಮುಂದಾಗಿರುವ ಮಕ್ಕಳು ಊರಿನ ನೀರಿನ ಟ್ಯಾಂಕ್ ಬಳಿ ತೆರಳಿದ್ದಾರೆ. ನೀರಾಟ ಆಡಲು ನೀರಿನ ಟ್ಯಾಂಕ್ ಗೆ ಇಳಿದಿದ್ದ ಮಕ್ಕಳು ಟ್ಯಾಂಕ್ ನಿಂದ ಹೊರಬರಲಾಗದೆ ಮೃತಪಟ್ಟಿದ್ದಾರೆ.

ಉಡ್ಡಂಗಳ ನಿವಾಸಿ ರವಿಮೂಲ್ಯ ಎಂಬುವರ ಮಗ ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾರ್ಥಿ ಜಿತೇಶ್ (13), ರವಿಮೂಲ್ಯ ಅವರ ಸಹೋದರ ಹರೀಶ್ ಮೂಲ್ಯ ಎಂಬುವರ ಮಕ್ಕಳಾದ ಇದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ನಿಸ್ಮಿತಾ (13) ಮತ್ತು 4ನೇ ತರಗತಿ ವಿದ್ಯಾರ್ಥಿನಿ ಚೈತ್ರಾ (9) ಮೃತಪಟ್ಟವರು.
ಮಕ್ಕಳು ಮನೆಗೆ ಬಾರದಿರುವುದನ್ನು ಗಮನಿಸಿದ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳು ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗೆ ಸೇರಿದ ಟ್ಯಾಂಕ್ ಆಗಿದ್ದು, ಟ್ಯಾಂಕ್ ನಿರ್ಮಾಣವಾಗಿ ಮೂರು ತಿಂಗಳು ಕಳೆದಿದೆ. ಟ್ಯಾಂಕ್ ನಲ್ಲಿ ಅರ್ಧ ನೀರು ತುಂಬಿಸಿ ಇಟ್ಟಿದ್ದು, ಬೀಗ ಹಾಕಿರಲಿಲ್ಲ. ಗ್ರಾಮ ಪಂಚಾಯತ್ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications