ಮಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಸ್ಥಗಿತ, ಚಾಲಕರ ಪ್ರತಿಭಟನೆ
ಮಂಗಳೂರು, ಆ.09 : ಓಲಾ ಮತ್ತು ಉಬರ್ ಕಂಪನಿಗಳು ಟ್ಯಾಕ್ಸಿ ದರಗಳಲ್ಲಿ ಭಾರೀ ಇಳಿಕೆ ಮಾಡಿರುವುದರಿಂದ ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ನಷ್ಟ ಉಂಟಾಗುತ್ತಿದೆ. ಓಲಾ, ಊಬರ್ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಟ್ಯಾಕ್ಸಿ ಚಾಲಕರು ಪ್ರತಿಭಟನೆ ಆರಂಭಿಸಿದ್ದಾರೆ.
ಕಂಪೆನಿಗಳು ಅಪರೇಟರುಗಳಿಗೆ ನೀಡಲಾಗುವ ದರಗಳಲ್ಲಿ ಬದಲಾವಣೆ ಮಾಡದೆ ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿ, ಓಲಾ ಮತ್ತು ಉಬರ್ ಕಂಪನಿಗಳ ವಿರುದ್ಧ ಇಂದಿನಿಂದ ಮಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.

ನಗರದ ಸರ್ಕಾರಿ ನೌಕರರ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಡ್ರೈವರ್ಸ್ ಮತ್ತು ಓನರ್ಸ್ ಎಸೋಸಿಯೇಶನ್ ನೇತೃತ್ವದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮುಷ್ಕರ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್, 'ಪ್ರಯಾಣಿಕರಿಗೆ ಕೊಡುಗೆಗಳನ್ನು ನೀಡಲಿಕ್ಕಾಗಿ ಓಲಾ ಮತ್ತು ಉಬರ್ ಕಂಪನಿಗಳು ಸ್ಥಳೀಯ ಟ್ಯಾಕ್ಸಿ ಚಾಲಕರ ರಕ್ತ ಹೀರುತ್ತಿದೆ' ಎಂದರು.
ಸರಿಯಾದ ದರಗಳನ್ನು ಪಡೆಯಲಾಗದೆ ಅಪರೇಟರುಗಳ ಕುಟುಂಬ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಬ್ಯಾಂಕುಗಳಿಂದ ಸಾಲ ಮರುಪಾವತಿ ಮಾಡಲಾಗದೆ ಕಾರುಗಳು ಜಪ್ತಿಗೊಳಗಾಗುತ್ತಿದ್ದರೂ ಕಂಪೆನಿಗಳು ಹಠಮಾರಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಗರಾಜ ರೈ ಕಂಪನಿಯ ಮುಂದೆ ಅಂಗಲಾಚಿ ಬೇಡಿದರೂ ನಮ್ಮನ್ನು ಜೀತದಾಳುಗಳಂತೆ ದುಡಿಸುತ್ತಿವೆ, ಹೋರಾಟ ಮಾತ್ರ ನಮ್ಮಲ್ಲಿರುವ ಅಸ್ತ್ರ. ಇಂದಿನಿಂದ ನಮ್ಮ ಬೇಡಿಕೆ ಈಡೇರುವ ವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಹೇಳಿದರು.












Click it and Unblock the Notifications