ಅನಿಲ್ ಬೋಕಿಲ್ ಅರ್ಥ ಕ್ರಾಂತಿಯ ಬಗ್ಗೆ ಪಾಕಿಸ್ತಾನಕ್ಕೂ ಕುತೂಹಲ!
ಪುಣೆ ಮೂಲದ ಅರ್ಥಕ್ರಾಂತಿ ಸಂಸ್ಥೆಯ ಅನಿಲ್ ಬೋಕಿಲ್ ಮಂಗಳವಾರ (ಮಾರ್ಚ್ 21) ಮಂಗಳೂರಿನಲ್ಲಿ ಮತ್ತೊಮ್ಮೆ ಅಪನಗದೀಕರಣ ಬಗ್ಗೆ ಮಾತನಾಡಿದ್ದಾರೆ. ಜತೆಗೆ ತೆರಿಗೆ ವ್ಯವಸ್ಥೆ, ದೊಡ್ಡ ನೋಟುಗಳ ನಿಷೇಧದ ಬಗ್ಗೆ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ
ಮಂಗಳೂರು, ಮಾರ್ಚ್ 22: ನಾನು ಪ್ರತಿಪಾದಿಸುವ ಅರ್ಥ ಕ್ರಾಂತಿಯ ನಾಲ್ಕು ಸೂತ್ರಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡರೆ ಭಾರತದ ಆರ್ಥಿಕತೆ ಪ್ರಪಂಚಕ್ಕೆ ಮಾದರಿಯಾಗಲಿದೆ. ಈ ಅರ್ಥ ಕ್ರಾಂತಿಯ ಬಗ್ಗೆ ಪಾಕಿಸ್ತಾನ ಕೂಡ ಕುತೂಹಲಕಾರಿಯಾಗಿದೆ ಎಂದು ಅನಿಲ್ ಬೋಕಿಲ್ ಹೇಳಿದರು.
ಈ ಅನಿಲ್ ಬೋಕಿಲ್ ಯಾರು ಅನ್ನೋದನ್ನು ನಿಮಗೆ ಇನ್ನೊಮ್ಮೆ ನೆನಪಿಸಬೇಕು. ಅಪನಗದೀಕರಣ ಸೇರಿದಂತೆ ಕೆಲವು ಆರ್ಥಿಕ ಸುಧಾರಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ ಪುಣೆ ಮೂಲದ ಅರ್ಥ ಕ್ರಾಂತಿ ಎಂಬ ಸಂಸ್ಥೆಯವರು ಅನಿಲ್ ಬೋಕಿಲ್. ತೆರಿಗೆಯನ್ನು ಏಕರೂಪ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ಸಲಹೆಗಳನ್ನು ಬೋಕಿಲ್ ನೀಡಿದ್ದರು.[500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮೊದಲನೇದಾಗಿ ಏಕರೂಪ ತೆರಿಗೆ ಪದ್ಧತಿಯನ್ನು ದೇಶದಲ್ಲಿ ಜಾರಿಗೆ ತರಬೇಕು. ಆದಾಯ ತೆರಿಗೆ ಸೇರಿದಂತೆ ಯಾವುದೇ ತೆರಿಗೆಗಳಿಗೆ ಆಗ ಅವಕಾಶ ಇರುವುದಿಲ್ಲ. ಎರಡನೆಯದಾಗಿ ನೋಟುಗಳ ಮುಖಬೆಲೆ 50ಕ್ಕೆ ಸೀಮಿತವಾಗಿರಬೇಕು. ಈಗ ಜಾರಿಗೆ ತಂದಿರುವ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಇನ್ನೂ ಮುಂದುವರಿದು, 1,000 ರುಪಾಯಿ ನೋಟನ್ನು ಮುದ್ರಿಸಿ, 500ರ ನೋಟು ಹಾಗೂ 100ರ ನೋಟನ್ನು ರದ್ದುಪಡಿಸಬೇಕು. ಕೊನೆಗೆ 50 ಮುಖಬೆಲೆಯ ನೋಟುಗಳು ಮಾತ್ರ ಉಳಿದುಕೊಳ್ಳಬೇಕು. ಇದರಿಂದ ಆರ್ಥಿಕ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ ಎಂದು ಪ್ರತಿಪಾದಿಸಿದರು. ಅವರು ಹೇಳಿದ ಮತ್ತಷ್ಟು ಮಹತ್ವದ ಆರ್ಥಿಕ ಸುಧಾರಣೆ ಬಗ್ಗೆ ಮುಂದೆ ಓದಿ..[ನೋಟು ರದ್ದು ಸಲಹೆಗಾರನಿಗೇ ಸರಕಾರದ ಕ್ರಮ ಖುಷಿ ತಂದಿಲ್ಲ!]
ರಫ್ತಿನ ಮೇಲೆ ತೆರಿಗೆ ಬೇಡ
ಆಮದು ವಸ್ತುವಿನ ಮೇಲೆ ತೆರಿಗೆ ವಿಧಿಸಬೇಕು. ದೇಶದಿಂದ ರಫ್ತು ಆಗುವ ಯಾವುದೇ ವಸ್ತುವಿಗೆ ತೆರಿಗೆಯೇ ಇರಬಾರದು. ಆದರೆ ಆಮದುಗೊಳ್ಳುವ ವಸ್ತುಗಳ ಮೇಲೆ ತೆರಿಗೆ ವಿಧಿಸಿದರೆ ಬೇಕಾಬಿಟ್ಟಿ ಮಾಡಿಕೊಳ್ಳುವ ಆಮದನ್ನು ನಿರ್ಬಂಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಷಡ್ಯಂತ್ರ ಮುರಿಯುವ ಯತ್ನ
ಹಣವನ್ನು ಮುದ್ರಿಸುವ ಹಕ್ಕು ಸಾಂವಿಧಾನಿಕವಾಗಿ ಸರಕಾರಕ್ಕಿರುತ್ತದೆ. ಅದರ ಮೌಲ್ಯ ನಿಗದಿಯಾಗುವುದು ಸರಕಾರಗಳ ನಿರ್ಣಯಗಳ ಮೇಲೆ. ಈ ಅಧಿಕಾರವನ್ನು ಸರಕಾರ ಸರಿಯಾಗಿ ನಿಭಾಯಿಸಿತು. ಪಾಕಿಸ್ತಾನದಿಂದ ವ್ಯಾಪಕವಾಗಿ ಹರಡುತ್ತಿದ್ದ ಕಳ್ಳನೋಟುಗಳ ಸಾಗಣೆ, ಡ್ರಗ್ ಮಾಫಿಯಾ ಹಾಗೂ ಹವಾಲಾ ಹಣವನ್ನು ನಿಯಂತ್ರಿಸಲು ಮತ್ತು ಈ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟಲು ಅಪನಗದೀಕರಣ ಕ್ರಮವು ಸೂಕ್ತವಾಗಿ ಬಳಕೆಯಾಯಿತು ಎಂದರು.
ಜನರ ಹಣವನ್ನು ಜನರಿಗೆ ತಲುಪಿಸಲು ಈ ಕ್ರಮ
ದುಡ್ಡೆಂಬುದು ಯಾರ ಸ್ವತ್ತೂ ಅಲ್ಲ. ಅದು ವ್ಯವಹಾರಕ್ಕಿರುವ ಒಂದು ಮಾಧ್ಯಮವಷ್ಟೇ. ಆದರೆ ನಮ್ಮಲ್ಲಿ ಸಾರ್ವಜನಿಕ ಹಣವನ್ನೂ ಸ್ವಂತ ಸ್ವತ್ತಿನಂತೆ ಬಳಸಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಾಗೂ ಜನರ ಹಣವನ್ನು ಸೂಕ್ತವಾಗಿ ಜನರಿಗೆ ತಲುಪಿಸುವಂತೆ ಮಾಡಲು ಈ ಕ್ರಮವನ್ನು ಜಾರಿಗೊಳಿಸಲಾಯಿತು ಎಂದು ಹೇಳಿದರು.
ಸ್ವಚ್ಛ ಆಡಳಿತಕ್ಕಾಗಿ ನಗದು ರಹಿತ ವಹಿವಾಟು
ಇಂದು ಜಗತ್ತಿನ ಸುಧಾರಿತ ಅರ್ಥವ್ಯವಸ್ಥೆಗಳನ್ನು ಗಮನಿಸಿದಾಗ ಅಲ್ಲಿ ನಗದು ರಹಿತ ವಹಿವಾಟು ಪ್ರಮುಖವಾಗಿದೆ. ಈ ಮೂಲಕ ಅಲ್ಲಿ ಭ್ರಷ್ಟಾಚಾರ ರಹಿತ, ಸ್ವಚ್ಛ ಆಡಳಿತ ಕಾಣಬಹುದಾಗಿದೆ. ಭಾರತದಲ್ಲಿ ಕೂಡ ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಈ ಕ್ರಮವನ್ನು ಜಾರಿಗೊಳಿಸಲಾಯಿತು ಎಂದು ನೋಟು ಅಮಾನ್ಯದ ಹಿಂದಿನ ಉದ್ದೇಶವನ್ನು ಅನಿಲ್ ಬೋಕಿಲ್ ಸ್ಪಷ್ಟಪಡಿಸಿದರು.