ಕರಾವಳಿಯ ಸಂಘ ಪರಿವಾರದ ಮುಖಂಡರ ಮೇಲೆ ದಾಳಿಗೆ ಸ್ಕೆಚ್?
ಮಂಗಳೂರು, ಜನವರಿ 10: ಕರಾವಳಿಯ ಸಂಘ ಪರಿವಾರದ ಮುಖಂಡರ ವಿರುದ್ಧ ದಾಳಿಗೆ ಸಂಚು ರೂಪಿಸಲಾಗುತ್ತಿದೆಯಾ? ಇಂತಹದೊಂದು ಅನುಮಾನ ಮೂಡಲಾರಂಭಿಸಿದೆ.
ಆರ್ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡರಾದ ಶರಣ್ ಪಂಪ್ ವೆಲ್, ಜಗದೀಶ್ ಶೇಣವ ವಿರುದ್ಧ ಸ್ಕೆಚ್ ರೂಪಿಸಲಾಗಿದೆಯಾ? ಇಂತಹದೊಂದು ಅನುಮಾನ ಇದೀಗ ಮೂಡಲಾರಂಭಿಸಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಇಂದು ಪೊಲೀಸ್ ಇಲಾಖೆಯಿಂದ ದೂರವಾಣಿ ಕರೆ ಮಾಡಲಾಗಿದ್ದು, ಜಾಗೃತೆಯಾಗಿ ಇರುವಂತೆ ಸೂಚಿಸಲಾಗಿದೆ. ಈ ಕುರಿತು ಒನ್ ಇಂಡಿಯಾಕ್ಕೆ ಮಾಹಿತಿ ನೀಡಿರುವ ಶರಣ್ ಪಂಪ್ ವೆಲ್ ಇಂದು ಮುಂಜಾನೆ ಪೊಲೀಸರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಜಾಗೃತೆಯಾಗಿರುವಂತೆ ತಿಳಿಸಿದ್ದಾರೆ. ಒಂದೇ ಕಡೆ ಹೆಚ್ಚು ದಿನ ತಂಗಬೇಡಿ. ಒಬ್ಬರೇ ಎಲ್ಲಿಯೂ ತೆರಳದಂತೆ ಎಚ್ಚರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಶರಣ್ ಪಂಪ್ ವೆಲ್ ಮಾತ್ರವಲ್ಲದೇ ಆರ್ ಎಸ್ ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡ ಜಗದೀಶ ಶೇಣವ ಅವರಿಗೂ ಕೂಡ ಅಲರ್ಟಾಗಿರಲು ಮಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಯಾವ ಕಡೆಯಿಂದ ಬೆದರಿಕೆ ಇದೆ ಎನ್ನುವ ಮಾಹಿತಿಯನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ.

ಅಂದಹಾಗೆ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಪ್ರಭಾಕರ್ ಭಟ್ ಅವರನ್ನು ವಿಮಾನದಲ್ಲಿ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ ಕಲ್ಲಡ್ಕ ಪ್ರಭಾಕರ್ ಭಟ್ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿಯೂ ಪ್ರಭಾಕರ್ ಭಟ್ ಅವರಿಗೆ ಪೊಲೀಸರು ಬೆಂಗಾವಲು ನೀಡಿದ್ದರು ಎಂದು ಹೇಳಲಾಗಿದೆ.












Click it and Unblock the Notifications