'ಹಸು ಸತ್ತಾಗ ಗೊಂದಲ ಮಾಡಿದವರು ಹಸುಳೆ ಸತ್ತಾಗ ಸುಮ್ಮನಿರುವುದೇಕೆ?'
ಮಂಗಳೂರು, ಆಗಸ್ಟ್ 14: "ಕಲ್ಲಡ್ಕದ ಎರಡು ಖಾಸಗಿ ಶಾಲೆಗಳಿಗೆ ಅನುದಾನ ಕಡಿತಗೊಳಿಸಿರುವುದು ಸಣ್ಣ ವಿಚಾರ. ಕೆಲವರು ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ," ಎಂದು ಆರೋಗ್ಯ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಕಿಡಿಕಾರಿದರು.
ಮಂಗಳೂರಿನಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಲ್ಲಡ್ಕದ ಶಾಲೆಗಳಿಗೆ ಅನುದಾನ ಕಡಿತಗೊಳಿಸಿರುವುದು ಧಾರ್ಮಿಕ ಪರಿಷತ್ ಹಾಗೂ ಆ ದೇವಾಲಯದ ಆಡಳಿತ ಮಂಡಳಿಯ ನಿರ್ಧಾರ. ಇದರಲ್ಲಿ ಮುಖ್ಯಮಂತ್ರಿಯವರ ಪಾತ್ರ ಇಲ್ಲ," ಎಂದು ಹೇಳಿದರು. ಇಂತಹ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಅನುದಾನ ಕಡಿತಗೊಳಿಸಿರುವ ಬಗ್ಗೆ ಮುಜರಾಯಿ ಸಚಿವರಿಗೆ ಪತ್ರ ಬರೆದು ವಿವರಣೆ ಪಡೆದುಕೊಳ್ಳಲಿ ಎಂದವರು ಸಲಹೆ ನೀಡಿದರು.
ಆಹಾರ ಇಲಾಖೆಯಿಂದ ಪ್ರತಿ ವಿದ್ಯಾರ್ಥಿಗೆ 15 ಕೆಜಿ ಅಕ್ಕಿ ನೀಡಲಾಗುತ್ತಿದೆ. ಈ ಎರಡೂ ಶಾಲೆಗಳಿಗೆ ಅಕ್ಕಿ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೆ ಅಕ್ಕಿ ಪೂರೈಸಲಾಗುವುದು ಎಂದು ಅವರು ಈ ಸಂದರ್ಭ ದಲ್ಲಿ ಹೇಳಿದರು .
ಒಂದಲ್ಲ 10 ಅಮಿತ್ ಷಾ ಬರಲಿ
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಬಂದರೂ ಏನೂ ಪ್ರಯೋಜನವಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಅವರಿಂದ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ," ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು .
ಉಪೇಂದ್ರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ ಸಚಿವ ಯುಟಿ ಖಾದರ್ ಪ್ರತಿಯೊಬ್ಬರೂ ರಾಜಕೀಯಕ್ಕೆ ಬರಲು ಅವಕಾಶವಿದೆ ಎಂದು ಹೇಳಿದರು.
ಗೋರಖ್ ಪುರ್ ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಹಸು ಸತ್ತಾಗ ಗೊಂದಲ ಮಾಡಿದವರು ಹಸುಳೆ ಸತ್ತಾಗ ಸುಮ್ಮನಿರುವುದೇಕೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಹೊಣೆ ಹೊತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು.












Click it and Unblock the Notifications