ಸುಬ್ರಹ್ಮಣ್ಯ ದೇವಾಲಯದ ಹೆಸರು ಬಳಕೆ ತಡೆದು ಆದೇಶ ಹೊರಡಿಸಿದ ಸುಳ್ಯ ನ್ಯಾಯಾಲಯ
ಮಂಗಳೂರು, ನವೆಂಬರ್.06:ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವೆ ಸೃಷ್ಟಿಯಾಗಿರುವ ವಿವಾದ ಮತ್ತಷ್ಟು ಜಟಿಲಗೊಳ್ಳುತ್ತಲೇ ಇದೆ. ಈ ವಿವಾದ ಬಗೆಹರಿಯುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ.
ಈಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಮಠದ ಕುರಿತು ಸುಳ್ಯ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾಜ್ಞೆ ಈ ವಿವಾದವನ್ನು ಮತ್ತಷ್ಟು ಜಟಿಲಗೊಳಿಸಿದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಚಿತ್ರ, ಸೇವೆ, ದೇವರ ಫೋಟೋ ಹಾಗೂ ಕ್ಷೇತ್ರದ ಹೆಸರನ್ನು ಶ್ರೀ ಸಂಪುಟ ನರಸಿಂಹ ಮಠ ಬಳಸದಂತೆ ಸುಳ್ಯ ನ್ಯಾಯಾಲಯ ಆದೇಶ ಹೊರಡಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದೇವಳದ ಸೇವಾ ಪಟ್ಟಿಯಲ್ಲಿರುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷಾ ಬಲಿ ಹಾಗೂ ಇನ್ನಿತರ ಯಾವುದೇ ಸೇವೆಗಳನ್ನು ಸ್ಥಳೀಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನಡೆಸದಂತೆಯೂ ಹಾಗೂ ದೇವರ ಫೋಟೋ, ಆಲ್ಬಂಗಳು, ರಥ ಉತ್ಸವಾದಿಗಳು, ರಥೋತ್ಸವಗಳು ಮತ್ತು ಕ್ಷೇತ್ರದ ಹೆಸರನ್ನು ಯಾವುದೇ ಮಾಧ್ಯಮಗಳಲ್ಲಿ, ರಶೀದಿಗಳಲ್ಲಿ, ಫಲಕ ಇತ್ಯಾದಿಗಳಲ್ಲಿ ಮಠಾಧಿಪತಿಗಳು ಮತ್ತು ಸಂಬಂಧಿಸಿದ ಟ್ರಸ್ಟ್ ಗಳು ಬಳಸದಂತೆ ಸುಳ್ಯ ಕೋರ್ಟ್ ನಿರ್ಬಂಧಕಾಜ್ಞೆ ಹೊರಡಿಸಿದೆ.

ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟಿದ್ದು ಧಾರ್ಮಿಕ ದತ್ತಿ ಕಾಯಿದೆ ಅನ್ವಯಿಸುತ್ತದೆ. ಆ ಕಾರಣ ದೇವಾಲಯದ ಹೆಸರಿನಲ್ಲಿ ವೈಯಕ್ತಿಕ ಸೇವೆ, ಕಾಣಿಕೆ ಅಥವಾ ದೇಣಿಗೆ ಸಂಗ್ರಹ ಮಾಡುವುದು ಅಪರಾಧವಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿದೆ.

ದೇವಾಲಯದಲ್ಲಿ ನಡೆಯುತ್ತಿರುವ ಸೇವೆಗಳು ಸುಬ್ರಹ್ಮಣ್ಯ ಮಠದ್ದು ಆದರೆ ಸಂಪುಟ ನರಸಿಂಹ ಮಠದಲ್ಲಿ ನಡೆಸಲಾಗುತ್ತಿದೆ ಎಂದು ದೂರಿ ಸುಳ್ಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈ ಕುರಿತು ಎರಡು ಕಡೆಯ ವಾದ ಆಲಿಸಿರುವ ನ್ಯಾಯಾಲಯ ತಾತ್ಕಾಲಿಕ ತೀರ್ಪು ನೀಡಿದೆ.












Click it and Unblock the Notifications