ಶ್ರೀ ಕ್ಷೇತ್ರ ಕಟೀಲಿನಲ್ಲಿ ಲಲಿತ ಪಂಚಮಿ ಸಂಭ್ರಮ: 25 ಸಾವಿರ ಮಹಿಳಾ ಭಕ್ತರಿಗೆ ದುರ್ಗೆಯ ಶೇಷವಸ್ತ್ರ ವಿತರಣೆ
ಮಂಗಳೂರು, ಅಕ್ಟೋಬರ್. 14: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟಿದೆ. ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಿಶೇಷ ಲಲಿತಾ ಪಂಚಮಿ ಮಹೋತ್ಸವ ಶನಿವಾರ (ಅ.13) ನಡೆಯಿತು.
ಪ್ರತೀ ವರ್ಷದಂತೆ ಈ ವರ್ಷವೂ ರಾತ್ರಿ ಅನ್ನ ಪ್ರಸಾದ ಸ್ವೀಕರಿಸಿದ ಮಹಿಳಾ ಭಕ್ತರಿಗೆ ದುರ್ಗೆಯ ಶೇಷವಸ್ತ್ರ ವಿತರಿಸಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ರಾತ್ರಿ ಅನ್ನ ಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ಶೇಷ ವಸ್ತ್ರ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಈ ಬಾರಿಯೂ ದೇವಳಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುಮಾರು 25 ಸಾವಿರ ಮಹಿಳಾ ಭಕ್ತರಿಗೆ ಶೇಷವಸ್ತ್ರವನ್ನು ವಿತರಿಸಲಾಯಿತು. ಸಂಜೆ 5 ಗಂಟೆಯಿಂದಲೇ ಭಕ್ತರ ಸರದಿ ಪ್ರಾರಂಭವಾಗಿದ್ದು, ಭೋಜನ ಶಾಲೆಗೆ ಸರದಿಯಲ್ಲಿ ಹೋಗಲು ದೇವಸ್ಥಾನದ ಬಸ್ ನಿಲ್ದಾಣ ಕುದ್ರು ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ತಡ ರಾತ್ರಿವರೆಗೂ ಭಕ್ತರು ದೇವಳಕ್ಕೆ ಭೇಟಿ ನೀಡಿ ನಂತರ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದರು. ಮುಂದೆ ಓದಿ...

ಸೂಕ್ತ ವ್ಯವಸ್ಥೆ
ದೇವಸ್ಥಾನದಲ್ಲಿ ದೇವರ ದರ್ಶನ ಹಾಗೂ ಅನ್ನ ಪ್ರಸಾದ ವಿತರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಮತ್ತಿತರ 300 ಕ್ಕೂ ಅಧಿಕ ಸ್ವಯಂ ಸೇವಕರು ಈ ಸಂದರ್ಭದಲ್ಲಿ ಪಾಲ್ಗೊಂಡರು.

ದೇವಿಯ ಶೇಷವಸ್ತ್ರ ವಿತರಣೆ
ನಿನ್ನೆ ಶನಿವಾರ (ಅ.13) ಒಂದೇ ದಿನ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ನಂತರ ಮುಕ್ತೇಸರರು ಹಾಗು ಅರ್ಚಕರು ಮಹಿಳಾ ಭಕ್ತರಿಗೆ ದೇವಿಯ ಶೇಷವಸ್ತ್ರ ವಿತರಣೆ ಮಾಡಿದರು.

ಸೀರೆ ಅರ್ಪಣೆ
ದುರ್ಗೆಗೆ ಭಕ್ತರಿಂದ ವರ್ಷವಿಡೀ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸೀರೆಯನ್ನು ಅರ್ಪಿಸುತ್ತಾರೆ. ಈ ಸೀರೆಯನ್ನು ರಂಗ ಪೂಜೆ, ಚಂಡಿಕಾ ಹೋಮ ಸೇವೆ ನೀಡುವ ಭಕ್ತರಿಗೆ ಮತ್ತು ದೇವಳಕ್ಕೆ ಭೇಟಿ ನೀಡುವ ಗಣ್ಯರಿಗೆ ಪ್ರಸಾದ ರೂಪವಾಗಿ ನೀಡುತ್ತಿದ್ದು, ಉಳಿದ ಸೀರೆಯನ್ನು ರವಕೆ ಕಣವಾಗಿ ಪರಿವರ್ತಿಸಿ, ನವರಾತ್ರಿಯ ಲಲಿತ ಪಂಚಮಿ ದಿನ ರಾತ್ರಿ ಅನ್ನ ಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ನೀಡಲಾಗುತ್ತದೆ.

ಐಶ್ವರ್ಯ ವೃದ್ಧಿ
ಈ ಸೀರೆಯನ್ನು ಭಕ್ತರು ತಮ್ಮ ಮನೆಯ ಕಪಾಟಿನಲ್ಲಿ ಇಡುತ್ತಾರೆ. ಇದರಿಂದ ತಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ, ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.












Click it and Unblock the Notifications