ಯು.ಟಿ ಖಾದರ್ ಕ್ಷೇತ್ರದ ಜನರ ಸೇತುವೆ ಕನಸು: ಸಂಕಷ್ಟದಲ್ಲಿ ಪಾವೂರು-ಉಳಿಯ ದ್ವೀಪದ ಜನ!
ಮಂಗಳೂರು, ಮೇ 31: ಅದೊಂದು ಪುಟ್ಟ ದ್ವೀಪ. ಸುತ್ತಲೂ ಹರಿಯುವ ನೇತ್ರಾವತಿ ನದಿ, ದೃಷ್ಠಿ ಹಾಯಿಸಿದಲ್ಲೆಲ್ಲಾ ಹಸಿರ ಸಿರಿ. ಏಳೆಂಟು ಕಿಲೋ ಮೋಟರ್ ದೂರದಲ್ಲಿ ಸಿಗುವ ಮುಖ್ಯ ಸಿಟಿ. ಸುಖ ಜೀವನಕ್ಕೆ ಇನ್ನೇನು ಬೇಕು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಆ ಊರಿಗೆ ಪ್ರಮುಖವಾಗಿ ಬೇಕಾಗಿರುವ ಮೂಲ ಸೌಕರ್ಯವೇ ಸದ್ಯ ಮರೀಚಿಕೆಯಾಗಿದೆ.
ಅದರಲ್ಲೂ ಪ್ರತಿ ಬಾರಿ ಆಶ್ವಾಸನೆ ನೀಡಿ, ಮತ್ತೆ ಮೂಲ ಸೌಕರ್ಯ ಒದಗಿಸಿದ ಶಾಸಕರೇ ಸಭಾಪತಿಯಾಗಿರುವುದರಿಂದ ಮಂಗಳೂರು ನಗರದಿಂದ ಕೇವಲ 8 ಕಿ.ಮೀ. ದೂರವಿರುವ ಪಾವೂರು- ಉಳಿಯ ಪ್ರದೇಶದ 50 ದ್ವೀಪವಾಸಿ ಕುಟುಂಬದ ಕನಸು ಹೋಳಾಗಿದೆ.

ಈ ದ್ವೀಪವಾಸಿಗಳು ತಮ್ಮ ದೈನಂದಿನ ಕಾರ್ಯಕ್ಕೆ ಮಂಗಳೂರು ನಗರವನ್ನೇ ಅವಲಂಬಿಸಿಕೊಂಡಿದ್ದು, ಇಲ್ಲಿನ 50 ಕುಟುಂಬದಲ್ಲಿ ಹಿರಿಯರು - ಕಿರಿಯರೆಂದು ಒಟ್ಟು 140ರಷ್ಟು ಮಂದಿಯಿದ್ದಾರೆ. ಈ ಜನರು ಮಳೆಗಾಲದಲ್ಲಿ ಒಂದು ಲೀಟರ್ ಹಾಲು ಕೊಳ್ಳಲು ದೋಣಿಯನ್ನೇ ಅವಲಂಬಿಸಲೇಬೇಕಾದ ಅನಿವಾರ್ಯತೆ ಇದೆ.
ಇಲ್ಲಿನ ಜನತೆ ತಮ್ಮ ಊರಿಗೊಂದು ಸೇತುವೆ ಬೇಕೆಂದು ಸಾಕಷ್ಟು ವರ್ಷಗಳಿಂದ ಎಂಪಿ, ಎಂಎಲ್ಎ, ಡಿಸಿ ಎಂದು ರಾಜಕಾರಣಿ, ಅಧಿಕಾರಿಗಳ ಕಚೇರಿಗಳ ಬಾಗಿಲು ಬಡಿದಿದ್ದಾರೆ. ಆದರೆ ಇವರ ಚಪ್ಪಲಿ ಸವೆಯಿತೇ ಹೊರತು ಯಾವ ಸೇತುವೆಯೂ ನಿರ್ಮಾಣವಾಗಿಲ್ಲ. ಆಶ್ವಾಸನೆಗಳು ಕಡತಗಳಲ್ಲಿಯೇ ಬಾಕಿ ಉಳಿಯಿತು. ಆದರೆ ಉಳಿಯದ ನಿವಾಸಿಗಳ ಬವಣೆ ಮಾತ್ರ ತೀರಿಲ್ಲ.
ಆದ್ದರಿಂದ ಇಲ್ಲಿನ ನಿವಾಸಿಗಳು ದಶಕಗಳ ಹಿಂದೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಬಳಿಕ ತಾತ್ಕಾಲಿಕ ಸೇತುವೆ ನಿರ್ಮಿಸಿ ಓಡಾಡುತ್ತಿದ್ದಾರೆ. ಆದರೆ ಅಂದು ನೇತ್ರಾವತಿಯ ನದಿಪಾತ್ರ 450 ಅಡಿ ಅಗಲವಿದ್ದರೆ, ಮರಳುಗಾರಿಕೆ ದಂಧೆಯಿಂದ ಈಗ ನದಿಪಾತ್ರ 900 ಅಡಿ ಅಗಲವಾಗಿದೆ. ಆದರೆ ಈ ದ್ವೀಪದ ಇನ್ಫೆಂಟ್ ಜೀಸಸ್ ಚರ್ಚ್ ಪಾದ್ರಿ ಫಾ.ಜೆರಾಲ್ಡ್ ಲೋಬೊರ ಮುತುವರ್ಜಿಯಿಂದ ಊರ ದಾನಿಗಳ ನೆರವಿನಿಂದ ಮರದ ಹಲಗೆ, ಕಬ್ಬಿಣದ ರಾಡ್, ಪೈಪ್ಗಳಿಂದ 18 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣವಾಗಿದೆ.

ಆದರೆ ಇದೀಗ ಹೊಸ ಅಣೆಕಟ್ಟು ನಿರ್ಮಾಣದಿಂದ ಮತ್ತೊಂದು ಸಂಕಷ್ಟ ತಲೆದೋರಿದೆ. ಈ ಅಣೆಕಟ್ಟು ಸಂಪೂರ್ಣಗೊಂಡು ನೀರು ಸಂಗ್ರಹಿಸಲು ತೊಡಗಿದರೆ ನೀರಿನ ಮಟ್ಟ ಈಗಿರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಇದರಿಂದ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೂ ತೊಡಕಾಗಲಿದೆ.
ಪಾವೂರು - ಉಳಿಯ ದ್ವೀಪವಾಸಿಗಳು ಬೇಸಿಗೆಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ಈ ಸೇತುವೆಯನ್ನೇ ಸಂಪರ್ಕ ಮಾರ್ಗವಾಗಿ ಅವಲಂಬಿಸುತ್ತಾರೆ. ಆದರೆ ಮಳೆಗಾಲ ಬಂತೆಂದರೆ ಈ ಊರಿನವರು ಸಂಕಷ್ಟಕ್ಕೊಳಗಾಗುತ್ತಾರೆ. ಯಾಕೆಂದರೆ ಮಳೆಗಾಲದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿ ಸೇತುವೆ ಕೊಚ್ಚಿಹೋಗುತ್ತದೆ. ಆದ್ದರಿಂದ ಅದಕ್ಕಿಂತ ಮೊದಲೇ ಈ ತಾತ್ಕಾಲಿಕ ಸೇತುವೆಯನ್ನು ಬಿಚ್ಚಿಡಬೇಕು. ಆ ಬಳಿಕ ಇಲ್ಲಿನ ಜನತೆ ಸಂಪೂರ್ಣ ದೋಣಿಯನ್ನೇ ಅವಲಂಬಿಸಬೇಕು.
ಸದ್ಯ ಸಭಾಪತಿಯಾಗಿರುವ ಯು.ಟಿ ಖಾದರ್ ಪ್ರತೀ ಚುನಾವಣೆಯ ಸಂದರ್ಭದಲ್ಲಿ ಈ ದ್ವೀಪ ಪ್ರದೇಶಕ್ಕೆ ಬಂದು ಮತಯಾಚನೆ ಮಾಡುತ್ತಾರೆ. ಪ್ರತೀ ಸಲವೂ ಸೇತುವೆ ಭರವಸೆಯನ್ನು ನೀಡುತ್ತಾರೆ. ಕೆಲ ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಖಾದರ್, ಒಂದು ಮಗುವನ್ನು ನೋಡಿ ಈ ಮಗು ಶಾಲೆಗೆ ಹೋಗೋವಾಗ ಸೇತುವೆ ಮೇಲೆನೇ ನಡೆದುಕೊಂಡು ಹೋಗುತ್ತದೆ ಅಂತಾ ಹೇಳಿದ್ದರು. ಆದರೆ ಈಗ ಆ ಮಗು ಏಳನೇ ತರಗತಿ ಕಲಿಯುತ್ತಿದೆ. ಮಗು ಇಂದಿಗೂ ದೋಣಿಯಲ್ಲೇ ದಡ ಸೇರುತ್ತಿದೆ ಎಂದು ದ್ವೀಪ ವಾಸಿ ಲವೀಟಾ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದಈ ಬಾರಿಯಾದರೂ ತಮಗೆ ಸೇತುವೆ ಬರುವ ನಿರೀಕ್ಷೆಯಲ್ಲಿ ಈ ದ್ವೀಪವಾಸಿಗಳಿದ್ದರು. ಆದರೆ ಕ್ಷೇತ್ರದ ಶಾಸಕ ಯುಟಿ ಖಾದರ್ ಸಭಾಪತಿಯಾಗಿ ಆಯ್ಕೆಯಾಗಿರೋದು ಜನರನ್ನು ಚಿಂತೆಗೀಡು ಮಾಡಿದೆ. ಅಂದರೆ ಈ ಬಾರಿಯೂ ಸೇತುವೆಯ ಕನಸು ಗಗನ ಕುಸುಮವಾಗುವ ಭೀತಿಯಲ್ಲಿದ್ದೇವೆ ಎನ್ನುವುದು ಸ್ಥಳೀಯರ ಮಾತಾಗಿದೆ.












Click it and Unblock the Notifications