ಚುನಾವಣೆ ಕಾವಿನ ಮಧ್ಯೆ ಕರಾವಳಿಯಲ್ಲಿ ಬಿಸಿಲಿನ ಝಳ
ಕರಾವಳಿಯಲ್ಲಿ ಚುನಾವಣೆಯ ಕಾವು ಏರುತ್ತಿದ್ದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಝಳದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದಂತೆ ರಾಜಕೀಯ ಪಕ್ಷಗಳ ನಾಯಕರ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಕೂಡ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷಗಳ ಪ್ರಚಾರದ ಭರಾಟೆ ಆರಂಭವಾಗಲಿದೆ.
ಈ ಮಧ್ಯೆ ಕರಾವಳಿಯ ಜಿಲ್ಲೆಯಲ್ಲಿ ಈ ಬಾರಿ ಚುನಾವಣಾ ಕಾವಿಗೆ ಬಿಸಿಲ ಝಳವೂ ಸಾಥ್ ನೀಡಲಿದೆ. ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ವರ್ಷ ಆರಂಭದಲ್ಲೇ ಉಷ್ಣಾಂಶ 35 ರಿಂದ 37 ಡಿಗ್ರಿ ಸೆಲ್ಸಿಯಸ್ ಗೆ ದಾಖಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದ್ದು, ಇದು ಅಭ್ಯರ್ಥಿಗಳ ಪಾಲಿಗೆ ದೊಡ್ಡ ಸವಾಲಾಗಲಿದೆ.

ಈಗಿನ ಬಿಸಿಲ ಝಳಕ್ಕೆ ಅರ್ಧ ಗಂಟೆ ಹೊರಗೆ ಹೋಗಿ ಬರುವುದು ಎಂದರೆ ದೊಡ್ಡ ಸಾಹಸದ ಕೆಲಸವೆನಿಸಿದೆ. ಇಲ್ಲಿಯವರೆಗೆ ಏಸಿ ರೂಮ್ ನಲ್ಲಿ, ಏಸಿ ಕಾರಿನಲ್ಲಿ ತಿರುಗಾಡುತ್ತಿದ್ದ ಸಚಿವ, ಶಾಸಕರ ಸಹಿತ ಅಭ್ಯರ್ಥಿಗಳ ಇನ್ನು ಮುಂದೆ ಸುಡುವ ಬಿಸಿಲಿಗೆ ಮೈಯೊಡ್ಡಿ ಜನರ ಬಳಿಗೆ ಹೋಗಬೇಕಿದೆ.
ವಿವಿಧ ಪಕ್ಷಗಳ ಮುಖಂಡರು ಚುನಾವಣಾ ಪ್ರಚಾರ ಮನೆ ಮನೆ ಭೇಟಿ ನೀಡಬೇಕಾಗಿದೆ. ಅಭ್ಯರ್ಥಿಗಳ ಜೊತೆ ಕಾರ್ಯಕರ್ತರಿಗೂ ಬಿಸಿಲಿನಲ್ಲಿ ಊರೂರು, ಮನೆ- ಮನೆಗಳಿಗೆ ಭೇಟಿ ನೀಡಬೇಕಾಗಿದೆ. ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಇದು ಅನಿವಾರ್ಯವಾಗಿದ್ದು, ಇಲ್ಲದಿದ್ದಲ್ಲಿ ಮತ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಕೇವಲ ನಗರಗಳಲ್ಲಿ ಮಾತ್ರ ಬಿಸಿಲಿನ ಸಮಸ್ಯೆ ಅಲ್ಲ, ಸದಾ ಹಸಿರಿನಿಂದ ಇರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲೂ ಬಿಸಿಲಿನದ್ದೇ ಸಮಸ್ಯೆಯಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಸುಳ್ಯ, ಸುಬ್ರಹ್ಮಣ್ಯದಂಥ ಘಟ್ಟದ ತಪ್ಪಲಿನ ಪ್ರದೇಶವೂ ಸುಡುವ ಕೆಂಡವಾಗಿ ಪರಿವರ್ತನೆಗೊಳ್ಳುತ್ತಿದೆ.
ಈ ಮಧ್ಯೆ ಹವಮಾನ ವೈಪರೀತ್ಯದಿಂದಾಗಿ ಸುರಿಯುತ್ತಿರುವ ಮಳೆ ತಂಪಿನ ಅನುಭವ ನೀಡಿದರೂ ಪ್ರಚಾರ ಕಾರ್ಯಕ್ಕೂ ಅಡ್ಡಿಯನ್ನು ಉಂಟು ಮಾಡುತ್ತಿದೆ. ಅಲ್ಲದೇ ಸಾಯಂಕಾಲ ಮಳೆಯಾದರೆ ಮರುದಿನ ಬಿಸಿಲಿನ ಝಳ ಮತ್ತಷ್ಟು ಹೆಚ್ಚಾಗಲಿದೆ. ಇಲ್ಲಿ ಒಂದು ಪಕ್ಷದವರಿಗೆ ಹೆಚ್ಚು ಬಿಸಿಲು, ಇನ್ನೊಂದು ಪಕ್ಷದವರಿಗೆ ಕಡಿಮೆ ಬಿಸಿಲು ಎಂದಿಲ್ಲ. ಎಲ್ಲ ಪಕ್ಷದವರಿಗೂ ಒಂದೇ ರೀತಿಯಾಗಿದ್ದು ನೀರು ಕುಡಿಯುವುದು ಅನಿವಾರ್ಯವಾಗಿದೆ.












Click it and Unblock the Notifications