ಗೌರಿ ಹತ್ಯೆ ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನಿಂದ ಪ್ರತಿಭಟನೆ
ಮಂಗಳೂರ, ಸೆಪ್ಟೆಂಬರ್ 14: ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಈ ವೇಳೆ ಪ್ರತಿಭಟನಾಕಾರರು ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದರು.
In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಲೇಖಕಿ ಜ್ಯೋತಿ ಗುರುಪ್ರಸಾದ್, "ಗೌರಿ ಕೇವಲ ಪತ್ರಕರ್ತೆಯಲ್ಲ. ಆಕೆ ಪ್ರಗತಿಪರ ಚಿಂತಕಿ, ಸಮಾಜದ ಧ್ವನಿ, ಸಾಮಾಜಿಕ ಹೋರಾಟಗಾರ್ತಿ ಎಲ್ಲವೂ ಆಗಿದ್ದರು. ಆಕೆಯ ಹತ್ಯೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಅಭಿಪ್ರಾಯ ಭೇದ ಏನೇ ಇದ್ದರೂ ಅದನ್ನು ಮಾತುಕತೆ, ಚರ್ಚೆ, ಚಳವಳಿ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಃ ಹತ್ಯೆಯ ಮೂಲಕ ಬಾಯ್ಮುಚ್ಚಿಸುವುದಲ್ಲ," ಎಂದು ಕಿಡಿಕಾರಿದರು.

"ಹೇಡಿಗಳಷ್ಟೇ ಇಂತಹ ದುಷ್ಕೃತ್ಯ ಮಾಡಲು ಸಾಧ್ಯ. ಗೌರಿ ಲಂಕೇಶರು ಕಳೆದ ಒಂದೂವರೆ ದಶಕಗಳಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಮತ್ತು ಹೋರಾಟವನ್ನು ನಡೆಸಿದ್ದರು. ಅವರು ಮಾತ್ರವಲ್ಲದೆ, ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ಹಲವೆಡೆ ನಡೆಯುತ್ತಿದೆ. ಹಾಗಾಗಿ ಈ ಆಯಾಮವನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕೆಂದು," ಈ ಸಮಾವೇಶವು ಒತ್ತಾಯಿಸುತ್ತದೆ," ಎಂದು ಹೇಳಿದರು.
ಗೌರಿ ಲಂಕೇಶರ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ಮುಖಾಂತರ ತೀವ್ರಗೊಳಿಸಿ, ಕಾಲ ನಿಗದಿತವಾಗಿ ಮುಗಿಸಿ ಹಂತಕರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಎಂದರು.
ಎನ್ಡಬ್ಲ್ಯೂಎಫ್ ರಾಷ್ಟ್ರೀಯ ಸಮಿತಿ ಸದಸ್ಯೆ ಶಾಹಿದಾ ಅಸ್ಲಮ್, ಕೆ.ಸಿ.ರೋಡ್ನ ಝೀನತ್ ಎಜುಕೇಶನಲ್ ಟ್ರಸ್ಟ್ನ ಪ್ರಾಂಶುಪಾಲೆ ಮೆಹನಾಝ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications