ಬಾಯಲ್ಲಿ ನೀರೂರಿಸಿದ 'ಆಟಿಡೊಂಜಿ ದಿನ'ದ ತಿಂಡಿ ತಿನಿಸುಗಳು
ಮಂಗಳೂರು, ಜುಲೈ 31: ತುಳುನಾಡಿನಲ್ಲಿ ಆಟಿ (ಆಷಾಡ) ತಿಂಗಳಿಗೆ ವಿಶೇಷ ಮಾನ್ಯತೆ ಇದೆ. ಉಳಿದೆಲ್ಲಾ ತಿಂಗಳುಗಳಿಗೆ ಹೋಲಿಸಿದರೆ ಈ ತಿಂಗಳು ತುಳುನಾಡಿಗರಿಗೆ ವಿಶೇಷವಾದುದು. ಈ ತಿಂಗಳಲ್ಲಿ ವಿವಿಧ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಇಲ್ಲಿನ ಜನರು ಸೇವಿಸುತ್ತಾರೆ. ಜತೆಗೆ ಹಬ್ಬ ಹರಿದಿನಗಳಲ್ಲೂ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಅಡುಗೆಗೆ ಬಳಸುವುದು ರೂಢಿ.
ಹೆಣ್ಣಿಗೆ ನೀಡಿ ಆದ್ಯತೆ, ನೋಡಿ ಭಾರತವೇ ಬದಲಾಗುತ್ತೆ!
ಆದರೆ ಬದಲಾದ ಕಾಲಘಟ್ಟದಲ್ಲಿ ಕೆಲವು ಆಹಾರಗಳು ಜನಜೀವನದಿಂದ ಕಣ್ಮರೆಯಾಗುತ್ತಿವೆ. ಹೀಗಾಗಿ ಈ ಆಹಾರಗಳನ್ನು ನೆನಪಿಸುವ ಮತ್ತು ಇಂದಿನ ಪೀಳಿಗೆಗೆ ತುಳುನಾಡಿನ ಸಂಪ್ರದಾಯ, ಪರಂಪರೆಯಿಂದ ಬಂದ ಅಡುಗೆಗಳನ್ನು ಪರಿಚಯಿಸುವ ಸಲುವಾಗಿ ಮಂಗಳೂರಿನಲ್ಲಿ ಭಂಡಾರಿ ಸಂಘದಿಂದ 'ಆಟಿಡೊಂಜಿ ದಿನ' ಕಾರ್ಯಕ್ರಮವನ್ನು ನಗರದ ಮಲ್ಲಿಕಟ್ಟೆಯ ಸುಮಸದನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಮೇಯರ್ ಉದ್ಘಾಟನೆ
'ಆಟಿಡೊಂಜಿ ಕೂಟ' ಕಾರ್ಯಕ್ರಮವನ್ನು ಮೇಯರ್ ಕವಿತಾ ಸನಿಲ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಭಂಡಾರಿ ಸಮಾಜ ಸಂಘ (ರಿ.) ಕುಡ್ಲ ಹಾಗೂ ಭಂಡಾರಿ ಯುವ ವೇದಿಕೆ ಕುಡ್ಲ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಯಂ ನಾಗೇಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಶಾಸಕ ಗೋಪಾಲ್ ಭಂಡಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕರಿದ ತಿಂಡಿಯ ಘಮ
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಂಗಳೆಯರು ತಮ್ಮ ಮನೆಯಿಂದ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ತಂದಿದ್ದರು. ಎಲ್ಲವನ್ನೂ ಒಟ್ಟುಗೂಡಿಸಿದಾಗ ಭರ್ಜರಿ ತಿನಿಸಿಗಳ ರಾಶಿಯೇ ಬಂದು ಬಿದ್ದಿತ್ತು. ಜೀಗುಜ್ಜೆಯ ಪೋಡಿ (ಬಜ್ಜಿ), ಮರಕೆಸುವಿನ ಪೋಡಿ, ಪಗಿಲದ ಪೋಡಿ, ಇತರ ಕರಿದ ತಿನಿಸುಗಳು ಅಲ್ಲಿದ್ದವು.
ಮಳೆಗಾಲದ ತಿನಿಸುಗಳು
ಆಟಿ ತಿಂಗಳು ಮಳೆಗಾಲವಾದ್ದರಿಂದ ಜನರಿಗೆ ಕೆಲಸ ಇಲ್ಲದೆ ಕೈಯಲ್ಲಿ ಹಣ ಇಲ್ಲದಂತಾಗುತ್ತದೆ. ಆ ಸಂದರ್ಭಕ್ಕೆಂದೇ ಬೇಸಿಗೆ ಕಾಲದಲ್ಲಿ ತಿನಿಸುಗಳನ್ನು ಸಿದ್ದಪಡಿಸಿಟ್ಟುಕೊಳ್ಳಲಾಗುತ್ತದೆ. ಇವುಗಳನ್ನು ಪಿಂಗಾಣಿಯಿಂದ ಮಾಡಿದ ಭರಣಿಗಳಲ್ಲಿ ಸಂಗ್ರಹಿಸಿಡುತ್ತಾರೆ. ಕುರುಕಲು ತಿಂಡಿಗಳು, ಹಲಸಿನ ಹಪ್ಪಳ ಇವುಗಳಲ್ಲಿ ಸೇರಿವೆ. ಮಳೆಗಾಲ ಬರುತ್ತಿದ್ದಂತೆ ಇವುಗಳನ್ನು ಹೊರ ತೆಗೆದು ಬಳಸುತ್ತಾರೆ.
ಬಾಯಲ್ಲಿ ನೀರೂರಿಸುವ ಭಕ್ಷ್ಯಗಳು
ಹಲಸಿನ ಕಾಯಿಯನ್ನು ಬಿಡಿಸಿ ಬೇಸಿಗೆಯಲ್ಲೇ ಉಪ್ಪಿ ನೀರಿನಲ್ಲಿ ಹಾಕಿಡುತ್ತಾರೆ. ಇವುಗಳನ್ನು ಮಳೆಗಾಲದಲ್ಲಿ ತೆಗೆದು ವಿವಿಧ ರುಚಿ ರುಚಿಯಾದ ತಿಂಡಿಗಳನ್ನು ತಯಾರಿಸುತ್ತಾರೆ. ಇದಕ್ಕೆ ತುಳುವಿನಲ್ಲಿ ಉಪ್ಪಡ್ ಪಚ್ಚೀರ್ ಎನ್ನುತ್ತಾರೆ, ಅಂದರೆ ಉಪ್ಪಿನಲ್ಲಿ ಹಾಕಿದ ಹಲಸಿನ ತೊಳೆ ಎಂದರ್ಥ. ಇದರ ಜತೆಗೆ ಚಿತ್ರದಲ್ಲಿ ಅರಶಿನ ಎಲೆಯ ಸಿಹಿ ಕಡುಬನ್ನೂ ಕಾಣಬಹುದು. ಎಲೆಗೆ ಅಕ್ಕಿ ಹಿಟ್ಟು ಹಚ್ಚಿ ಅದಕ್ಕೆ ಮಧ್ಯೆ ಬೆಲ್ಲದಲ್ಲಿ ಮಿಶ್ರಣ ಮಾಡಿದ ತೆಂಗಿನಕಾಯಿಯ ತುರಿ ಇಟ್ಟರೆ ಅದರೆ ರುಚಿಗೆ ಯಾರ ಬಾಯಲ್ಲಾದರೂ ನೀರೂರದೇ ಇರದು.
ನಾಲಗೆಗೆ ರುಚಿ ರುಚಿಯ ತಿನಿಸು
ಕರಿ ಬೇವು ಸೊಪ್ಪಿನ ಚಟ್ನಿ, ಪತ್ರೊಡ್ಡೆ (ಕೆಸುವಿನಿಂದ ಮಾಡುವ ಖಾದ್ಯ), ಮಾವಿನ ಕಾಯಿ ಚಟ್ನಿ, ಉಪ್ಪು ನೀರಿನಲ್ಲಿ ಸಂಗ್ರಹಿಸಿಟ್ಟ ಮಿಡಿ ಸಾಂಬಾರ್ ಸೌತೆಕಾಯಿಯನ್ನು ತುಳುನಾಡಿನ ಜನರು ಮಳೆಗಾಲದಲ್ಲಿ ಆಹಾರವಾಗಿ ಬಳಸುತ್ತಾರೆ.
ನೈಸರ್ಗಿಕವಾಗಿ ಸಿಗುವ ವಸ್ತುಗಳೇ ಆಹಾರ
ಕೆಸುವಿನ ಎಲೆಯ ಗೊಜ್ಜು, ಕಳಿಲೆ (ಎಳೆ ಬಿದಿರು)ಯ ಪಲ್ಯ, ತಜಂಕ್ (ಚಟ್ಟೆ ಸೊಪ್ಪು)ನ ಪಲ್ಯ, ತಿಮರೆ (ಒಂದೆಲಗ)ಯ ಚಟ್ನಿ, ಅಂಬಟೆ ಕಾಯಿಯ ಸಾಂಬಾರು ಹೀಗೆ ಹಳ್ಳಿಯಲ್ಲಿ ಸಿಗುವ ಪದಾರ್ಥಗಳಿಂದಲೇ ಆಹಾರ ಸಿದ್ದಪಡಿಸಿ ಆಟಿ ತಿಂಗಳಲ್ಲಿ ಸೇವಿಸುತ್ತಾರೆ.
ವಿಧ ವಿಧದ ಆಹಾರ
ಮಸಾಲೆಯಲ್ಲಿ ಹಾಕಿದ ರೊಟ್ಟಿ, ಮುಳ್ಳು ಸೌತೆಕಾಯಿಯ ಸಿಹಿ ತಿನಿಸುಗಳನ್ನೂ ಮಳೆಗಾಲದಲ್ಲಿ ತಯಾರಿಸುತ್ತಾರೆ. ಹೀಗೆ ಮಳೆಗಾಲದಲ್ಲಿ ಹೆಚ್ಚಾಗಿ ಸುತ್ತ ಮುತ್ತ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಅಂಗಡಿ ಖರೀದಿಯಿಂದ ಇಲ್ಲಿನ ಜನ ದೂರ ಉಳಿಯುತ್ತಾರೆ. ಹೀಗೆ ನಾಲಗೆಗೂ ರುಚಿಯಾದ, ಜೇಬಿಗೂ ಹಗುರವಾಗ ಆಹಾರಗಳನ್ನು ಜನ ಪಡೆಯುತ್ತಾರೆ. ಇವು ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆಯೂ ಜತೆಗಿದೆ.