ಯಕ್ಷಗಾನಕ್ಕೂ ಕೋಮು ಬಣ್ಣ- ದ್ವೇಷ ಹಬ್ಬೋದು ನಿಲ್ಲಿಸ್ರಣ್ಣ
ಮಂಗಳೂರು, ಜನವರಿ 11: ಯಕ್ಷಗಾನ ಪ್ರದರ್ಶನದ ಪ್ರಸಂಗ ಒಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ, ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ, ಹಳೆಯ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಇದಕ್ಕೆ ಮುಸ್ಲಿಂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತ ಪಡಿಸುತ್ತಿವೆ. ಈ ಯಕ್ಷಗಾನ ಪ್ರಸಂಗವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರಸಂಗದಲ್ಲಿ ಅಭಿನಯಿಸಿದ ಕಲಾವಿದರು ದಾರಿ ಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೋಸ್ಟ್ ಗಳು ಹರಿದಾಡುತ್ತಿವೆ.
ಉಡುಪಿಯ ಸಾಲಿಗ್ರಾಮ ಗುರುಪ್ರಸಾಧಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಪ್ರಸಂಗ ಇದಾಗಿದ್ದು, ಎಲ್ಲಿ- ಯಾವಾಗ ಪ್ರದರ್ಶಿಸಲಾಯಿತು ಎಂಬುದರ ಉಲ್ಲೇಖವಿಲ್ಲ.

ಅದರೆ, ಸಾಮಾಜಿಕ ಜಾಲತಾಣಗಳಲ್ಲಿ "ಯಕ್ಷಗಾನದಲ್ಲಿ ಕೂಡ ಮುಸ್ಲಿಂ ಸಮುದಾಯದ ಬಗ್ಗೆ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ, ಮುಸ್ಲಿಮರಿಗೆ ಹುಟ್ಟುವ ಮಕ್ಕಳ ಬಗ್ಗೆ ಅವಮಾನಿಸಲಾಗಿದೆ. ಮುಸ್ಲಿಮರಿಗೆ ಹುಟ್ಟುವ ಇಷ್ಟೊಂದು ಮಕ್ಕಳು ನಿಮಗೆ ಹುಟ್ಟಿದ್ದು ಎಂಬ ಗ್ಯಾರಂಟಿ ಇದೆಯೇ ಎಂದು ಅವಹೇಳನ ಮಾಡಿ ಅತೀ ಕೀಳು ಭಾಷೆ ಬಳಸಲಾಗಿದೆ. ಮುಸ್ಲಿಮರು ನೀವು ಎಲ್ಲಿಂದಲೋ ಬಂದವರು" ಎಂದು ಉಲ್ಲೇಖಿಸಲಾಗಿದೆ.
ಹಿಂದೂಗಳ ದಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಕೋಮು ಪ್ರಚೋದನೆ ಮಾಡಿದ ವಿರುದ್ಧ ಮುಸ್ಲಿಂ ಸಮುದಾಯ ಸಂಘಟನೆಗಳು ಗಮನಿಸಬೇಕು. ಇದರ ವಿರುದ್ದ ಕೇಸು ದಾಖಲಿಸಬೇಕು .ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇನ್ನೊಂದು ಧರ್ಮವನ್ನು ಅವಮಾನಿಸುತ್ತಿರುವುದು ಶೋಭೆತರುವಂಥದ್ದಲ್ಲ ಎಂದಿದ್ದಾರೆ.

ಇಂತಹ ಯಕ್ಷಗಾನದ ಆಟವನ್ನು ಕೊನೆಗೊಳಿಸಿ, ಇಲ್ಲದಿದ್ದರೆ ಇಂತಹ ಪಾತ್ರಧಾರಿಗಳು ಬೀದಿಯಲ್ಲಿ ಹೆಣವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎಲ್ಲಕ್ಕೂ ಒಂದು ಮಿತಿ ಇದೆ, ನೆನಪಿರಲಿ. ಮುಸ್ಲಿಮರು ನಿಸ್ಸಹಾಯಕತೆಯಿಂದ ಬದುಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಇನ್ನೊಂದು ವಿವಾದ ಭುಗಿಲೇಳುವ ಲಕ್ಷಣಗಳು ಕಾಣುತ್ತಿವೆ. ಕರಾವಳಿಯಲ್ಲಿ ಕೋಮುದ್ವೇಷ ಹೊಗೆಯಾಡುತ್ತಿರುವ ಸಂದರ್ಭದಲ್ಲಿ ಈ ಯಕ್ಷಗಾನ ಪ್ರಸಂಗದ ತುಣಕನ್ನು ಹರಿಬಿಟ್ಟು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.












Click it and Unblock the Notifications